ಧಾರವಾಡ: ಜಿಲ್ಲೆಯಾದ್ಯಂತ ಜ. 26 ರಿಂದ ಫೆ. 24ರವರೆಗೆ ಸಂವಿಧಾನದ ಮೌಲ್ಯಗಳು ಮತ್ತು ಆಶಯಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಸಂವಿಧಾನ ಜಾಗೃತಿ ಜಾಥಾ ನಡೆಯಲಿದೆ. ಜಿಲ್ಲೆಯ ಎಲ್ಲ 146 ಗ್ರಾಪಂಗಳಲ್ಲಿ ಸಂಚರಿಸಲಿದ್ದುಮ ಎಲ್ಲ ಅಧಿಕಾರಿಗಳು ಜೊತೆಗೂಡಿ ಜಾಗೃತಿ ಜಾಥಾ ಹಾಗೂ ಸ್ತಬ್ಧಚಿತ್ರ ಜಾಥಾವನ್ನು ಅಚ್ಚುಕಟ್ಟಾಗಿ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಸಭಾಂಗಣದಲ್ಲಿ ಗುರುವಾರ ಸಂವಿಧಾನ ಜಾಗೃತ ಜಾಥಾ ಕುರಿತು ಅಧಿಕಾರಿಗಳು ಹಾಗೂ ವಿವಿಧ ಮುಖಂಡರುಗಳ ಸಭೆಯಲ್ಲಿ ಮಾತನಾಡಿ, ಭಾರತ ಸಂವಿಧಾನದ ಮಹತ್ವ, ಸಂವಿಧಾನವು ನೀಡಿರುವ ಹಕ್ಕು, ಸ್ವಾತಂತ್ರ್ಯಗಳು ಮತ್ತು ಸಂವಿಧಾನದಿಂದಲೇ ಭಾರತದ ಮತ್ತು ರಾಜ್ಯದ ಆರ್ಥಿಕ, ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಸರ್ವಾಂಗೀಣ ಅಭಿವೃದ್ಧಿ ಎಂಬ ಸಂದೇಶ ಎಲ್ಲರಿಗೂ ತಿಳಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಗ್ರಾಪಂ ಕೇಂದ್ರ ಸ್ಥಾನದಲ್ಲಿ ಹಾಗೂ ನಗರ ಪಟ್ಟಣಗಳಲ್ಲಿ ಈ ಜಾಥಾ ನಡೆಯಲಿದೆ ಎಂದರು.ಜ.26 ರಂದು ಜಿಲ್ಲೆಯ ಆರ್.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ ಧ್ವಜಾರೋಹಣದ ನಂತರ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡುವುದಾಗಿ ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಅಪರ ನಿರ್ದೇಶಕ ಅಲ್ಲಾಬಕಾಷ ಎಂ.ಎಸ್. ಮಾತನಾಡಿ, ಸಂವಿಧಾನ ಜಾಗೃತಿ ಜಾಥಾದ ವೇಳಾಪಟ್ಟಿಯನ್ನು ತಹಸೀಲ್ದಾರ ಹಾಗೂ ತಾಪಂ ಅಧಿಕಾರಿಗಳಿಗೆ ಮುಂಚಿತವಾಗಿ ನೀಡಲಾಗುವುದು. ಆಯಾ ಗ್ರಾಪಂಗೆ ಸ್ತಬ್ಧಚಿತ್ರ ಆಗಮಿಸಿದಾಗ ಪಿಡಿಓ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಅದನ್ನು ಬರಮಾಡಿಕೊಂಡು ಸಂವಿಧಾನ ಕುರಿತು ಜಾಗೃತಿ ಮೂಡಿಸಬೇಕೆಂದು ಹೇಳಿದರು. ಪ್ರಭಾರ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಉಪ ಪೊಲೀಸ್ ಆಯುಕ್ತ ರಾಜೀವ ಎಂ, ಸಭೆಯಲ್ಲಿದ್ದರು.