ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಾಜ್ಯ ವಿಜ್ಞಾನ ಪರಿಷತ್ತು ತನ್ನ ಮೂಲೋದ್ದೇಶಗಳನ್ನು ಮರೆತು ಪಟ್ಟಭದ್ರರ ಕೇಂದ್ರವಾಗಿದ್ದು, ಸರ್ಕಾರ ಕೂಡಲೇ ಪರಿಷತ್ತನ್ನು ತನ್ನ ವಶಕ್ಕೆ ಪಡೆದುಕೊಂಡು ವೈಜ್ಞಾನಿಕ ಆಶಯಗಳಿಗೆ ಪೂರಕವಾಗಿ ಪುನಶ್ಚೇತನಗೊಳಿಸಬೇಕು ಎಂದು ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಅಧ್ಯಕ್ಷ ಹುಲಿಕಲ್ ನಟರಾಜ್ ಒತ್ತಾಯಿಸಿದ್ದಾರೆ.ಈ ಕುರಿತು ಮಾಹಿತಿ ನೀಡಿರುವ ಅವರು, ವಿಜ್ಞಾನ ಪರಿಷತ್ತು ವಿಜ್ಞಾನದ ದಾರಿ ಬಿಟ್ಟು ಎಷ್ಟೋ ಕಾಲವಾಗಿದ್ದು, ಅದರಲ್ಲಿ ಅಧಿಕಾರ ಲಾಲಸೆಯ ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಅಧಿಕಾರ ಹಿಡಿದು ಕುಳಿತಿವೆ. ಅಲ್ಲಿದ್ದ ಸಾರ್ವಜನಿಕರ ಕೋಟ್ಯಂತರ ರುಪಾಯಿ ಹಣವು ಈಗ ಖಾಲಿಯಾಗಿ ವಿಜ್ಞಾನ ಕಾರ್ಯಕ್ರಮಗಳಿಗೆ ಬೊಕ್ಕಸ ಬರಿದಾಗಿದೆ. ಉದ್ಯೋಗಿಗಳ ವೇತನಕ್ಕೂ ಹಣವಿಲ್ಲ ಎಂದು ಆರೋಪಿಸಿದ್ದಾರೆ.
ವೈಜ್ಞಾನಿಕ ಮನೋಭಾವದ ಗಂಧಗಾಳಿ ಇಲ್ಲದೇ ಇರುವವರು ಅಲ್ಲಿ ಅಧಿಕಾರ ಹಿಡಿದು ಸದಾ ತಂಬಾಕು ಜಗಿಯುತ್ತಾ ವಿಜ್ಞಾನವನ್ನು ಮೂಲೆಗುಂಪು ಮಾಡಿರುವುದು ವಿಷಾದಕರ. ವಿಜ್ಞಾನದ ಅರಿವು ಇಲ್ಲದಿದ್ದರೂ ಅಧಿಕಾರವನ್ನು ಹೇಗೆ ತಮ್ಮ ಮುಷ್ಠಿಯಲ್ಲಿರಿಸಿಕೊಳ್ಳಬೇಕು ಎಂಬ ಚಾಕಚಕ್ಯತೆ ಪ್ರಸ್ತುತದ ಅಧಿಕಾರಸ್ಥರಿಗೆ ಇದೆ. ಅದಕ್ಕಾಗಿ ಲಕ್ಷಾಂತರ ರು.ಗಳನ್ನು ಒಂದೇ ಕಂತಿನಲ್ಲಿ ಜಮಾ ಮಾಡಿ ತಮ್ಮವರನ್ನೇ ಸದಸ್ಯರನ್ನು ಮಾಡಿ ಮೌಢ್ಯತೆಯನ್ನು ಬಿತ್ತುತ್ತಾ ಅಧಿಕಾರ ಲಾಲಸೆಯಲ್ಲಿ ಮೆರೆಯುತ್ತಿದ್ದಾರೆ ಎಂದು ದೂರಿದ್ದಾರೆ.ಡಾ.ಎಚ್.ನರಸಿಂಹಯ್ಯ ಅವರು ರಾಜ್ಯದಲ್ಲಿ ವಿಜ್ಞಾನದ ಚಟುವಟಿಕೆಗಳನ್ನು ಸಕ್ರಿಯವಾಗಿ ನಡೆಸಲು, ವೈಜ್ಞಾನಿಕ ಮನೋಭಾವ ಮೂಡಿಸಲು ಮಹದಾಸೆಯಿಂದ ವಿಜ್ಞಾನ ಪರಿಷತ್ತಿಗೆ ಚಾಲನೆ ನೀಡಿದ್ದರು. ಈಗ ಅವರ ಆಶಯಗಳು ಮಣ್ಣುಪಾಲಾಗಿವೆ. ಅಧಿಕಾರಕ್ಕಾಗಿ ತಮಗೆ ಬೇಕಾದವರನ್ನು ಸದಸ್ಯರನ್ನಾಗಿಸಿ ಅಲ್ಲಿ ಸದಾಕಾಲ ಅಧಿಕಾರ ಹಿಡಿದು ಕೂರುವ ದುರಾಸೆಗೆ ನ್ಯಾಯಾಲಯ ತಡೆಯಾಜ್ಞೆ ನೀಡಿರುವುದು ಸ್ವಾಗತಾರ್ಹ. ತಕ್ಷಣವೇ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತನ್ನು ಸರ್ಕಾರದ ವಶಕ್ಕೆ ಪಡೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.