ಚವನ್ ಪ್ರಾಶ್ ಸೇವನೆಯಿಂದ ರೋಗ ನಿರೋಧಕ ಶಕ್ತಿ ವೃದ್ಧಿ

KannadaprabhaNewsNetwork | Published : May 21, 2025 2:12 AM
ಚಿತ್ರದುರ್ಗ ಬುದ್ಧ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ಜಿಲ್ಲಾ ಆಯುಷ್ ಅಧಿಕಾರಿ ಚಂದ್ರಕಾಂತ ನಾಗಸಮುದ್ರ ಅವರು ಕ್ಷಯರೋಗಿಗಳಿಗೆ ಚವನ್‌ ಪ್ರಾಶ ವಿತರಿಸಿದರು.
Follow Us

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಆರೋಗ್ಯ ಇಲಾಖೆಯಿಂದ ಕೊಡುವ ಚವನ್ ಪ್ರಾಶ ಸೇವನೆಯಿಂದಾಗಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ್ ನಾಗಸಮುದ್ರ ಹೇಳಿದರು.

ಇಲ್ಲಿನ ಬುದ್ಧ ನಗರದ ನಗರ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ಆಶಾ ಮಾಸಿಕ ಸಭೆಯಲ್ಲಿ ಕ್ಷಯರೋಗ ನಿಯಂತ್ರಿಸಲು ಚಿಕಿತ್ಸೆ ಪಡೆಯುತ್ತಿರುವ ಫಲಾನುಭವಿಗಳಿಗೆ ಆಯುಷ್ ಪುಷ್ಟಿಕರ ಔಷಧಿ ಚವನ್ ಪ್ರಾಶ್ ವಿತರಿಸಿ ಮಾತನಾಡಿದ ಅವರು, ಚವನ್ ಪ್ರಾಶ್ ಯಾವುದೇ ರೋಗ ವಾಸಿಯಾಗಲು ಸಹಕರಿಸುತ್ತದೆ. ಕ್ಷಯರೋಗಿಗಳಿಗೆ ಚವನ ಪ್ರಾಶ್ ಉತ್ತಮ ಪೂರಕ ಔಷಧಿ. ಆರೋಗ್ಯ ಇಲಾಖೆ ವತಿಯಿಂದ ನೀಡುವ ಮಾತ್ರೆಗಳ ಜೊತೆಗೆ ಈ ಔಷಧಿಯನ್ನು ಸೇವಿಸುವುದರಿಂದ ಶೀಘ್ರ ಗುಣಮುಖ ಹೊಂದಬಹುದು ಎಂದು ತಿಳಿಸಿದರು.

ಆಯುಷ್ ವೈದ್ಯ ಡಾ.ಶಿವಕುಮಾರ್ ಮಾತನಾಡಿ, ಎಲ್ಲಾ ವೈದ್ಯ ಪದ್ಧತಿಗಳು ಕೈಜೋಡಿಸಿ ಸಂಯುಕ್ತವಾಗಿ ಪ್ರಯತ್ನಿಸಿದಾಗ ಸಮುದಾಯದಲ್ಲಿ ಉತ್ತಮ ಆರೋಗ್ಯ ನೀಡಲು ಸಾಧ್ಯ. ಚವನ ಪ್ರಾಶವು ಕ್ಷಯ ರೋಗಿಗಳಲ್ಲಿ ಶಕ್ತಿಯನ್ನು ನೀಡುತ್ತದೆ ಹಾಗೂ ಪೂರಕ ಪೋಷಕಾಂಶಗಳನ್ನು ಒದಗಿಸಿ ಶೀಘ್ರ ಗುಣಮುಖರಾಗಲು ಸಹಕರಿಸುತ್ತದೆ ಎಂದು ತಿಳಿಸಿದರು.

ಆಯುಷ್ ಇಲಾಖೆಯಿಂದ ವಿತರಿಸುವ ಚವನ್ ಪ್ರಾಶ್ ಉತ್ತಮ ಪೌಷ್ಠಿಕಾಂಶಗಳಿಂದ ಕೂಡಿದ್ದು, ಯಾವುದೇ ವಯಸ್ಸಿನವರು ಸೇವಿಸಬಹುದಾಗಿದೆ. ಇದನ್ನು ಒಂದು ಲೋಟ ಹಾಲಿನೊಂದಿಗೆ ಬೆರೆಸಿ ಸೇವಿಸಬಹುದು ಅಥವಾ ನೀರಿನೊಂದಿಗೆ ಬೆರೆಸಿ ತಿನ್ನಬಹುದು. ಇದನ್ನು ಕ್ಷಯರೋಗಿಗಳಿಗೆ ನೀಡುವುದರಿಂದ ಅವರು ಬೇಗ ಗುಣಮುಖರಾಗಬಹುದಾಗಿದೆ. ಎಲ್ಲರೂ ಕೈ ಜೋಡಿಸಿ ಟಿಬಿ ಯನ್ನು ಕೊನೆಗಾಣಿಸೋಣ ಎಂದು ತಿಳಿಸಿದರು. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಟಿ.ಶ್ರೀನಿವಾಸ ಮೂರ್ತಿ, ಕ್ಷಯರೋಗ ನಿಯಂತ್ರಣ ಕಚೇರಿಯ ನಂದನ್, ಎಸ್‍ಟಿಎಸ್ ನಾಗರಾಜ್, ಟಿಬಿಹೆಚ್‍ವಿ ಸಂತೋಷ್, ಲೋಕೇಶ್, ಫಾರ್ಮಸಿ ಅಧಿಕಾರಿ ಭೂತರಾಜ್, ಆರೋಗ್ಯ ನಿರೀಕ್ಷಣಾಧಿಕಾರಿ ಕೋಟೇಶ್ ಚಕ್ರವರ್ತಿ, ಅರೋಗ್ಯ ಇಲಾಖೆಯ ಕೇಶವ, ರೇಖಾ, ಆಶಾ ಕಾರ್ಯಕರ್ತೆಯರು ಮತ್ತು ಸಿಬ್ಬಂದಿ ವರ್ಗ ಇದ್ದರು.