ವಿವಿಧ ಇಲಾಖೆಗಳ ಪರವಾನಗಿ ಪಡೆಯದೆ ಅಮ್ಯೂಸ್ ಮೆಂಟ್ ಪಾರ್ಕ್ ನಿರ್ಮಾಣ: ಡಾ.ನವೀನ್

KannadaprabhaNewsNetwork | Published : Jun 21, 2025 12:49 AM

ಸಕ್ಷಮ ಪ್ರಾಧಿಕಾರ, ಕೇಂದ್ರ ಜಲಸಂಪನ್ಮೂಲ ಇಲಾಖೆ ಸೇರಿದಂತೆ ಅಮ್ಯೂಸ್ ಮೆಂಟ್ ಪಾರ್ಕ್ ಯೋಜನೆಗೆ ಯಾವುದೇ ಪರವಾನಿಗೆ ಪಡೆಯದೆ, ಸಾರ್ವಜನಿಕರು ಮತ್ತು ಸ್ಥಳೀಯ ಆಡಳಿತಗಳನ್ನು ಗಣನೆಗೆ ತೆಗೆದುಕೊಳ್ಳದೆ ಉಪಮುಖ್ಯಮಂತ್ರಿ ಡಿಕೆಶಿ ಮತ್ತು ಜಿಲ್ಲೆಯ ಉಸ್ತುವಾರಿ ಸಚಿವರು, ಶಾಸಕರ ಏಕಪಕ್ಷೀಯ ತೀರ್ಮಾನ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಕೇಂದ್ರ ಜಲಸಂಪನ್ಮೂಲ ಇಲಾಖೆ ಸೇರಿದಂತೆ ಯಾವುದೇ ಇಲಾಖೆಗಳ ಪರವಾನಗಿ ಪಡೆಯದೆ ರಾಜ್ಯ ಸರ್ಕಾರ ಕೆಆರ್ ಎಸ್ ಬೃಂದಾವನ ಉನ್ನತೀಕರಣ ಹೆಸರಿನಲ್ಲಿ ಅಮ್ಯೂಸ್ ಮೆಂಟ್ ಪಾರ್ಕ್ ಯೋಜನೆ ಮುಂದಾಗಿದೆ ಎಂದು ಬಿಜೆಪಿ ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಾ.ನವೀನ್ ದೂರಿದರು.

ಪ್ರತಿಭಟನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ನವೀನ್, ಸಕ್ಷಮ ಪ್ರಾಧಿಕಾರ, ಕೇಂದ್ರ ಜಲಸಂಪನ್ಮೂಲ ಇಲಾಖೆ ಸೇರಿದಂತೆ ಅಮ್ಯೂಸ್ ಮೆಂಟ್ ಪಾರ್ಕ್ ಯೋಜನೆಗೆ ಯಾವುದೇ ಪರವಾನಿಗೆ ಪಡೆಯದೆ, ಸಾರ್ವಜನಿಕರು ಮತ್ತು ಸ್ಥಳೀಯ ಆಡಳಿತಗಳನ್ನು ಗಣನೆಗೆ ತೆಗೆದುಕೊಳ್ಳದೆ ಉಪಮುಖ್ಯಮಂತ್ರಿ ಡಿಕೆಶಿ ಮತ್ತು ಜಿಲ್ಲೆಯ ಉಸ್ತುವಾರಿ ಸಚಿವರು, ಶಾಸಕರ ಏಕಪಕ್ಷೀಯ ತೀರ್ಮಾನ ಕೈಗೊಂಡಿದ್ದಾರೆ ಎಂದು ಖಂಡಿಸಿದರು.

ಯೋಜನೆಯಿಂದ ರೈತರಲ್ಲಿ ಕೆಆರ್‌ಎಸ್‌ ಅಣೆಕಟ್ಟೆ ಸುರಕ್ಷತೆ ಬಗ್ಗೆ ಆತಂಕವಿದೆ. ಈ ಹಿನ್ನೆಲೆಯಲ್ಲಿ ಯೋಜನೆಗಳಿಗೆ ಅನುಮತಿ ಪಡೆದಿರುವ ಬಗ್ಗೆ ಮಾಹಿತಿ ಸಂಗ್ರಹಿಸಲು ಬಂದರೆ ಸಂಬಂಧಪಟ್ಟ ಅಧಿಕಾರಿಗಳು ಸರಿಯಾದ ಮಾಹಿತಿ ನೀಡದೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಮ್ಯೂಸ್ ಮೆಂಟ್ ಪಾರ್ಕ್ ನಿರ್ಮಿಸಲು ವಿವಿಧ ಇಲಾಖೆ ಸೇರಿದ 198 ಎಕರೆ ಏಕಾಏಕಿ ಯೋಜನೆಗೆ ಹೇಗೆ ಸೇರಿತು. ಉತ್ತಮ ದರ್ಜೆಯ ತೆಂಗಿನ ಗಿಡಗಳು ಬೆಳೆಯುವ ತೆಂಗಿನ ತೋಟ, ಹಣ್ಣಿನ ತೋಟ ಇರುವ ತೋಟಗಾರಿಕೆ ಇಲಾಖೆ, ಮೀನುಗಾರಿಕೆ ಇಲಾಖೆ ಮತ್ತು ಅಣೆಕಟ್ಟೆ ನಿರ್ಮಾಣ ಸಮಯದಿಂದ ಇರುವ ಇಂಜಿನಿಯರಿಂಗ್ ತಂತ್ರಜ್ಙಾನಗಳ ಕೆ.ಇ.ಆರ್.ಎಸ್ ನ್ನು ಮುಚ್ಚಿಹಾಕಿ ಅದರ ಜಾಗ ಕಬಳಿಸಲು ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು.

ಯೋಜನೆಯಿಂದ ಸುತ್ತಮುತ್ತಲ ಪರಿಸರಕ್ಕೆ ಹಾಗೂ ಕಾವೇರಿ ಅಣೆಕಟ್ಟೆಗೆ ಮಾಲಿನ್ಯ ಉಂಟಾಗಲಿದೆ. ಈ ಯೋಜನೆಯನ್ನು ಬೇಕಾದರೆ ಜಿಲ್ಲೆಯ ಬರಡು ಭೂಮಿಯಲ್ಲಿ ಮಾಡಲಿ. ಅಲ್ಲಿ ಪ್ರವಾಸೋದ್ಯಮ ಬೆಳಸಲಿ. ಬೇರೆಡೆ ಕಾವೇರಿ ಆರತಿ ಮಾಡಲಿ ಎಂದು ಆಗ್ರಹಿಸಿದರು.