₹13 ಕೋಟಿ ವೆಚ್ಚದಲ್ಲಿ 60 ಸಮುದಾಯ ಭವನಗಳನ್ನು ನಿರ್ಮಿಸುವ ಯೋಜನೆ ಸಿದ್ಧಗೊಂಡಿದೆ. ಮುಂದಿನ ಕೆಲ ದಿನಗಳಲ್ಲಿ ಎಲ್ಲ ಸಮುದಾಯ ಭವನಗಳಿಗೂ ಶಂಕುಸ್ಥಾಪನೆ
ಕನ್ನಡಪ್ರಭ ವಾರ್ತೆ ಕಾಗವಾಡ
ರಾಜ್ಯ ಸರ್ಕಾರದ ₹25 ಕೋಟಿ ವಿಶೇಷ ಅನುದಾನದಲ್ಲಿ ₹12 ಕೋಟಿ ರಸ್ತೆ ಅಭಿವೃದ್ಧಿಗೆ ಹಾಗೂ ₹13 ಕೋಟಿಯಲ್ಲಿ ಸಮುದಾಯ ಭವನ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಕಾಗವಾಡ ಶಾಸಕ ರಾಜು ಕಾಗೆ ಹೇಳಿದರು.
ಕಾಗವಾಡ ಮತಕ್ಷೇತ್ರದ ಗುಂಡೇವಾಡಿ ಗ್ರಾಮದಲ್ಲಿ ಕಾಡಸಿದ್ದೇಶ್ವರ ದೇವಸ್ಥಾನದದಲ್ಲಿ ಸಮುದಾಯ ಭವನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ₹13 ಕೋಟಿ ವೆಚ್ಚದಲ್ಲಿ 60 ಸಮುದಾಯ ಭವನಗಳನ್ನು ನಿರ್ಮಿಸುವ ಯೋಜನೆ ಸಿದ್ಧಗೊಂಡಿದೆ. ಮುಂದಿನ ಕೆಲ ದಿನಗಳಲ್ಲಿ ಎಲ್ಲ ಸಮುದಾಯ ಭವನಗಳಿಗೂ ಶಂಕುಸ್ಥಾಪನೆ ನೆರವೇರಿಸುವುದಾಗಿ ಹೇಳಿದರು.
₹12 ಕೋಟಿ ಅನುದಾನದಲ್ಲಿ ಮತಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಗ್ರಾಮೀಣ ರಸ್ತೆಗಳ ನಿರ್ಮಾಣ ಕಾಮಗಾರಿಗಳು ಪ್ರಾರಂಭಗೊಂಡಿವೆ. ಕೆಲ ತಿಂಗಳುಗಳಲ್ಲಿ ಪೂರ್ಣಗೊಳ್ಳಲಿವೆ. ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆಯ ಪ್ರಥಮ ಹಂತದ ಕಾಮಗಾರಿ ಪೂರ್ಣಗೊಂಡು ಮದಭಾವಿ ಮೂಲಕ ಅರಳಿಹಟ್ಟಿವರೆಗೆ ಕಾಲುವೆ ನೀರು ತಲುಪಿದೆ. ಎರಡನೇ ಹಂತದ ಕಾಮಗಾರಿಯೂ ಕೆಲವೇ ತಿಂಗಳಲ್ಲಿ ಮುಕ್ತಾಯಗೊಳ್ಳುತ್ತದೆ ಎಂದು ತಿಳಿಸಿದರು.
ಗ್ರಾಮಸ್ಥರ ಪರವಾಗಿ ಘುಳಪ್ಪ ಜತ್ತಿ, ಶಿವಾನಂದ ಗೊಲಭಾಂವಿ ಅವರು ಶಾಸಕ ರಾಜು ಕಾಗೆ ಹಾಗೂ ಜಿಪಂ ಅಭಿಯಂತರ ವೀರಣ್ಣ ವಾಲಿಯವರನ್ನು ಸನ್ಮಾನಿಸಿದರು.
ಶಾಸಕ ರಾಜು ಕಾಗೆ ಅವರು, ಅಬ್ಬಿಹಾಳದಲ್ಲಿ ಮರಗುಬಾಯಿ ದೇವಸ್ಥಾನ, ಮಾಯನಟ್ಟಿಯಲ್ಲಿ ಹನುಮಾನ ಮಂದಿರ, ಗುಂಡೇವಾಡಿಯ ಕಾಡಸಿದ್ಧೇಶ್ವರ ಮಠ, ಬಳ್ಳಿಗೇರಿಯಲ್ಲಿ ಬಸವಣ್ಣ ದೇವಸ್ಥಾನ, ಮಲಾಬಾದ ಗ್ರಾಮದ ವಿಠರಾಯ ದೇವಸ್ಥಾನ, ಪಾಂಡೇಗಾಂವ ಗ್ರಾಮದ ಬಿರೋಬಾ ದೇವಸ್ಥಾನದಲ್ಲಿ ಸಮುದಾಯ ಭವನಗಳ ಕಾಮಗಾರಿಗಳಿಗೆ ಹಾಗೂ ಅನಂತಪುರ ಗ್ರಾಮದ ಮುಸ್ಲಿಂ ಸಮುದಾಯದ ಶಾದಿಮಹಲ್, ಪಾರ್ಥನಹಳ್ಳಿಯಲ್ಲಿ ಶಾದಿ ಮಹಲ್ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.