ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಭದ್ರಾ ಜಲಾಶಯವನ್ನೇ ಬುಡಮೇಲು ಮಾಡುವ ಕಾಮಗಾರಿಯೊಂದು ಜಲಾಶಯದ ಬುಡದಲ್ಲಿಯೇ ಸದ್ದುಗದ್ದಲವಿಲ್ಲದೆ ನಡೆಯುತ್ತಿದ್ದು, ಸರ್ಕಾರದಿಂದ ಯಾವ ಅನುಮಿತಿ ಸಿಕ್ಕಿದೆ ಎಂಬುದು ಗೋತ್ತಿಲ್ಲ. ಇಂತಹ ಅವೈಜ್ಞಾನಿಕ ಕಾಮಗಾರಿ ನಡೆಯುತ್ತಿರುವುದು ನೋಡಿ ನಿರಾವರಿ ಇಲಾಖೆ ಸುಮ್ಮನಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ ಎಂದು ರಾಜ್ಯ ರೈತ ಸಂಘದ ಮುಖಂಡ ಕೆ.ಟಿ.ಗಂಗಾಧರ್ ಅಸಮಾಧಾನ ವ್ಯಕ್ತಪಡಿಸಿದರು.ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕಮಗಳೂರು ಜಿಲ್ಲೆ ತರಿಕೆರೆ ಭಾಗಕ್ಕೆ ಹಾಗೂ ಹೊಸದುರ್ಗ ಜಿಲ್ಲೆಯ ಭಾಗಕ್ಕೆ ಶುದ್ಧ ಕುಡಿಯುವ ನೀರು ಒದಗಿಸುವ ಸಲುವಾಗಿ ಜಲಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರಿನ ಘಟಕ ನಿರ್ಮಾಣ ಕಾಮಗಾರಿ ಮಾಡಲಾಗುತ್ತಿದೆ. ಸುಮಾರು 71 ಟಿಎಂಸಿ ನೀರು ಹಿಡಿದಿಟ್ಟುಕೊಂಡಿರುವ ಗುಡ್ಡಗಳ ತಳಭಾಗದಲ್ಲಿ ಈ ರೀತಿ ಕಾಮಗಾರಿಗೆ ರಾಜ್ಯ ಸರ್ಕಾರ ಅನುಮತಿ ನೀಡಿರುವುದು ಜಲಾಶಯ ಅತಂತ್ರ ಸ್ಥಿತಿ ಕಾರಣವಾಗಿದೆ ಎಂದು ದೂರಿದರು.ಭದ್ರಾ ಜಲಾಶಯ ಮಧ್ಯ ಕರ್ನಾಟಕದಲ್ಲಿಯೇ ಬಹುದೊಡ್ಡ ನೀರಾವರಿ ಯೋಜನೆಯಾಗಿದೆ. ಸುಮಾರು 6 ಜಿಲ್ಲೆಗಳ 4.50 ಲಕ್ಷ ಎಕರೆ ಜಮೀನಿಗೆ ನೀರು ಒದಗಿಸುತ್ತದೆ. ಕುಡಿಯುವ ನೀರಿಗಾಗಿ 7.5 ಟಿಎಂಸಿ ನೀರನ್ನು ಮೀಸಲಿಡಲಾಗಿದೆ. ತರಿಕೆರೆ, ಹೊಸದುರ್ಗ ಸೇರಿದಂತೆ ಹಲವು ತಾಲೂಕುಗಳ ಗ್ರಾಮಗಳಿಗೆ ನೀರನ್ನು ನೀಡಲಾಗುತ್ತದೆ. ಈಗ ಕುಡಿಯುವ ನೀರಿನ ಯೋಜನೆಗಾಗಿ ಶುದ್ಧ ನೀರಿನ ಘಟಕವನ್ನು ಸ್ಥಾಪಿಸುವ ಉದ್ದೇಶದಿಂದ ಭದ್ರಾ ಜಲಾಶಯದ ಕೆಳ ಭಾಗದಲ್ಲಿ ಕಾಮಗಾರಿ ಆರಂಭವಾಗಿದೆ. ಭದ್ರಾ ಜಲಾಶಯದಿಂದ ಕುಡಿಯುವ ನೀರಿನ ಯೋಜನೆ ತಪ್ಪಲ್ಲ. ಆದರೆ, ಜಲ ಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಈ ಯೋಜನೆಗಾಗಿ ಶುದ್ಧ ನೀರಿನ ಘಟಕವನ್ನು ಜಲಾಶಯದ ತಳ ಭಾಗದಲ್ಲಿಯೇ ಪ್ರಾರಂಭಿಸಲು ಹೊರಟಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ಹೇಳಿದರು.ಸುಮಾರು 500 ಕೋಟಿ ವೆಚ್ಚದ ಈ ಘಟಕಕ್ಕೆ 16 ಎಕರೆ ಪ್ರದೇಶವನ್ನು ಆಂದ್ರ ಮೂಲದ ಗುತ್ತಿಗೆದಾರನೊಬ್ಬನಿಗೆ ನೀಡಲಾಗಿದೆ. ಜಲಾಶಯವು ಈಗಾಗಲೇ ಅತ್ಯಂತ ಸೂಕ್ಷ್ಮ, ಸುರಕ್ಷಿತ ಪ್ರದೇಶವಾಗಿದೆ. ಇಲ್ಲಿ ಯಾವುದೇ ಯೋಜನೆಗಳಾಗಲಿ, ವಸತಿ ಗೃಹಗಳಾಗಲಿ, ಸರ್ಕಾರದ ಕಟ್ಟಡಗಳಾಗಲಿ ನಿರ್ಮಾಣ ಮಾಡುವಂತಿಲ್ಲ. ಇದು ಭದ್ರತೆಯ ಪ್ರದೇಶವಾಗಿದೆ. ಹೀಗಿದ್ದರೂ ಕೂಡ ಜಲಾಶಯದಿಂದ ಕೇವಲ 500 ಮೀಟರ್ ಒಳಗೆ ತಳಭಾಗದಲ್ಲಿ ಈ ಘಟಕ ಸ್ಥಾಪನೆಯಾಗುತ್ತಿರುವುದು ತೀರ ಅವೈಜ್ಞಾನಿಕ ಮತ್ತು ಸರ್ಕಾರದ ನೀಚತನದ ಪರಮಾವಧಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಯೋಜನೆಗಾಗಿ ಬೇರೆ ಕಡೆ ಭೂಮಿ ನೀಡಲಿ. 16 ಎಕರೆ ಏಕೆ, 25 ಎಕರೆ ಕೊಡಲಿ. ಆದರೆ, ಜಲಾಶಯದ ತಳಭಾಗದಲ್ಲಿ ಬೇಡ. ಈ ಬಗ್ಗೆ ನೀರಾವರಿ ಇಲಾಖೆಯ ಅಧಿಕಾರಿಗಳನ್ನು ಕೇಳಿದರೆ ದಡ್ಡತನದ ಉತ್ತರ ಕೊಡುತ್ತಾರೆ. ಇದು ನಾವು ಕೊಟ್ಟಿದಲ್ಲ. ಮೀನುಗಾರಿಕೆ ಇಲಾಖೆಯವರು ಅನುಮತಿ ಕೊಟ್ಟಿದ್ದಾರೆ ಎನ್ನುತ್ತಾರೆ. ಆದರೆ ನೀರಾವರಿ ಇಲಾಖೆಯವರು ಮೀನುಗಾರಿಕೆ ಇಲಾಖೆಯವರಿಗೆ ಗುತ್ತಿಗೆ ಆಧಾರದಲ್ಲಿ ಮೀನು ಸಾಕಲು ಕೊಟ್ಟಿರುತ್ತಾರೆ. ತಾವೇ ಗುತ್ತಿಗೆ ತೆಗೆದುಕೊಂಡು ಈ ಯೋಜನೆಗೆ ನೀರಾವರಿ ಇಲಾಖೆಯವರು ಹೇಗೆ ಅನುಮತಿ ಕೊಡಲು ಸಾಧ್ಯ ಎಂದು ಪ್ರಶ್ನೆ ಮಾಡಿದರು.
ನೀರಾವರಿ ಸಚಿವರಾಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಗಮನಕ್ಕೆ ಈ 500 ಕೋಟಿಯ ಯೋಜನೆಯ ವಿವರಗಳು ತಿಳಿದಿಲ್ಲವೇ. ಜಲ ಜೀವನ್ ಮೀಷನ್ ಅಡಿಯಲ್ಲಿ ಈ ಯೋಜನೆ ರೂಪಗೊಂಡಿದ್ದರೂ ಸಹ ಜಲಾಶಯದ ಭದ್ರತಾ ಪ್ರದೇಶದಲ್ಲಿ ಇದು ನಡೆಯುತ್ತಿದೆ ಎಂದು ಅವರಿಗೆ ಗೊತ್ತಿಲ್ಲವೇ ಎಂದು ಪ್ರಶ್ನೆ ಮಾಡಿದರು.ತಕ್ಷಣ ಸರ್ಕಾರದ ಈ ಯೋಜನೆ ನಿಲ್ಲಿಸಬೇಕು. ನಡೆಯುತ್ತಿರುವ ಕಾಮಗಾರಿಗಳು ಕೂಡಲೇ ನಿಲ್ಲಬೇಕು. ಶುದ್ಧ ನೀರಿನ ಘಟಕವನ್ನು ದೂರದ ಪ್ರದೇಶದಲ್ಲಿ ಸ್ಥಾಪಿಸಿ ಕುಡಿಯುವ ನೀರನ್ನು ಕೊಡಲಿ. ಆದರೆ, ಜಲಾಶಯವನ್ನೇ ಬುಡಮೇಲು ಮಾಡುವ ಈ ಯೋಜನೆ ನಮಗೆ ಬೇಡ. ಸರ್ಕಾರ ಕೂಡಲೇ ನಿಲ್ಲಿಸಬೇಕು. ಇಲ್ಲದಿದ್ದರೆ ರೈತರು, ಸಾರ್ವಜನಿಕರು ಸಂರಕ್ಷಣೆಗೆ ನಿಲ್ಲಬೇಕಾಗುತ್ತದೆ. 9 ಜಿಲ್ಲೆಯ ರೈತರು ಕೂಡ ಈ ಯೋಜನೆಯನ್ನು ನಿಲ್ಲಿಸುವಂತೆ ಒತ್ತಾಯಿಸುತ್ತಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಯಶವಂತರಾವ್ ಘೋರ್ಪಡೆ, ಪುಟ್ಟಪ್ಪ, ಹಿರಣಯ್ಯ, ಜಗದೀಶ್ ನಾಯ್ಕ್, ಮೂಡಲಗಿರಿಯಪ್ಪ, ಅಣ್ಣಪ್ಪ, ಮಂಜಪ್ಪ, ರಂಗೇಶಪ್ಪ ಸೇರಿದಂತೆ ಹಲವರಿದ್ದರು.ಅನುಮತಿ ಪಡೆಯದೆ ಕಾಮಗಾರಿ ಆರಂಭ
ಸುಮಾರು ₹500 ಕೋಟಿ ವೆಚ್ಚದ ಈ ಯೋಜನೆಗಾಗಿ ಈಗಾಗಲೇ 2 ತಿಂಗಳಿಂದ ಕಾಮಗಾರಿಗಳು ಆರಂಭವಾಗಿದೆ. ಕಟ್ಟಡಗಳು ತಲೆ ಎತ್ತುತ್ತಿವೆ. ಈ ಯೋಜನೆಗೆ ಹೇಗೆ ಅನುಮತಿ ಸಿಕ್ಕಿತ್ತು ಎಂಬುಂದೇ ಯಾರಿಗೂ ಗೊತ್ತಿಲ್ಲ. ಸಿಡಬ್ಲೂಯುಸಿಯಿಂದ ಅನುಮತಿ ಪಡೆದಿಲ್ಲ. ಆದರೂ ಕೂಡ ಸದ್ದಿಲ್ಲದೆ ಕಾಮಗಾರಿ ಆರಂಭವಾಗಿದೆ. ವಸತಿ ಗೃಹ ಕೂಡ ತಲೆ ಎತ್ತುತ್ತಿದೆ. ಜಲಾಶಯಕ್ಕೆ ಅಪಾಯ ಆಗುವುದಿಲ್ಲ ಎಂದು ಹೇಗೆ ಹೇಳಲು ಸಾಧ್ಯ. ಅಲ್ಲದೆ ಪ್ರಕೃತಿ ಮೇಲಾಗುವ ದಬ್ಬಾಳಿಕೆ ಎಂದು ಕೆ.ಟಿ.ಗಂಗಾಧರ್ ಹೇಳಿದರು