ಮಾರ್ಚ್‌ನಿಂದ ಮಹಾನಗರಕ್ಕೆ ನಿರಂತರ ನೀರು: ಮೇಯರ್‌

KannadaprabhaNewsNetwork |  
Published : Feb 05, 2026, 02:15 AM IST
ಹುಬ್ಬಳ್ಳಿಯ ಪಾಲಿಕೆ ಮೇಯರ್‌ ಕಚೇರಿಯಲ್ಲಿ ಬುಧವಾರ ಫೋನ್‌ ಇನ್‌ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. | Kannada Prabha

ಸಾರಾಂಶ

ಹಲವಾರು ವಾರ್ಡ್​ಗಳಿಗೆ ನಿರಂತರ ನೀರು ಪೂರೈಕೆಗಾಗಿ ಪೈಪ್​ಗಳನ್ನು ಅಳವಡಿಸಲಾಗಿದ್ದರೂ, ಅಲ್ಲಿ 3-4 ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿತ್ತು. ಈ ಎಲ್ಲ ವಾರ್ಡ್​ಗಳಿಗೆ ಮಾರ್ಚ್​ನಿಂದ ನಿರಂತರ ನೀರು ಪೂರೈಸಲಾಗುವುದು.

ಹುಬ್ಬಳ್ಳಿ:

ಮಾರ್ಚ್‌ನಿಂದ ಹು-ಧಾ ಮಹಾನಗರ ಪಾಲಿಕೆಯ ಎಲ್ಲ ವಾರ್ಡ್​ಗಳಿಗೆ ನಿರಂತರ ನೀರು ಪೂರೈಸಲಾಗುವುದು ಎಂದು ಮೇಯರ್​ ಜ್ಯೋತಿ ಪಾಟೀಲ ಹೇಳಿದರು.

ಬುಧವಾರ ಮಹಾನಗರ ಪಾಲಿಕೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಫೋನ್​ ಇನ್​ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಕುರಿತು ಚರ್ಚಿಸಲು ಫೆ. 10ರಂದು ವಿಶೇಷ ಸಾಮಾನ್ಯ ಸಭೆ ಆಯೋಜಿಸಲಾಗಿದೆ ಎಂದರು.

ಹಲವಾರು ವಾರ್ಡ್​ಗಳಿಗೆ ನಿರಂತರ ನೀರು ಪೂರೈಕೆಗಾಗಿ ಪೈಪ್​ಗಳನ್ನು ಅಳವಡಿಸಲಾಗಿದ್ದರೂ, ಅಲ್ಲಿ 3-4 ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿತ್ತು. ಈ ಎಲ್ಲ ವಾರ್ಡ್​ಗಳಿಗೆ ಮಾರ್ಚ್​ನಿಂದ ನಿರಂತರ ನೀರು ಪೂರೈಸಲಾಗುವುದು. ಇನ್ನುಳಿದ ವಾರ್ಡ್​ಗಳಲ್ಲಿ ಪೈಪ್​ ಅಳವಡಿಕೆ ಕಾಮಗಾರಿ ನಡೆಯುತ್ತಿದೆ ಎಂದರು.

ಈಗಾಗಲೇ ಎಲ್​ ಆ್ಯಂಡ್​ ಟಿ ಕಂಪನಿ ಹುಬ್ಬಳ್ಳಿ-ಧಾರವಾಡದಲ್ಲಿ 24 ಒವರ್​ ಹೆಡ್​ ಟ್ಯಾಂಕ್​ಗಳನ್ನು ನಿರ್ಮಿಸುತ್ತಿದ್ದು, ಕಾಮಗಾರಿ ಅಂತಿಮ ಹಂತದಲ್ಲಿದೆ. ಅಮ್ಮಿನಬಾವಿಯಿಂದ ಹುಬ್ಬಳ್ಳಿಗೆ ಪ್ರತ್ಯೇಕ ಪೈಪ್​ ಅಳವಡಿಕೆ ಕಾಮಗಾರಿ ಬಹುತೇಕ ರ್ಪೂಣಗೊಂಡಿದ್ದು, ರಾಯಾಪುರ ಬಳಿ 17.6 ಕಿಮೀ ವರೆಗಿನ ಅಲ್ಪಮಟ್ಟಿನ ಕಾಮಗಾರಿ ಬಾಕಿ ಇದೆ. ಅಮ್ಮಿನಬಾವಿಯಿಂದ 18 ಎಂಎಲ್​ಡಿ ನೀರು ನೇರವಾಗಿ ಧಾರವಾಡಕ್ಕೆ ಹಾಗೂ 25 ಎಂಎಲ್​ಡಿ ನೀರು ಹುಬ್ಬಳ್ಳಿಗೆ ಪೂರೈಕೆಯಾಗಲಿದೆ ಎಂದರು.

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು ₹ 324 ಕೋಟಿ ನೀರಿನ ಕರ ಬಾಕಿ ಇದೆ. ಇದರಲ್ಲಿ ಗೃಹ ಬಳಕೆಯದ್ದೇ ₹170 ಕೋಟಿ ಬಾಕಿ ಇದೆ. ಈ ಎಲ್ಲ ಬಾಕಿ ಹಣ ಪಾವತಿಗೆ ಒನ್​ ಟೈಮ್​ ಸೆಟ್ಲಮೆಂಟ್​ (ಒಟಿಎಸ್​) ಯೋಜನೆ ಜಾರಿಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಈ ಬಗ್ಗೆ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಗುವುದು ಎಂದರು.

ಪಾಲಿಕೆ ವ್ಯಾಪ್ತಿಯಲ್ಲಿ ಎಲ್ಲ ಪಿಜಿ ಹಾಸ್ಟೆಲ್​, ಕೋಚಿಂಗ್​ ಸೆಂಟರ್​, 24/7 ಗ್ರಂಥಾಲಯಗಳಿಗೆ ಪೂರೈಕೆ ಮಾಡುವ ನೀರಿಗೆ ವಾಣಿಜ್ಯ ದರದಡಿ ಶುಲ್ಕ ಆಕರಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ಸ್ವಚ್ಛ ಸಂಡೆ ಯೋಜನೆ ಅಡಿ ಒಂದೊಂದು ವಾರ್ಡ್​ನಲ್ಲಿ ಭಾನುವಾರ ಸ್ವಚ್ಛತಾ ಕಾರ್ಯಕ್ರಮ ಕೈಗೊಳ್ಳಲು ಈ ಹಿಂದೆಯೇ ನಿರ್ಧರಿಸಲಾಗಿತ್ತು. ಆದಷ್ಟು ಶೀಘ್ರ ಈ ಯೋಜನೆ ಜಾರಿಗೊಳಿಸಲಾಗುವುದು. ಎಲ್​ಇಡಿ ಬೀದಿ ದೀಪಗಳ ಪ್ರಾತ್ಯಕ ಅಳವಡಿಕೆ ನಡೆಯುತ್ತಿದೆ. ಯಾವ ಪ್ರದೇಶದಲ್ಲಿ ಎಷ್ಟು ವ್ಯಾಟ್​ನ ದೀಪ ಅಳವಡಿಸಬೇಕು ಎಂಬ ಪ್ರಯೋಗ ನಡೆಯುತ್ತಿದೆ. ಈ ಎಲ್ಲ ವಾರ್ಡ್​ಗಳಲ್ಲಿ ಎಲ್​ಇಡಿ ಬೀದಿದೀಪ ಅಳವಡಿಸಲಾಗುವುದು ಎಂದರು.

ಫೋನ್‌ ಇನ್‌ ಕಾರ್ಯಕ್ರಮದಲ್ಲಿ 25 ಕರೆಗಳು ಬಂದಿದ್ದು, 35 ದೂರುಗಳು ದಾಖಲಾಗಿವೆ ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ಉಪ ಆಯುಕ್ತ ವಿಜಯಕುಮಾರ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಕ್ಷಸಿಯ ಆಡಳಿತ ವಿನಾಶವಾಗಿ ಪ್ರಜಾಪ್ರಭುತ್ವ ಗೆಲ್ಲಲಿ
ಕ್ಷೇತ್ರದಲ್ಲಿ 30 ಸಾವಿರ ಅನರ್ಹ ಮತ ರದ್ದಾಗುವ ಸಾಧ್ಯತೆ