ಹೊಸಪೇಟೆ: ನಗರದ ಹಂಪಿ ರಸ್ತೆಯಿಂದ-ಭಟ್ರಳ್ಳಿ ಆಂಜನೇಯ ದೇವಸ್ಥಾನದ ರಸ್ತೆಯ ರುದ್ರಭೂಮಿಯ ಆವರಣದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ₹4.30 ಕೋಟಿ ಅನುದಾನದಲ್ಲಿ ಆಧುನಿಕ ವಿದ್ಯುತ್, ಅನಿಲ ಚಿತಾಗಾರದ ವೈಕುಂಠಧಾಮ ನಿರ್ಮಾಣ ಕಾಮಗಾರಿಗೆ ಶಾಸಕ ಎಚ್.ಆರ್. ಗವಿಯಪ್ಪ ಅವರು ಸೋಮವಾರ ಭೂಮಿ ಪೂಜೆ ನೆರವೇರಿಸಿದರು.
ಬಳಿಕ ಅವರು ಸುದ್ದಿಗಾರರರೊಂದಿಗೆ ಮಾತನಾಡಿ, ನಗರಕ್ಕೆ ಆಧುನಿಕ ಚಿತಾಗಾರ ಕಾಮಗಾರಿಗೆ ಅನುದಾನ ಮಂಜೂರು ದೊರೆತಿದೆ. ಸತತ ಒಂದುವರೆ ವರ್ಷಗಳ ಪ್ರಯತ್ನದ ಫಲವಾಗಿ ನಗರಕ್ಕೆ ಈ ಸೌಲಭ್ಯ ದೊರೆತಿದೆ. 4.5 ಎಕರೆ ಪ್ರದೇಶದಲ್ಲಿ ಈ ಆಧುನಿಕ ಚಿತಾಗಾರ ನಿರ್ಮಾಣವಾಗಲಿದೆ. ಅಗತ್ಯ ಸ್ಥಳದಲ್ಲಿ ಕಾಂಪೌಂಡ್, ಶೌಚಾಲಯ, ವಿಶ್ರಾಂತಿ ಕೊಠಡಿ, ಕುಡಿಯುವ ನೀರು ಸಹಿತ ಅಗತ್ಯ ಮೂಲ ಸೌಲಭ್ಯಗಳನ್ನು ಶೀಘ್ರ ಕಲ್ಪಿಸಲಾಗುವುದು ಎಂದರು.ಕ್ಷೇತ್ರದಲ್ಲಿ ಬಹಳಷ್ಟು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ದೊರೆತಿದ್ದು, ನ.25 ರಂದು ಇಂಧನ ಖಾತೆ ಸಚಿವ ಕೆ.ಜೆ.ಜಾರ್ಜ್ ಅವರ ಉಪಸ್ಥಿತಿಯಲ್ಲಿ ಬೈಲುವದ್ದಿಗೆರೆಯ ₹9.15 ಕೋಟಿ ವೆಚ್ಚದ 110/11 ಕೆ.ವಿ ವಿದ್ಯುತ್ ಉಪಕೇಂದ್ರ ಲೋಕಾರ್ಪಣೆ ಹಾಗೂ ನಾಗೇನಹಳ್ಳಿ 22 ಕೋಟಿ ರು. ವೆಚ್ಚದಲ್ಲಿ ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ಬಳಿ ₹27.65 ಕೋಟಿ ವೆಚ್ಚದಲ್ಲಿ ಎರಡು 110/11 ಕೆ.ವಿ ವಿದ್ಯುತ್ ಉಪ ಕೇಂದ್ರಗಳಿಗೆ ಭೂಮಿಪೂಜೆ ಕಾರ್ಯಕ್ರಮವನ್ನು ಹೊಸಪೇಟೆ ತಾಲೂಕಿನ ಬೈಲುವದ್ದಿಗೇರಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.ಈ ಸಂದರ್ಭದಲ್ಲಿ, ನಗರಸಭೆ ಅಧ್ಯಕ್ಷ ಎನ್. ರೂಪೇಶಕುಮಾರ, ಉಪಾಧ್ಯಕ್ಷ ಬಿ. ಜೀವರತ್ನಂ, ಸದಸ್ಯರಾದ ಅಬ್ದುಲ್ ಖದೀರ್, ತಾರಿಹಳ್ಳಿ ಜಂಬುನಾಥ, ಕೆ. ಮಹೇಶ್, ಮಾಜಿ ಸದಸ್ಯರಾದ ಗೌಡ್ರ ರಾಮಣ್ಣ, ವೇಣುಗೋಪಾಲ್, ಗ್ಯಾರಂಟಿ ಸಮಿತಿ ತಾಲೂಕಾಧ್ಯಕ್ಷ ಡಿ. ವೆಂಕಟರಮಣ, ಮುಖಂಡರಾದ ನಾಗೇನಹಳ್ಳಿ ಬಸವರಾಜ, ಅಂಜಿನಪ್ಪ, ಮಾರೆಣ್ಣ ಮತ್ತಿತರರಿದ್ದರು.