ಗದಗ: ಭಾರತ ಸಂವಿಧಾನ ಜಗತ್ತಿನಲ್ಲಿಯೇ ಶ್ರೇಷ್ಠವಾದದ್ದು, ರಾಷ್ಟ್ರದ ಬದುಕು ಹೇಗಿರಬೇಕು, ಜನಸೇವೆ, ನಮ್ಮ ಹಕ್ಕುಗಳ ಕುರಿತು ನಮ್ಮ ಸಂವಿಧಾನದ ಪೀಠಿಕೆಯಿಂದ ಅರಿತುಕೊಂಡು ಸಂವಿಧಾನದ ಸದಾಶಯಗಳನ್ನು ಈಡೇರಿಸಲು ಮುಂದಾಗುವಂತೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಹೇಳಿದರು.ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಜರುಗಿದ ಸಂವಿಧಾನದ ಪೀಠಿಕೆ ಮತ್ತು ಕಾರ್ಯಗಳು ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಸಂವಿಧಾನ ಕಥೆ ಪುಸ್ತಕ ಅಲ್ಲ, ಅದು ನಮ್ಮ ಬದುಕು, ನಮ್ಮ ಹಕ್ಕುಗಳನ್ನು ತಿಳಿಸುವ, ಬಲ ನೀಡುವ ಮಹಾನ ಶಕ್ತಿ ಆಗಿದೆ ಎಂದರು.
ವೈವಿಧ್ಯಮಯವಾದಂತಹ ನಮ್ಮ ನಾಡನ್ನು ಸಾಮಾಜಿಕ ನ್ಯಾಯ, ಪ್ರತಿಯೊಬ್ಬರಿಗೂ ತಮ್ಮದೇ ಆದ ಹಕ್ಕನ್ನು ನಮ್ಮ ಸಂವಿಧಾನ ನೀಡಿದೆ. ೧೨ನೇ ಶತಮಾನದಲ್ಲಿ ಬಸವಣ್ಣನವರು ಸ್ತ್ರೀ ಸ್ವಾತಂತ್ರ್ಯ ಕುರಿತು ತಿಳಿಸಿದ್ದರು. ಆದರೂ ಮನೆಯ ಹೆಣ್ಣು ಮಕ್ಕಳನ್ನು ಮನೆಯಿಂದ ಆಚೆ ಕಳುಹಿಸುತ್ತಿರಲಿಲ್ಲ. ಸಂವಿಧಾನದಲ್ಲಿ ತಿದ್ದುಪಡಿ ತರುವ ಮೂಲಕ ಮೀಸಲಾತಿಯನ್ನು ಜಾರಿಗೊಳಿಸಿ ಮಹಿಳೆಯರ ಕೈಗೆ ಅಧಿಕಾರ ನೀಡಲಾಗಿದೆ ಎಂದರು.ನಮ್ಮ ಸಂವಿಧಾನ ಶ್ರೇಷ್ಠ ಹಾಗೂ ಶಕ್ತಿಯುತವಾಗಿದೆ. ಜಾತಿ ವ್ಯವಸ್ಥೆಯಿಂದ ಗಲೀಜು ಆಗಿರುವ ಸಮಾಜವನ್ನು ತಿದ್ದುವ ಕಾರ್ಯ ಆಗಬೇಕಾಗಿದೆ. ಸಮಾಜದಲ್ಲಿ ಇನ್ನೂ ಕೂಡ ಅಸ್ಪೃಶ್ಯತೆ ಜೀವಂತವಾಗಿದ್ದು ಇದನ್ನು ತೊಡೆದು ಹಾಕುವ ಕಾರ್ಯವಾಗಬೇಕಾಗಿದೆ. ಸಮಾಜದಲ್ಲಿ ಸಮಾನತೆ ಬರಲು ಮನಸ್ಸುಗಳು ಕೂಡಬೇಕು. ಈ ಕುರಿತು ಸಂವಿಧಾನದಲ್ಲಿ ಸ್ಪಷ್ಟಪಡಿಸಲಾಗಿದೆ. ಅಸ್ಪೃಶ್ಯತೆ ನಿವಾರಣೆಗೆ ಪಂಚಾಯತಗಳಿಗೆ ಹೆಚ್ಚಿನ ಜವಾಬ್ದಾರಿಗಳನ್ನು ನೀಡಲಾಗಿದೆ. ಸಂವಿಧಾನದ ತಿಳುವಳಿಕೆ ಕೊರತೆಯಿಂದಾಗಿ ಸಮಾಜದಲ್ಲಿ ತಾರತಮ್ಯನೀತಿ ಅನುಸರಿಸಲಾಗುತ್ತಿದ್ದು ಪ್ರತಿಯೊಬ್ಬರು ಸಂವಿಧಾನದ ಕುರಿತು ಅರಿತುಕೊಳ್ಳುವದು ಮುಖ್ಯವಾಗಿದೆ. ಸಂವಿಧಾನದಲ್ಲಿ ನೀಡಿರುವ ಹಕ್ಕನ್ನು ಪ್ರತಿಯೊಬ್ಬರು ಪಡೆದುಕೊಳ್ಳುತ್ತಾರೆ ಹೊರತು ಸಂವಿಧಾನದಲ್ಲಿ ತಿಳಿಸಿರುವ ಕರ್ತವ್ಯಗಳನ್ನು ಪಾಲಿಸಲಾಗುತ್ತಿಲ್ಲ, ಈ ಕುರಿತು ಪ್ರತಿಯೊಬ್ಬರು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದರು.
ದೇಶದಲ್ಲಿ ಬಡತನ ಶಾಪದಂತಿದ್ದು, ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿದ್ದ ೧.೧೦ಲಕ್ಷಕ್ಕೂ ಹೆಚ್ಚು ಕುಟುಂಬಗಳನ್ನು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರವು ಮೇಲೆತ್ತುವಂತಹ ಕ್ರಾಂತಿಕಾರಕ ಬದಲಾವಣೆ ಮಾಡಿದೆ. ಸಂವಿಧಾನವನ್ನು ಕಥೆ ಪುಸ್ತಕದಂತೆ ಭಾವಿಸದೇ ಪ್ರತಿಯೊಬ್ಬರು ಸಂವಿಧಾನದ ಸದಾಶಯಗಳಂತೆ ನಡೆದುಕೊಳ್ಳುವ ಮೂಲಕ ದೇಶ ಕಟ್ಟುವ ಕಾರ್ಯವಾಗಬೇಕು. ಸಂವಿಧಾನ ಪೀಠಿಕೆ ಓದಿ ಅದರಂತೆ ನಡೆದುಕೊಂಡು ತಾವುಗಳು ಶ್ರೇಷ್ಠ ವ್ಯಕ್ತಿಗಳಾಗಬೇಕು ಎಂದು ಹೇಳಿದರು.ರೋಣ ಶಾಸಕ ಜಿ.ಎಸ್.ಪಾಟೀಲ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ದೊರೆತು ೭೫ ವರ್ಷಗಳು ಗತಿಸಿದ್ದರೂ ಕೂಡ ದೇಶದಲ್ಲಿ ಅಷ್ಟೊಂದು ಸಾಧನೆ ಆಗಿಲ್ಲ. ದೇಶದ ಏಕತೆಯನ್ನು ಸಂವಿಧಾನ ಕರೆದೊಯ್ಯುತ್ತಿದೆ. ಸಮಾಜ ಸುಧಾರಣೆಯಲ್ಲಿ ಮಹಿಳೆಯರ ಪಾತ್ರ ಅತೀ ಪ್ರಮುಖವಾಗಿದ್ದು, ಗಾಂಧೀಜಿ ಅವರ ಗ್ರಾಮ ಸ್ವರಾಜ್ದ ಕನಸನ್ನು ನನಸಾಗಿಸಲು ಪ್ರತಿಯೊಬ್ಬರು ಸಂವಿಧಾನವನ್ನು ಅರಿತು ಅದರಂತೆ ನಡೆದುಕೊಳ್ಳಬೇಕು ಎಂದರು.
ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ನ್ಯಾಯಾಂಗ, ಕಾರ್ಯಾಂಗ ಹಾಗೂ ಶಾಸಕಾಂಗವು ಸಂವಿಧಾನದ ಅಡಿಯಲ್ಲಿಯೇ ಕಾರ್ಯ ನಿರ್ವಹಿಸುತ್ತವೆ. ನಮ್ಮ ದೇಶದ ಪವಿತ್ರ ಸಂವಿಧಾನವನ್ನು ಅರಿತು ಸದೃಢ ರಾಷ್ಟ್ರ ನಿರ್ಮಾಣಕ್ಕೆ ಪ್ರತಿಯೊಬ್ಬರು ಮುಂದಾಗಬೇಕು. ಸಂವಿಧಾನದಲ್ಲಿನ ತಿದ್ದುಪಡಿಯ ಮೂಲಕ ಮಹಿಳೆಯರು ಅಧಿಕಾರದ ಚುಕ್ಕಾಣಿಯನ್ನು ಹಿಡಿದಿದ್ದು ಸಂವಿಧಾನ ನೀಡಿದ ಹಕ್ಕು ಹಾಗೂ ಕರ್ತವ್ಯಗಳನ್ನು ಸಮರ್ಪಕವಾಗಿ ನಿರ್ವಹಿಸುವುದರ ಮೂಲಕ ಸುಂದರ ಸಮಾಜ ನಿರ್ಮಾಣಕ್ಕೆ ಮುಂದಾಗುವಂತೆ ತಿಳಿಸಿದರು.ಕೇರಳದ ಲೋಕಲ್ ಸೆಲ್ಫ ಗವರ್ನಮೆಂಟ್ ಜಂಟಿ ನಿರ್ದೇಶಕ ಸುದೇಶನ ಸಂವಿಧಾನದ ಪೀಠಿಕೆ ಹಾಗೂ ಕಾರ್ಯಗಳು ಕುರಿತು ವಿಶೇಷ ಉಪನ್ಯಾಸ ನೀಡಿದರು. ಹುಲಕೋಟಿ ಸಹಕಾರ ರೇಡಿಯೋ ನಿರ್ದೇಶಕ ಜೆ.ಕೆ. ಜಮಾದಾರ ಅವರು ಸುದೇಶನ ಅವರ ಉಪನ್ಯಾಸವನ್ನು ಕನ್ನಡಕ್ಕೆ ಭಾಷಾಂತರಿಸಿದರು.
ಈ ವೇಳೆ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್., ಜಿಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಮಾಜಿ ಶಾಸಕ ಡಿ.ಆರ್. ಪಾಟೀಲ, ಮಾಜಿ ಜಿಪಂ ಅಧ್ಯಕ್ಷ ವಾಸಣ್ಣ ಕುರಡಗಿ, ಚುನಾಯಿತ ಜನಪತ್ರಿನಿಧಿಗಳು, ಮಹಿಳಾ ಚುನಾಯಿತ ಜನಪತ್ರಿನಿಧಿಗಳು, ಗಣ್ಯರು, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.