ಕನ್ನಡಪ್ರಭ ವಾರ್ತೆ ಕುಮಟಾ
ಹೆಲ್ಮೆಟ್ ಜಾಗೃತಿ ಅಭಿಯಾನದಡಿ ಇಲ್ಲಿನ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿ ಬೀದಿನಾಟಕ ಪ್ರದರ್ಶಿಸಿದರು.ಪೊಲೀಸ್ ಸಿಬ್ಬಂದಿ ರಾಮಚಂದ್ರ ಪಟಗಾರ, ಅರುಣ ನಾಯ್ಕ, ಶಿವಾನಂದ ಜಾಡರ್, ಮಲ್ಲಿಕಾರ್ಜುನ, ಸುರೇಂದ್ರ, ಮಂಗಲಾ ನಾಯ್ಕ, ಚಿದಾನಂದ ಇತರರು ದ್ವಿಚಕ್ರ ವಾಹನದ ಅಪಘಾತ ಮತ್ತು ಜೀವ ರಕ್ಷಣೆಯಲ್ಲಿ ಹೆಲ್ಮೆಟ್ ಪಾತ್ರವನ್ನು ನಾಟಕೀಯವಾಗಿ ಪ್ರಸ್ತುತಪಡಿಸಿದರು. ಹೆಲ್ಮೆಟ್ ಧರಿಸದ ಕಾರಣಕ್ಕೆ ಅಪಘಾತದಲ್ಲಿ ಸಾಯುವ ಹಾಗೂ ಬದುಕುಳಿದರೂ ಗಾಯಾಳುವಿಗೆ ಮೆದುಳಿನ ಆಘಾತ ತರಬಹುದಾದ ಶಾಶ್ವತ ಸಮಸ್ಯೆಗಳನ್ನು ನೋಡುಗರಿಗೆ ತಮ್ಮ ಅಭಿನಯ ಹಾಗೂ ಪರಸ್ಪರ ಸಂವಾದದ ಮೂಲಕ ಮನದಟ್ಟು ಮಾಡಿದರು.
ಬಳಿಕ ತಹಸೀಲ್ದಾರ ಶ್ರೀಕೃಷ್ಣ ಕಾಮಕರ, ಪಿಎಸ್ಐ ಮಹೇಶ ಎಂ.ಪಿ., ಪಿಎಸ್ಐ ಮಂಜುನಾಥ ಗೌಡರ್, ಪಿಎಸ್ಐ ರವಿ ಗುಡ್ಡಿ, ಶಶಿಧರ ಕೆ.ಎಚ್. ಇನ್ನಿತರರು ಮಾತನಾಡಿ, ಬಹುಪಾಲು ಅಪಘಾತಗಳಲ್ಲಿ ತಲೆಗೆ ಬೀಳುವ ಪೆಟ್ಟಿನಿಂದಲೇ ಸಾವು ಉಂಟಾಗುತ್ತಿರುತ್ತದೆ. ಸಾರ್ವಜನಿಕರು ಸದಾ ಸಂಚಾರ ನಿಯಮ ಪಾಲಿಸಬೇಕು. ಜತೆಗೆ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಸುರಕ್ಷಿತ ಹೆಲ್ಮೆಟ್ ಧಾರಣೆಯಿಂದ ಆಕಸ್ಮಿಕ ಅಪಘಾತಗಳಲ್ಲಿ ತಲೆಗೆ ಬೀಳುವ ಮಾರಣಾಂತಿಕ ಹೊಡೆತ ತಪ್ಪಿಸಬಹುದಾಗಿದೆ. ಹೆಲ್ಮೆಟ್ ಇಲ್ಲದೇ ಪೆಟ್ರೋಲ್ ಬಂಕ್ಗಳಲ್ಲಿ ಪೆಟ್ರೋಲ್ ವಿತರಣೆ ನಿರಾಕರಿಸುವುದು ಅನಿವಾರ್ಯವಾಗಿದ್ದು, ಈ ನಿಟ್ಟಿನಲ್ಲಿ ಪೆಟ್ರೋಲ್ ಬಂಕ್ಗಳ ಸಹಕಾರ ಅಗತ್ಯ ಎಂದರು.ಈಗಾಗಲೇ ಉಪವಿಭಾಗಾಧಿಕಾರಿಗಳ ನಿರ್ದೇಶನದಂತೆ ಕುಮಟಾದಲ್ಲಿ ಸಂಚಾರ ನಿಯಮ ಪಾಲನೆ ಕಟ್ಟುನಿಟ್ಟುಗೊಳಿಸಲಾಗಿದ್ದು, ಸಾರ್ವಜನಿಕರ ಸುರಕ್ಷತೆ ಮತ್ತು ಜಾಗೃತಿಗಾಗಿ ಬೀದಿ ನಾಟಕದ ಮೂಲಕ ಹೆಲ್ಮೆಟ್ ಅನಿವಾರ್ಯತೆ ಮನವರಿಕೆ ಮಾಡುತ್ತಿದ್ದೇವೆ. ದ್ವಿಚಕ್ರ ವಾಹನಿಗರು ಕಡ್ಡಾಯವಾಗ ಹೆಲ್ಮೆಟ್ ಧಾರಣೆಯನ್ನು ರೂಢಿಸಿಕೊಂಡು ಸುರಕ್ಷಿತ ಬದುಕು ತಮ್ಮದಾಗಿಸಿಕೊಳ್ಳಬೇಕು ಎಂದು ವಿವರಿಸಿದರು.ಈ ವೇಳೆ ಆಟೋರಿಕ್ಷಾ ಚಾಲಕ-ಮಾಲೀಕ ಸಂಘಟನೆ, ಟೆಂಪೋ ಚಾಲಕ-ಮಾಲೀಕ ಸಂಘಟನೆ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.