ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ತಾಲೂಕಿನ ಮುಂಡುಗದೊರೆ, ಕೊಡಿಯಾಲ, ತಡಗವಾಡಿ, ಅರಕೆರೆ, ಬಳ್ಳೇಕೆರೆ, ಮತ್ತು ಗಾಮನಹಳ್ಳಿ ಪಂಚಾಯ್ತಿಗಳಲ್ಲಿ ಸಂಚರಿಸಿದ ರಥ ಮುಂಡುಗದೊರೆ ಗ್ರಾಮಕ್ಕೆ ಆಗಮಿಸಿದಾಗ ಎಲ್ಲ ಸಮುದಾಯದ ಮುಖಂಡರು ಪೂಜಾ ಕುಣಿತ, ಬ್ಯಾಂಡ್ ಸೆಟ್ ಮತ್ತು ಕುಂಭಮೇಳಗಳೊಂದಿಗೆ ಬರಮಾಡಿಕೊಂಡರು.
ಜಾಥಾ ಸಂಚರಿಸಿದ ಗ್ರಾಪಂ ವ್ಯಾಪ್ತಿಯಲ್ಲಿನ ಶಾಲಾ ಮಕ್ಕಳಿಗೆ ರಸಪ್ರಶ್ನೆ, ಪ್ರಬಂಧ, ಚರ್ಚಾ ಸ್ಪರ್ಧೆಗಳನ್ನು ಏರ್ಪಡಿಸಿ ಸಮಾಜ ಕಲ್ಯಾಣ ಇಲಾಖೆ ಮತ್ತು ಪಂಚಾಯ್ತಿಯಿಂದ ಬಹುಮಾನ ವಿತರಣೆ ಮಾಡಲಾಯಿತು. ಸಾರ್ವಜನಿಕರಿಗೆ ಸಂವಿಧಾನದ ಮಹತ್ವ, ಪ್ರಜೆಗಳಿಗೆ ನೀಡಿರುವ ಹಕ್ಕುಗಳು ಹಾಗೂ ಜವಾಬ್ದಾರಿಗಳ ಬಗ್ಗೆ ಸಮಾಜ ಕಲ್ಯಾಣ ಇಲಾಖೆಯಿಂದ ಅರಿವು ಮೂಡಿಸಲಾಯಿತು.ಜಾಥಾ ಸಾಗುವ ದಾರಿಯುದ್ದಕ್ಕೂ ವಿವಿಧ ಕಲಾ ತಂಡಗಳಿಂದ ಪೂಜಾ ಕುಣಿತ, ಡೊಳ್ಳು ಕುಣಿತ, ಕಂಸಾಳೆ ನತ್ಯ, ಕುಂಭ ಮೇಳಗಳು ಮತ್ತು ಶಾಲಾ ವಿದ್ಯಾರ್ಥಿಗಳ ಬ್ಯಾಂಡ್ ಸೆಟ್ ವಾದ್ಯಗಳು ಜಾಥಾಕ್ಕೆ ಮೆರುಗು ನೀಡಿದವು. ಶಾಲಾ ಪುಟಾಣಿಗಳ ರಾಷ್ಟ್ರ ನಾಯಕರ ವೇಷ ಭೂಷಣವು ಎಲ್ಲರ ಗಮನ ಸೆಳೆಯುತ್ತಿದ್ದು ವಿಶೇಷವಾಗಿತ್ತು.