ಮತಕ್ಷೇತ್ರ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧ: ಶಾಸಕಿ ಶಶಿಕಲಾ ಜೊಲ್ಲೆ

KannadaprabhaNewsNetwork | Published : Feb 26, 2025 1:04 AM

ಸಾರಾಂಶ

ಬೇನಾಡಿ-ಕುನ್ನೂರು ರಸ್ತೆ ಡಾಂಬರೀಕರಣಕ್ಕೆ ಮಂಜೂರಾದ ₹11.50 ಕೋಟಿ ಅನುದಾನದ ಗುದ್ದಲಿ ಪೂಜೆ ನೆರವೇರಿಸಿ ರಸ್ತೆ ಕಾಮಗಾರಿಯ ಶುಭ ಕಾರ್ಯಕ್ಕೆ ಚಾಲನೆ

ಕನ್ನಡಪ್ರಭ ವಾರ್ತೆ ನಿಪ್ಪಾಣಿ

ಮತಕ್ಷೇತ್ರವನ್ನು ಸರ್ವಾಂಗೀಣವಾಗಿ ಅಭಿವೃದ್ಧಿಪಡಿಸುವುದು ನಮ್ಮ ಆದ್ಯ ಕರ್ತವ್ಯ ಮತ್ತು ಗುರಿಯಾಗಿದೆ. ಅದನ್ನು ಪ್ರಾಮಾಣಿಕವಾಗಿ ಜೊಲ್ಲೆ ಕುಟುಂಬವು ಮಾಡುತ್ತಿದೆ ಎಂದು ಶಾಸಕಿ ಶಶಿಕಲಾ ಜೊಲ್ಲೆ ಭರವಸೆ ನೀಡಿದರು.

ಮತಕ್ಷೇತ್ರದ ವ್ಯಾಪ್ತಿಗೆ ಬರುವ ಬೇನಾಡಿ-ಕುನ್ನೂರು ರಸ್ತೆ ಡಾಂಬರೀಕರಣಕ್ಕೆ ಮಂಜೂರಾದ ₹11.50 ಕೋಟಿ ಅನುದಾನದ ಗುದ್ದಲಿ ಪೂಜೆ ನೆರವೇರಿಸಿ ರಸ್ತೆ ಕಾಮಗಾರಿಯ ಶುಭ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬೇನಾಡಿ- ಕುನ್ನೂರ ರಸ್ತೆ ಕಾಮಗಾರಿಗೆ ಈಗಾಗಲೇ ಚಾಲನೆ ದೊರೆತಿದ್ದು, ಈ ರಸ್ತೆ ಕಾಮಗಾರಿಗೆ ₹11.50 ಕೋಟಿಗಳ ಸಾಕಷ್ಟು ಅನುದಾನ ಮಂಜೂರು ಮಾಡಲಾಗಿದೆ. ರಸ್ತೆ ಕಾಮಗಾರಿ ಆರಂಭವಾದ ಬಳಿಕ ಉದ್ಘಾಟನಾ ಸಮಾರಂಭ ನಡೆಸಲಾಗುತ್ತಿದೆ. ಉತ್ತಮ ಗುಣಮಟ್ಟ ಹಾಗೂ ಆಧುನಿಕತೆ ಒಳಗೊಂಡ ಈ ರಸ್ತೆ ಕಾಮಗಾರಿಯು ನಡೆಯಲಿದೆ ಎಂದು ತಿಳಿಸಿದರು.ನಿಪ್ಪಾಣಿ ವಿಧಾನಸಭಾ ಕ್ಷೇತ್ರವು ತಮ್ಮ ಮನೆಯ ಮಗಳಾಗಿ ಗೌರವಿಸುವ ಸಂದರ್ಭದಲ್ಲಿ ನಾಯಕತ್ವದ ಅವಕಾಶವನ್ನು ತಮಗೆ ನೀಡಿತು. ಸತತ 3 ಬಾರಿ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಸಂದರ್ಭದಲ್ಲಿ ಸಾವಿರಾರು ಕೋಟಿ ರುಪಾಯಿಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗಿದೆ. ಸಂಸ್ಕಾರ, ಸಂಸ್ಕೃತಿ ಮತ್ತು ಅಭಿವೃದ್ಧಿಯ ಮೂಲಕ ನಮ್ಮ ಕೆಲಸ ಸೇವೆ ಮುಂದುವರೆದಿದ್ದು, ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವಾಗ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದರು.

ಈ ಹಿಂದೆ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳಿಗೂ ಈಗ ಮಾಡಿರುವ ಹಾಗೂ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳಿಗೆ ಇರುವ ವ್ಯತ್ಯಾಸವನ್ನು ಜನತೆ ಕಂಡುಕೊಳ್ಳಬೇಕು. ತಾವು ಹಾಗೂ ತಮ್ಮ ಕಾಲಾವಾಧಯಲ್ಲಿ ನಡೆದಿರುವ ಪ್ರತಿ ಅಭಿವೃಧಿಯ ಕಾರ್ಯಗಳು ಉತ್ತಮ ಗುಣಮಟ್ಟದಿಂದ ಕೂಡಿದ್ದಾಗಿವೆ.

ಕೃಷಿ ಅಭಿವೃದ್ಧಿಗಾಗಿ ಗುಡ್ಡಗಾಡು ಪ್ರದೇಶಗಳಲ್ಲಿ ಜಲ ಸಿಂಚನ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಇದರ ಪರಿಣಾಮವಾಗಿ ಇಂದು ಶೇಂಡೂರನಂತಹ ಗುಡ್ಡುಗಾಡು ಪ್ರದೇಶಗಳಲ್ಲಿಯೂ ಸಹ ಇಂದು ಬಾವಿ ತೋಡಿದಾಗ ಕೇವಲ 24 ಅಡಿಗೆ ನೀರು ದೊರೆಯುವಂತಾಗಿದೆ ಎಂದು ತಿಳಿಸಿದರು.

ಕ್ಷೇತ್ರದ ಯುವ ಪೀಳಿಗೆ ಸುಸಂಸ್ಕೃತರಾಗಲು ಮತ್ತು ಸಂಸ್ಕಾರವಂತರಾಗಲು ಸದಾ ವಿವಿಧ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಕ್ಷೇತ್ರದಲ್ಲಿ ಶಿಕ್ಷಣದ ಮೂಲಕವೂ ಪ್ರಗತಿ ಸಾಧಿಸಲು ಅಣ್ಣಾಸಾಹೇಬ ಜೊಲ್ಲೆ ವಸತಿ ಕಾಲೇಜು ಸ್ಥಾಪಿಸಲಾಗಿದೆ ಎಂದರು.

ಗ್ರಾಮೀಣ ಬಿಜೆಪಿ ಅಧ್ಯಕ್ಷ ಸಿದ್ಧು ನರಾಟೆ ಪ್ರಾಸ್ತಾವಿಕವಾಗಿ ಮಾತನಾಡಿ, ಕ್ಷೇತ್ರದಲ್ಲಿ ಜೊಲ್ಲೆ ದಂಪತಿ ನಾಯಕತ್ವದ ನಂತರ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮೆಲುಕು ಹಾಕಿದರು.

ಮೇಯರ್ ಸೋನಾಲ್ ಕೊಠಿಯಾ ಮಾತನಾಡಿ, ಜೊಲ್ಲೆ ದಂಪತಿ ಮೂಲಕ ನಿಪ್ಪಾಣಿ ಕ್ಷೇತ್ರಕ್ಕೆ ಅಭಿವೃದ್ಧಿಯ ಹೊಸ ರೂಪು ದೊರೆಯಿತು. ಕ್ಷೇತ್ರವನ್ನು ಆಕಾಶದೆತ್ತರಕ್ಕೆ ಕೊಂಡೊಯ್ಯುವ ಕಾರ್ಯ ಜೊಲ್ಲೆ ದಂಪತಿ ಮಾಡಿದ್ದಾರೆ ಎಂದು ಶ್ಲಾಘಿಸಿದರು.

ಹಾಲಶುಗರ ಅಧ್ಯಕ್ಷ ಎಂ.ಪಿ.ಪಾಟೀಲ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಈ ವೇಳೆ ಬೇನಾಡಿ ಗ್ರಾಮ ಪಂಚಾಯತಿ ಅಧ್ಯಕ್ಷ ಸತ್ಯಪ್ಪ ಹಜಾರೆ, ಉಪ ನಗರಾಧ್ಯಕ್ಷ ಸಂತೋಷ ಸಾಂಗಾವಕರ, ಹಾಲಶುಗರ ನಿರ್ದೇಶಕ ಅವಿನಾಶ ಪಾಟೀಲ, ಪ್ರಕಾಶ ಶಿಂಧೆ, ಸಮಿತ ಸಾಸನೆ, ರಾವಸಾಹೇಬ ಫರಾಳೆ, ಶ್ರೀಕಾಂತ ಬನ್ನೆ, ಮಿಥುನ್ ಪಾಟೀಲ್, ಕಿರಣ್ ನಿಕಾಡೆ, ನಗರ ಬಿಜೆಪಿ ಅಧ್ಯಕ್ಷ ಸೂರಜ್ ಖವ್ರೆ, ಯುವಾ ಮೋರ್ಚಾ ಅಧ್ಯಕ್ಷ ಪ್ರಶಾಂತ ಕೆಸ್ತಿ, ಅಕ್ಷಯ ಜಯಕರ್, ರಾಜು ಭದರಗಡೆ, ರಾಜು ಗುಂಡೆಷಾ, ರಾಜೇಶ್ ಕೊಠಡಿಯಾ, ವಿಜಯ್ ಟವಳೆ, ನಾಗರಿಕರು, ಮಹಿಳೆಯರು ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಅರುಣ ಜಾವಿರ ಸ್ವಾಗತಿಸಿದರು.

Share this article