- ಆಕ್ರೋಶಗೊಂಡ ಗ್ರಾಮಸ್ಥರಿಂದ ಆಹೋ ರಾತ್ರಿ ಧರಣಿ ಎಚ್ಚರಿಕೆ
ಸಿದ್ದನಕೊಡಿಗೆಯಲ್ಲಿ ಕಳೆದ 2 ದಿನದ ಹಿಂದೆ ಶಾಲೆ ಮಕ್ಕಳನ್ನು ಅಟ್ಟಾಡಿಸಿಕೊಂಡು ಹೋಗಿದ್ದ ತುಂಟ ಆನೆ ಬುಧವಾರ ಹಾಗೂ ಗುರುವಾರ ರಾತ್ರಿ ಗುಬ್ಬಿಗಾ,ಅರಳಿಕೊಪ್ಪ ಗ್ರಾಮದ ತೋಟಗಳಿಗೆ ನುಗ್ಗಿ ಬಾಳೆ, ಅಡಕೆ,ತೆಂಗು ಹಾಗೂ ನಾಟೀ ಮಾಡಿದ ಭತ್ತವನ್ನು ತಿಂದು ಹಾಕಿದ್ದು ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಶುಕ್ರವಾರ ಚಿಕ್ಕ ಅಗ್ರಹಾರ ವಲಯ ಅರಣ್ಯಾಧಿಕಾರಿಗಳ ಕಚೇರಿಗೆ ಧಾವಿಸಿ ಮತ್ತೆ ಮನವಿ ಪತ್ರ ಅರ್ಪಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮಸ್ಥರು ಮಾತನಾಡಿ ಅರಳಿಕೊಪ್ಪ ಗ್ರಾಮದ ಗುಡ್ಡಿಕೆರೆ, ಸಿದ್ದನಕೊಡಿಗೆ, ಗುಬ್ಬಿಗಾ ಗ್ರಾಮದ ಟಂಕಬೈಲು, ಕೋಡಿಗಳ್ಳ ಎಂಬ ಹಳ್ಳಿಯ ಹಲವು ರೈತರ ಅಡಕೆ,ತೆಂಗು, ಬಾಳೆ ಹಾಗೂ ನಾಟೀ ಮಾಡಿದ ಭತ್ತದ ಗದ್ದೆ ತುಳಿದು ಸಸಿಯನ್ನು ತಿಂದು ಹಾಕಿದೆ. 1 ತಿಂಗಳಿಂದ ಒಂಟಿ ಆನೆ ಇಲ್ಲೇ ಸುತ್ತಾಡುತ್ತಿದೆ. ಸೋಮವಾರದ ಒಳಗೆ ಒಂಟಿ ಸಲಗ ಹಿಡಿಯುವ ಬಗ್ಗೆ ಸೃಷ್ಟ ಭರವಸೆ ನೀಡಬೇಕು.ಇಲ್ಲದಿದ್ದರೆ ಆಹೋ ರಾತ್ರಿ ಧರಣಿ ನಡೆಸುತ್ತೇವೆ.ಅಲ್ಲದೆ ಮುಂಬರುವ ಚುನಾವಣೆಗೆ ಬಹಿಷ್ಕಾರ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.ಚಿಕ್ ಅಗ್ರಹಾರ ವಲಯ ಅರಣ್ಯಾಧಿಕಾರಿ ಮಧುಕರ ಮನವಿ ಸ್ವೀಕಾರ ಮಾಡಿ ಮಾತನಾಡಿ, ಒಂಟಿ ಆನೆ ಸೆರೆ ಹಿಡಿಯುವ ಬಗ್ಗೆ ಸರ್ಕಾರದ ಅನುಮತಿ ಕೇಳುತ್ತೇವೆ ಎಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಎಚ್.ಡಿ. ಲೋಕೇಶ್, ಸಿದ್ದನಕೊಡಿಗೆ ಮನು, ಮಾವಿನ ಮನೆ ಮಂಜುನಾಥ್, ಕರ್ನಾಟಕ ರಕ್ಷಣಾ ವೇದಿಕೆಯ ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮ ಶ್ರೀನಿವಾಸ್ ಸೇರಿದಂತೆ ನೂರಾರು ಗ್ರಾಮಸ್ಥರು ಇದ್ದರು.