ಯಗಟಿ, ಸಿಂಗಟಗೆರೆ-ಪಂಚನಹಳ್ಳಿಯಲ್ಲಿ ಡಬಲ್‌ ರೋಡ್‌ ನಿರ್ಮಾಣ: ಶಾಸಕ ಕೆ.ಎಸ್.ಆನಂದ್

KannadaprabhaNewsNetwork | Updated : Oct 01 2024, 01:22 AM IST

ಸಾರಾಂಶ

ಕಡೂರುಮುಂದಿನ ದಿನಗಳಲ್ಲಿ ಕಡೂರು ವಿಧಾನಸಭಾ ಕ್ಷೇತ್ರದ ಯಗಟಿ, ಸಿಂಗಟಗೆರೆ ಹಾಗೂ ಪಂಚನಹಳ್ಳಿ ಹೋಬಳಿ ಕೇಂದ್ರಗಳಲ್ಲಿ ಡಬಲ್ ರೋಡ್ ಮಾಡಿಸಿ ವಿದ್ಯುತ್ ದೀಪ ಅಳ‍ಡಿಸುವ ಮೂಲಕ ಪಟ್ಟಣಗಳಂತೆ ಅಭಿವೃದ್ಧಿ ಪಡಿಸಲಾಗುವುದು ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ಜಲಜೀವನ್ ಮಿಷನ್ ಯೋಜನೆಯಡಿ ಸುಮಾರು ₹2.10 ಕೋಟಿ ವೆಚ್ಚದ ಕುಡಿವ ನೀರಿನ ಕಾಮಗಾರಿಗೆ ಭೂಮಿಪೂಜೆ ಮೂಲಕ ಚಾಲನೆ

ಕನ್ನಡಪ್ರಭ ವಾರ್ತೆ, ಕಡೂರು

ಮುಂದಿನ ದಿನಗಳಲ್ಲಿ ಕಡೂರು ವಿಧಾನಸಭಾ ಕ್ಷೇತ್ರದ ಯಗಟಿ, ಸಿಂಗಟಗೆರೆ ಹಾಗೂ ಪಂಚನಹಳ್ಳಿ ಹೋಬಳಿ ಕೇಂದ್ರಗಳಲ್ಲಿ ಡಬಲ್ ರೋಡ್ ಮಾಡಿಸಿ ವಿದ್ಯುತ್ ದೀಪ ಅಳ‍ಡಿಸುವ ಮೂಲಕ ಪಟ್ಟಣಗಳಂತೆ ಅಭಿವೃದ್ಧಿ ಪಡಿಸಲಾಗುವುದು ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ಕ್ಷೇತ್ರ ವ್ಯಾಪ್ತಿಯ ಯಗಟಿ ಮತ್ತು ಸಿಂಗಟಗೆರೆ ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಸುಮಾರು ₹2.10 ಕೋಟಿ ವೆಚ್ಚದ ಕುಡಿವ ನೀರಿನ ಕಾಮಗಾರಿಗೆ ಭೂಮಿಪೂಜೆ ಮೂಲಕ ಚಾಲನೆ ನೀಡಿ ಮಾತನಾಡಿದರು. ಗ್ರಾಮೀಣ ಭಾಗದ ಅಭಿವೃದ್ಧಿ ಜೊತೆಗೆ ಹೋಬಳಿ ಕೇಂದ್ರ ಗಳನ್ನು ಮತ್ತಷ್ಟು ಅಭಿವೃದ್ಧಿಗೊಳಸುವುದು ನನ್ನ ಆಶಯ. ಈ ನಿಟ್ಟಿನಲ್ಲಿ ಯಗಟಿ, ಸಿಂಗಟಗೆರೆ, ಪಂಚನಹಳ್ಳಿ ಹೋಬಳಿ ಕೇಂದ್ರದ ಮುಖ್ಯ ರಸ್ತೆಗಳಿಗೆ ಡಬಲ್ ರೋಡ್ ನಿರ್ಮಿಸಿ ಹೈಮಾಸ್ಕ್ ದೀಪಗಳನ್ನು ಅಳಡಿಸುವ ಯೋಜನೆ ರೂಪಿಸಲಾಗಿದೆ ಎಂದರು.ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ₹464 ಕೋಟಿ ವೆಚ್ಚದ ಕಾಮಗಾರಿ ನಡೆಯುತ್ತಿದೆ. ಈಗಾಗಲೇ 4ನೇ ಹಂತದ ಕಾಮಗಾರಿ ಗಳಿಗೆ ವೇಗ ದೊರಕಿಸಿಕೊಡಲಾಗಿದೆ. ಈ ಯೋಜನೆಯಲ್ಲಿ 184 ಹೊಸ ಟ್ಯಾಂಕ್‍ಗಳ ನಿರ್ಮಾಣ ಆಗಲಿದ್ದು ಒಂದೂವರೆ ವರ್ಷದೊಳಗೆ ಕಾಮಗಾರಿ ಮುಗಿಯಲಿದೆ.

ತಾವು ಶಾಸಕರಾದ ಒಂದೂವರೆ ವರ್ಷದ ಅವಧಿಯಲ್ಲಿ ಯಗಟಿ ಗ್ರಾಮದ ಪ್ರಥಮ ದರ್ಜೆ ಕಾಲೇಜು ಅಭಿವೃದ್ಧಿಗೆ ₹ 5 ಕೋಟಿ, ರೈತ ಸಂಪರ್ಕ ಕೇಂದ್ರದ ನೂತನ ಕಟ್ಟಡ ನಿರ್ಮಾಣಕ್ಕೆ ₹2 ಕೋಟಿ ಅನುದಾನ ನೀಡಲಾಗಿದೆ. ಯಗಟಿ ಹೋಬಳಿ ವ್ಯಾಪ್ತಿಯಲ್ಲಿ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಗ್ರಾಮಸ್ಥರ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸುವ ಕಾರ್ಯ ಮಾಡಲಾಗುವುದು ಎಂದರು.ಸಿಂಗಟಗೆರೆ ಗ್ರಾಮದ ಜನರ ಬಹುದಿನಗಳ ಬೇಡಿಕೆಯಂತೆ ಕೆಎಸ್‍ಆರ್ ಟಿಸಿ ಬಸ್‍ನಿಲ್ದಾಣ ನಿರ್ಮಾಣಕ್ಕೆ ಸಾರಿಗೆ ನಿಗಮದ ಹಿರಿಯ ಅಧಿಕಾರಿಗಳ ಬಳಿ ಚರ್ಚಿಸಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರದಲ್ಲೇ ಕಾರ್ಯಾನುಷ್ಟಾನಗೊಳ್ಳಲಿದೆ. ಈಗಾಗಲೇ ಗ್ರಾಮದ ಬಯಲು ರಂಗಮಂದಿರ ನಿರ್ಮಾಣಕ್ಕೆ ₹ 15 ಲಕ್ಷ ಅನುದಾನ ನೀಡಲಾಗಿದೆ. ಅಂಬೇಡ್ಕರ್ ಭವನದಲ್ಲಿ ಅಡುಗೆ ಕೊಠಡಿ ನಿರ್ಮಾಣಕ್ಕೆ ಅನುದಾನ ನೀಡಲಾಗುವುದು. ಶೈಕ್ಷಣಿಕ ಬೆಳವಣಿಗೆಗೆ ಸಿಂಗಟಗೆರೆ ಗ್ರಾಪಂ ಇತರೆ ಪಂಚಾಯಿತಿಗಳಿಗೆ ಮಾದರಿಯಾಗಿದೆ. ಪಂಚಾಯಿತಿ ಅನುದಾನ ಬಳಸಿ ಸರಕಾರಿ ಶಾಲೆಗಳ ಅಭಿವೃದ್ಧಿಗೆ ಒತ್ತು ನೀಡುತ್ತಿರುವುದು ಹೆಮ್ಮೆಯ ಸಂಗತಿ. ಇದಕ್ಕೆ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ನಿರ್ಣಯ ಸರಕಾರಿ ಶಾಲೆಗಳ ಅಭಿವೃದ್ಧಿಗೆ ಮಾದರಿ ಎಂದು ಶ್ಲಾಘಿಸಿದರು.ತಾಪಂ ಇಒ ಸಿ.ಆರ್. ಪ್ರವೀಣ್ ಮಾತನಾಡಿ, ಗ್ರಾಮೀಣ ಜನರ ಆರೋಗ್ಯಕ್ಕೆ ಒತ್ತು ನೀಡಿ ಶುದ್ಧ ಕುಡಿವ ನೀರು ನೀಡಲು ಜಲಜೀವನ್‌ ಮಿಷನ್ ಯೋಜನೆಯಲ್ಲಿ ₹ 80 ಕೋಟಿ ವೆಚ್ಚದಲ್ಲಿ ಹೊಸ ಪೈಪ್ ಲೈನ್ ಮೂಲಕ 4ನೇ ಹಂತದ ಕಾಮಗಾರಿ ಮಾಡಿ ಬಹುಗ್ರಾಮ ಯೋಜನೆಯಲ್ಲಿ ಭದ್ರಾ ಡ್ಯಾಂನಿಂದ ನೀರು ಹರಿಸಿ ನಲ್ಲಿ ಮೂಲಕ ನೀರು ನೀಡಲು ಶಾಸಕರಿಂದ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ವಿಭಾಗದ ಎಇಇ ಮೇಘನಾಥ್, ಇಂಜಿನಿಯರ್ ಹರಿರಾಮ್, ಯಗಟಿ ಗ್ರಾಪಂ ಅಧ್ಯಕ್ಷೆ ಗಾಯತ್ರಿ ರವಿಕುಮಾರ್, ಸದಸ್ಯರಾದ ಗೋವಿಂದಪ್ಪ, ಕಲಾವತಿ, ಪಾರ್ವತಿ ಬಾಯಿ, ಸುನೀಲ್, ಯಗಟಿ ಶಂಕರ್, ರವಿಕುಮಾರ್, ಸಿಂಗಟಗೆರೆ ಗ್ರಾಪಂ ಅಧ್ಯಕ್ಷೆ ಮಧುಮಾಲಾ, ಸದಸ್ಯರಾದ ರಮೇಶ್, ಗಿರೀಶ್ ಆರಾಧ್ಯ, ಸವಿತಾ, ಶಾಂತಮ್ಮ ಕಂಸಾಗರ ಸೋಮಶೇಖರ್, ಪಿಡಿಒ ರಾಜೇಶ್, ಅಬಿದ್ ಪಾಷಾ, ಗ್ರಾಮಸ್ಥರು ಮತ್ತಿತರಿದ್ದರು.

-- ಬಾಕ್ಸ್ ---

ಸರಕಾರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಣ ಇಲ್ಲ ಎಂಬ ವಿರೋಧ ಪಕ್ಷಗಳ ಟೀಕೆಗೆ ಕ್ಷೇತ್ರದಲ್ಲಿ ನಡೆಯುತ್ತಿರುವ ಈ ಅಭಿವೃದ್ಧಿ ಕಾರ್ಯಗಳೇ ಸಾಕ್ಷಿ. ಗ್ಯಾರಂಟಿಗಳ ಜೊತೆ ಕಾಂಗ್ರೆಸ್ ಸರಕಾರ ಅಭಿವೃದ್ಧಿಗೂ ಆದ್ಯತೆ ನೀಡುತ್ತಿದೆ ಎಂಬುದನ್ನು ರಾಜಕೀಯ ವಿರೋಧಿಗಳು ಗಮನಿಸಬೇಕು

--- ಕೆ.ಎಸ್.ಆನಂದ್.

30ಕೆಕೆಡಿಯು1.

ಕಡೂರು ವಿಧಾನಸಭಾ ಕ್ಷೇತ್ರದ ಯಗಟಿ ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ 1.65 ಕೋಟಿ ರು. ವೆಚ್ಚದಲ್ಲಿ ಕುಡಿಯುವ ನೀರಿನ ಕಾಮಗಾರಿಗೆ ಶಾಸಕ ಕೆ.ಎಸ್.ಆನಂದ್ ಭೂಮಿಪೂಜೆ ನೆರವೇರಿಸಿದರು.

Share this article