ಯಾವಗಲ್ ಗ್ರಾಮ ಧಾರ್ಮಿಕ ಕಾರ್ಯಕ್ರಮ ಹಾಗೂ ಜಾತ್ರೆ ನಿರಂತರ ನಡೆಸಿ ನಾಡಿಗೆ ಅಧ್ಯಾತ್ಮದ ಸಂದೇಶ ನೀಡುತ್ತಿರುವುದು ಶ್ಲಾಘನೀಯ
ನರಗುಂದ: ಧರ್ಮವನ್ನು ನಾವು ರಕ್ಷಿಸಿದರೆ, ನಮ್ಮನ್ನು ಧರ್ಮ ರಕ್ಷಿಸುತ್ತದೆ. ದುಷ್ಟ ಶಕ್ತಿಗಳಿಂದ ಸನಾತನ ಧರ್ಮದ ನಾಶಕ್ಕೆ ಸಂಚು ನಡೆಯುತ್ತಲಿದೆ. ಅದು ಅಸಾಧ್ಯದ ಕಾರ್ಯ. ಹೆಚ್ಚೆಚ್ಚು ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಜಾತ್ರೆಗಳು ನಡೆದಾಗ ಸನಾತನ.ಧರ್ಮ ಉಳಿಯಲು ಸಾಧ್ಯ ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.
ಅವರು ತಾಲೂಕಿನ ಸಮೀಪದ ಯಾವಗಲ್ ಗ್ರಾಮದಲ್ಲಿ ಬಸವ ಜಯಂತಿ ಹಾಗೂ ಹೇಮಲಿಂಗೇಶ್ವರ ಜಾತ್ರಾಮಹೋತ್ಸವದ ಅಂಗವಾಗಿ ದಿ.ನಾಗಲಿಂಗಪ್ಪ ಅಯ್ಯಪ್ಪ ಘಾಳಿ ಟ್ರಸ್ಟ್ ಆಶ್ರಯದಲ್ಲಿ ಪಾರ್ವತವ್ವ ನಾಗಲಿಂಗಪ್ಪ ಘಾಳಿ ಸ್ಮರಣಾರ್ಥ ನಿರ್ಮಿಸಿರುವ ಅಡುಗೆ ಮನೆ ಹಾಗೂ ದಿ.ನಾಗಲಿಂಗಪ್ಪ ಅಯ್ಯಪ್ಪ ಘಾಳಿ ಮಹಾದ್ವಾರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಸನಾತನ ಧರ್ಮವು ಸಂಸ್ಕಾರ, ಸಂಸ್ಕೃತಿ ಕಲಿಸುವುದರೊಂದಿಗೆ ಉತ್ತಮ ವ್ಯಕ್ತಿತ್ವ ರೂಪಿಸಲು ಪ್ರೇರೇಪಣೆಯಾಗುತ್ತದೆ. ಯಾವಗಲ್ ಗ್ರಾಮ ಧಾರ್ಮಿಕ ಕಾರ್ಯಕ್ರಮ ಹಾಗೂ ಜಾತ್ರೆ ನಿರಂತರ ನಡೆಸಿ ನಾಡಿಗೆ ಅಧ್ಯಾತ್ಮದ ಸಂದೇಶ ನೀಡುತ್ತಿರುವುದು ಶ್ಲಾಘನೀಯ ಎಂದರು.
ಸಾನ್ನಿಧ್ಯ ವಹಿಸಿದ್ದ ತೋರಗಲ್ ಗಚ್ಚಿನಹಿರೇಮಠದ ಚನ್ನಮಲ್ಲ ಶಿವಾಚಾರ್ಯರು ಶ್ರೀಗಳ ಮಾತನಾಡಿ, ದುಡ್ಡಿನ ಬೆನ್ನು ಹತ್ತಿ ಹಾಳಾಗದೇ ಧರ್ಮದ ಬೆನ್ನು ಹತ್ತಿ ದೇವರಾಗಬೇಕು. ಧರ್ಮದಿಂದ ನಡೆದಾಗ ಮಾತ್ರ ಒಳಿತಾಗಲು ಸಾಧ್ಯ.ಎಲ್ಲರ ಏಳ್ಗೆಗೆ ಕಾರಣವಾದ ಘಾಳಿ ಮನೆತನ ಉತ್ತಮ ಕಾರ್ಯ ನಿರಂತರ ಮಾಡುತ್ತಿದೆ. ಧರ್ಮದ ಬೆನ್ನು ಹತ್ತಿ ಸರ್ವರ ಒಳಿತು ಬಯಸುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿ ನಾಗಲಿಂಗಪ್ಪ ಅಯ್ಯಪ್ಪ ಘಾಳಿ ಟ್ರಸ್ಟ್ ಅಧ್ಯಕ್ಷ ಗಂಗಾಧರ ಘಾಳಿ ಮಾತನಾಡಿ, ಜೀವನದಲ್ಲಿ ಸದ್ಗುಣ ಬೆಳೆಸಿಕೊಳ್ಳಬೇಕು. ಸಚ್ಚಾರಿತ್ರ್ಯವಂತರಾಗಿ ಅಂದುಕೊಂಡ ಗುರಿ ಸಾಧಿಸಬೇಕು. ತಂದೆ, ತಾಯಿಗಳನ್ನು ಪೋಷಿಸಿ ಅವರ ಋಣ ತೀರಿಸಬೇಕೆಂದು ಹೇಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.