ಕನ್ನಡಪ್ರಭ ವಾರ್ತೆ ಕುಣಿಗಲ್
ಹುತ್ರಿ ದುರ್ಗವನ್ನು ಆಳಿ ಅಭಿವೃದ್ಧಿಪಡಿಸಿದ ಹಾಗೂ ಕುಣಿಗಲ್ ಬೆಳವಣಿಗೆಗೆ ಕಾರಣರಾದ ಕೆಂಪೇಗೌಡರ ಪ್ರತಿಮೆಯನ್ನು ಪ್ರತಿಷ್ಠಾಪನೆ ಮಾಡಲಾಗುವುದು ಎಂದು ಕುಣಿಗಲ್ ಶಾಸಕ ಡಾ. ರಂಗನಾಥ ತಿಳಿಸಿದ್ದಾರೆ.ಕುಣಿಗಲ್ ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ತಾಲೂಕು ಆಡಳಿತದ ವತಿಯಿಂದ ಏರ್ಪಡಿಸಿದ್ದ ಕೆಂಪೇಗೌಡ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದರು.
ಕೆಂಪೇಗೌಡರು ಹೋರಾಟ ಮನೋಭಾವದ ವ್ಯಕ್ತಿ ಆಗಿದ್ದರು. ಜನಪರ ಕಾಳಜಿ ಹಾಗೂ ಪ್ರತಿಯೊಬ್ಬರಲ್ಲೂ ಇದ್ದಂಥ ವಿಶ್ವಾಸ ಹಾಗೂ ಅವರ ಆಡಳಿತ ವೈಖರಿಯಿಂದ 500 ವರ್ಷ ಕಳೆದರೂ ಅವರನ್ನು ನಾವು ದೇವರಂತೆ ಪೂಜಿಸುತ್ತಾ ಬಂದಿದ್ದೇವೆ. ಅವರ ನಿಜವಾದ ತತ್ವ- ಸಿದ್ಧಾಂತಗಳು ಇಂದಿಗೂ ಕೂಡ ಜೀವಂತವಾಗಿವೆ ಎಂದರು.ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವ ಬೆಂಗಳೂರನ್ನು ಅಂದು ನಿರ್ಮಾಣ ಮಾಡಲು ಅವರಲ್ಲಿದ್ದ ದೂರ ದೃಷ್ಟಿ ಹಾಗೂ ಬೃಹದಾಕಾರದ ಯೋಜನೆಗಳ ಅನುಷ್ಠಾನದ ಫಲವಾಗಿ ಎಲ್ಲಾ ಕೋಮಿನವರಿಗೂ, ಧರ್ಮದವರಿಗೂ, ಕುಶಲಕರ್ಮಿಗಳಿಗೂ ಪ್ರತ್ಯೇಕವಾದ ವ್ಯವಸ್ಥೆಯನ್ನು ಮತ್ತು ಮೂಲಭೂತ ಸೌಕರ್ಯವನ್ನು ಕಲ್ಪಿಸಿದ ಮಹಾಪುರುಷ ಕೆಂಪೇಗೌಡ ಎಂದರು.
ಮನುಷ್ಯ ಸಾಧನೆ ಮಾಡುವುದಾದರೆ ಕೆಂಪೇಗೌಡರ ರೀತಿ ಸಾಧನೆ ಮಾಡಬೇಕು. ಅಂತಹ ಒಳ್ಳೆಯ ಕೆಲಸಗಳನ್ನು ಚಿಕ್ಕದು ದೊಡ್ಡದು ಎಂಬ ಭೇದಭಾವ ಇಲ್ಲದೆ ಸಾರ್ವಜನಿಕರ ಜೊತೆಯಲ್ಲಿ ಮಾಡಿದಾಗ ಬದುಕು ಸಾರ್ಥಕವಾಗುತ್ತದೆ ಎಂದರು.ಇಂದು ಬೆಂಗಳೂರು ಕೆಂಪೇಗೌಡ, ಕುಣಿಗಲ್ ಕೆಂಪೇಗೌಡ, ಮಾಗಡಿ ಕೆಂಪೇಗೌಡ ಎಂಬ ಹಲವಾರು ನಾಮಗಳಿಂದ ಗುರುತಿಸಬಹುದು. ಆದರೆ ಕೆಂಪೇಗೌಡನ ವಂಶಸ್ಥರು ಮಾಡಿದ ಸಾಧನೆಯು ಕಟ್ಟಿದ ಕೋಟೆ, ನೀರಾವರಿ ವ್ಯವಸ್ಥೆ, ಚಟುವಟಿಕೆ ಎಲ್ಲವೂ ಕೂಡ ಇಂದಿನ ರಾಜಕಾರಣಿಗಳಿಗೆ ಮಾದರಿ ಆಗುತ್ತಿವೆ ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅರೆ ಶಂಕರ ಮಠದ ಸಿದ್ದರಾಮಯ್ಯ ಚೈತನ್ಯ ಸ್ವಾಮೀಜಿ, ಕೆಂಪೇಗೌಡರು ತನ್ನ ಆಡಳಿತ ಅವಧಿಯಲ್ಲಿ ಉತ್ತಮ ಕೆಲಸಗಳನ್ನು ಮಾಡಿದ್ದು, ಕುಣಿಗಲ್ ಭಾಗದ ಜನ ಅವರ ಋಣ ತೀರಿಸಲು ಸಾಧ್ಯವಿಲ್ಲ ಎಂದರು.ತಲಕಾಡು ಚಿಕ್ಕರಂಗೇಗೌಡ ಮಾತನಾಡಿ, ಕೆಂಪೇಗೌಡರ ಮನೆಯ ಸೊಸೆ ನಿರ್ಮಿಸಿದ್ದ ಶೃಂಗಾರ ಸಾಗರ ಎಂಬ ಕೆರೆ ಹಾಗೂ ಕುಣಿಗಲ್ ಪಟ್ಟಣದ ಅಗ್ರಹಾರ ಎಂಬ ಬಡಾವಣೆಯನ್ನು ಸಾರ್ವಜನಿಕರ ಉಪಯೋಗಕ್ಕೆ ನೀಡಿದ ಮಹಾಪುರುಷರು. ತನ್ನ ತಂದೆ- ತಾಯಿಯಂತೆ ಅತ್ತೆ- ಸೊಸೆಗಳನ್ನು ಹಾಗೂ ಮಾವನನ್ನು ಕಾಣಬೇಕೆಂದು ಶಾಸನ ಬರೆಸಿದ್ದಾರೆ ಎಂದರು.
ಇದಕ್ಕೂ ಮುನ್ನ ಕುಣಿಗಲ್ ತಾಲೂಕಿನ ಹುತ್ರಿದುರ್ಗ ಬೆಟ್ಟದಿಂದ ಕೆಂಪೇಗೌಡರ ಜ್ಯೋತಿಯನ್ನು ಪ್ರಾರಂಭ ಮಾಡಿ ಕುಣಿಗಲ್ ಗೆ ಒಂದು ಜ್ಯೋತಿ ಮತ್ತೊಂದು ಜ್ಯೋತಿಯನ್ನು ಬೆಂಗಳೂರಿಗೆ ಕೊಂಡೊಯ್ಯಲಾಯಿತುಪ್ರವಾಸಿ ಮಂದಿರದಿಂದ ತಹಸೀಲ್ದಾರ್ ಕಚೇರಿಯವರಿಗೆ ಕೆಂಪೇಗೌಡರ ಭಾವಚಿತ್ರವುಳ್ಳ ರಥದ ಮೆರವಣಿಗೆ ಜೊತೆಗೆ ಹಲವಾರು ಶಾಲಾ ವಿದ್ಯಾರ್ಥಿಗಳು ಮತ್ತು ಕಲಾತಂಡಗಳು ಭಾಗವಹಿಸಿದ್ದವು.
ಕುಣಿಗಲ್ ತಾಲೂಕಿನ ಹಲವಾರು ಪ್ರತಿಭಾನ್ವಿತ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಹಾಗೂ ಸಾಧಕ ರೈತರಿಗೆ ಅಭಿನಂದಿಸಲಾಯಿತು.ತಹಸೀಲ್ದಾರ್ ರಶ್ಮಿ, ತಾಪಂ ಕಾರ್ಯನಿರ್ವಹಣಾಧಿಕಾರಿ ನಾರಾಯಣ, ಕ್ಷೇತ್ರ ಶಿಕ್ಷಣಾಧಿಕಾರಿ ಬೋರೇಗೌಡ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕಪನೀಪಾಳ್ಯ ರಮೇಶ್, ಭಾರತ ಜ್ಞಾನ ಅಭಿವೃದ್ಧಿ ಟ್ರಸ್ಟ್ ನ ತಲಕಾಡು ಚಿಕ್ಕ ರಂಗೇಗೌಡ, ಪುರಸಭಾ ಮುಖ್ಯ ಅಧಿಕಾರಿ ಮಂಜುಳಾ, ಅಧ್ಯಕ್ಷರಾದ ಮಂಜುಳಾ ನಾಗರಾಜ್ , ಸೇರಿದಂತೆ ಹಲವಾರು ಅಧಿಕಾರಿಗಳು ಇದ್ದರು.