ಕನ್ನಡಪ್ರಭ ವಾರ್ತೆ ಶಿರಾ ರೈತರ ಪಂಪ್ ಸೆಟ್ ಗಳಿಗೆ ನಿರಂತರವಾಗಿ ವಿದ್ಯುತ್ ಪೂರೈಕೆ ಮಾಡುವ ಉದ್ದೇಶದಿಂದ ರಾಜ್ಯದಲ್ಲಿ ಪ್ರತಿ ಜಿಲ್ಲೆಯ, ಪ್ರತಿ ತಾಲೂಕಿನಲ್ಲಿ ಎಲ್ಲೆಲ್ಲಿ ಅವಶ್ಯಕತೆ ಇದೆ ಅಲ್ಲಿ ಸೋಲಾರ್ ಪಾರ್ಕ್ ನಿರ್ಮಾಣ ಮಾಡಲಾಗುತ್ತದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದರು.
ಸೋಲಾರ್ ಪಾರ್ಕ್ ನಿರ್ಮಾಣದಿಂದ ವಿದ್ಯುತ್ ಸಮಸ್ಯೆ ಪರಿಹಾರವಾಗಲಿದ್ದು, ಇದರಿಂದ ಕೃಷಿ ಉತ್ಪಾದಕತೆ ಮತ್ತು ಗ್ರಾಮೀಣ ಪ್ರದೇಶದ ರೈತರ ಆರ್ಥಿಕ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗುತ್ತವೆ. ಪಿಎಂ ಕುಸುಮ್ ಯೋಜನೆ ರೈತರ ಹಸಿರು ಭವಿಷ್ಯಕ್ಕಾಗಿ ಬದ್ಧತೆಯನ್ನು ಇಟ್ಟುಕೊಂಡಿವೆ. ರೈತರಿಗೆ ನಿರಂತರ ವಿದ್ಯುತ್ ದೊರಕುತ್ತದೆ. ಹಾಗೂ ನವೀಕರಿಸಬಹುದಾದ ಇಂಧನ ಪ್ರಮಾಣದಲ್ಲಿ ಅತ್ಯಗತ್ಯ ಹೆಜ್ಜೆ ಪಿಎಂ ಕುಸುಮ್ ಯೋಜನೆ ಇಟ್ಟಿದೆ. ಈ ವಿದ್ಯುತ್ ಸ್ಥಾವರಗಳಿಂದ ಉತ್ಪತ್ತಿಯಾಗುವ ವಿದ್ಯುತ್ತನ್ನು ತಾಲೂಕಿನ 2299 ಕೃಷಿ ಪಂಪ್ ಸೆಟ್ ಗಳಿಗೆ ನೀಡಲಾಗುವುದು. ಆಗ ಸಾಂಪ್ರದಾಯಿಕ ವಿದ್ಯುತ್ ಮೂಲಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ. ಇಂತಹ ಯೋಜನೆಗಳು ರೈತರನ್ನು ಸಬಲಗೊಳಿಸುತ್ತವೆ ಎಂದರು.
10 ಸಾವಿರ ಎಕರೆಯಲ್ಲಿ ಪಾವಗಡದಲ್ಲಿ ಮತ್ತೊಂದು ಸೋಲಾರ್ ಪಾರ್ಕ್ಈಗಾಗಲೇ ಪಾವಗಡದಲ್ಲಿ ಸೋಲಾರ್ ಪಾರ್ಕ್ ನಿರ್ಮಾಣ ಮಾಡಿ ಯಶಸ್ವಿಯಾಗಿದ್ದು, ಈಗಿರುವ ಸೋಲಾರ್ ಪಾರ್ಕ್ ಜೊತೆಗೆ ಹೊಸದಾಗಿ 10 ಸಾವಿರ ಎಕರೆಯಲ್ಲಿ 2000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಗುರಿ ಹೊಂದಲಾಗಿದೆ. ಈ ಯೋಜನೆಯು ಕೇಂದ್ರ ಮತ್ತು ರಾಜ್ಯದ ಸಹಭಾಗಿತ್ವದಲ್ಲಿ ನಡೆಯಲಿದ್ದು ರಾಜ್ಯ ಶರ್ಕಾರ ಶೇ. 50, ಕೇಂದ್ರ ಸರಕಾರಿ ಶೇ. 30 ರಷ್ಟು ಸಹಾಯಧನ ನೀಡುತ್ತದೆ. ರೈತರು ಈ ರೀತಿಯ ಘಟಕ ಸ್ಥಾಪಿಸಿದರೆ. ಅವರು ಉಪಯೋಗಿಸಿಕೊಂಡು ಹೆಚ್ಚಾದ ವಿದ್ಯುತ್ ಅನ್ನು ಸರ್ಕಾರ ಯುನಿಟ್ಟಿಗೆ ರೂ. 3.17 ರೂಗಳಿಗೆ ಕೊಂಡುಕೊಳ್ಳಲಾಗುವುದು ಎಂದರು.
ಶಿರಾ ಕ್ಷೇತ್ರದ ಶಾಸಕರು ಹಾಗೂ ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಗಳಾದ ಟಿ.ಬಿ.ಜಯಚಂದ್ರ ಅವರು ನನಗಿಂತಲೂ ಹಿರಿಯ ಶಾಸಕರಿದ್ದಾರೆ. ಅವರು ಕ್ರಿಯಾಶೀಲ ಜನಪ್ರತಿನಿಧಿಗಳು ಇವರಿಗೆ ಸಚಿವ ಸ್ಥಾನ ನೀಡಬೇಕೆಂಬುದು ನನ್ನ ಅನಿಸಿಕೆಯಾಗಿದೆ. ಆದರೆ ಸಚಿವ ಸ್ಥಾನ ನೀಡುವುದು ಬಿಡುವುದನ್ನು ಮುಖ್ಯಮಂತ್ರಿಗಳು, ಹೈಕಮಾಂಡ್ ಬಿಟ್ಟ ವಿಚಾರವಾಗಿದೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಜೀಶಾನ್ ಮೊಹಮದ್, ಉಪಾಧ್ಯಕ್ಷ ಲಕ್ಷ್ಮೀಕಾಂತ, ಸ್ಥಾಯಿ ಸಮಿತಿ ಅಧ್ಯಕ್ಷ ಶಿವಶಂಕರ್, ಶಿರಾ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಿವು ಚಂಗಾವರ, ನಗರಸಭೆ ಮಾಜಿ ಅಧ್ಯಕ್ಷ ಅಮಾನುಲ್ಲಾ ಖಾನ್, ಸದಸ್ಯರಾದ ಅಜಯ್ ಕುಮಾರ್, ಮಹಮ್ಮದ್ ಜಾಫರ್, ಅಜಯ್ ಕುಮಾರ್, ಫಯಾಜ್ ಖಾನ್, ನೂರುದ್ದೀನ್, ಬೆಸ್ಕಾಂ ಎಇಇ ಶಾಂತರಾಜು, ಬೆಸ್ಕಾಂ ಎಸ್ಓ ಮುರಳಿದರ, ಹನುಮಂತರಾಯ, ಚಂಗಾವರ ಮತ್ತು ಚಿಕ್ಕಬಾಣಗೆರೆ ಗ್ರಾಮಗಳ ರೈತರಾದ ಸಿದ್ದಪ್ಪ, ದೊಡ್ಡಬಾಣಗೆರೆ ರಂಗನಾಥಪ್ಪ, ಸೋಮಣ್ಣ, ಕುರುಬ ರಾಮನಹಳ್ಳಿ ಕರಿಯಣ್ಣ ಸೇರಿದಂತೆ ರಾಮ್ ತರಂಗ ಸಲ್ಯೂಷನ್ ಲಿಮಿಟೆಡ್ ನ ಅಧಿಕಾರಿಗಳು, ಸಿಬ್ಬಂದಿ ವರ್ಗ, ಬೆಸ್ಕಾಂ ಸಿಬ್ಬಂದಿ ಸೇರಿದಂತೆ ಹಲವರು ಹಾಜರಿದ್ದರು.