- ತಾಂತ್ರಿಕ ಜವಾಬ್ದಾರಿ ಗ್ರಾಹಕರ ಸ್ವಘೋಷಣೆ ಮೇಲೆ ವಹಿಸೋದು ಸೂಕ್ತವಲ್ಲ: ಲಕ್ಷ್ಮಣ- - -
ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ನಿಯಮಗಳಲ್ಲಿ ವಿದ್ಯುತ್ ಸುರಕ್ಷತೆ, ತಾಂತ್ರಿಕ ಜವಾಬ್ಧಾರಿ ಹಾಗೂ ಗ್ರಾಹಕರ ಹಕ್ಕುಗಳನ್ನು ಎತ್ತಿ ಹಿಡಿಯುವಂತೆ ರಾಜ್ಯ ಅನುಮತಿ ಪಡೆದ ಎಸ್ಸಿ-ಎಸ್ಟಿ ವಿದ್ಯುತ್ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಬಿ.ಲಕ್ಷ್ಮಣ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯುತ್ ಸಂಪರ್ಕ ಪ್ರಕ್ರಿಯೆ ಸರಳೀಕರಣದ ಹೆಸರಿನಲ್ಲಿ ಸುರಕ್ಷತಾ ಮಾನದಂಡ ಸಡಿಲಗೊಳಸಬಾರದು. ಸಂಪೂರ್ಣ ತಾಂತ್ರಿಕ ಜವಾಬ್ದಾರಿಯನ್ನು ಗ್ರಾಹಕರ ಸ್ವಂಯ ಘೋಷಣೆ ಮೇಲೆ ವಹಿಸುವುದು ಸೂಕ್ತವಲ್ಲ ಎಂದರು.ವೈರಿಂಗ್ ನಕ್ಷೆ, ಪರೀಕ್ಷಾ ವರದಿ ಮತ್ತು ಪೂರ್ಣಗೊಳಿಸುವಿಕೆ ದಾಖಲೆಗಳನ್ನು ಕೇವಲ ಆಡಳಿತಾತ್ಮಕ ಹೊರೆ ಎಂಬುದಾಗಿ ಪರಿಗಣಿಸದೇ, ವಿದ್ಯುತ್ ಸುರಕ್ಷತಾ ತಪಾಸಣೆಗಾಗಿ ಕಡ್ಡಾಯವಾಗಿ ಕಾಯ್ದುಕೊಳ್ಳಬೇಕು. ಬಹುಮಹಡಿ ಕಟ್ಟಡದ ಮಿತಿಯನ್ನು 35 ಕಿಲೋ ವ್ಯಾಟ್ನಿಂದ 150 ಕಿಲೋವ್ಯಾಟ್ಗೆ ಹೆಚ್ಚಿಸುವ ಪ್ರಸ್ತಾಪವನ್ನು ಸ್ವತಂತ್ರ ತಾಂತ್ರಿಕ ಸುರಕ್ಷತಾ ಅಧ್ಯಯನ ಇಲ್ಲದೆ ಜಾರಿಗೆ ತರಬಾರದು ಎಂದು ಹೇಳಿದರು.
ಹೊಸ ನಿಯಮಗಳಿಂದ ಸಣ್ಣ ಮತ್ತು ಮಧ್ಯಮ ಉದ್ಯಮ, ವಾಣಿಜ್ಯ ಸಂಸ್ಥೆ, ಅಪಾರ್ಟ್ಮೆಂಟ್ ಹಾಗೂ ಸಾಮಾನ್ಯ ಗ್ರಾಹಕರ ಮೇಲೆ ಬೀರುವ ಆರ್ಥಿಕ ಪರಿಣಾಮಗಳ ಬಗ್ಗೆ ಮೌಲ್ಯಮಾಪನ ಪ್ರಕಟಿಸಬೇಕು. ಸ್ಥಳೀಯ ತಪಾಸಣೆ ಮತ್ತು ಶಾಸನಬದ್ಧ ತಪಾಸಣೆ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಯಾವುದೇ ನಿಯಮಗಳನ್ನು ಕೈ ಬಿಡಬೇಕು. ಸ್ವಯಂಘೋಷಣೆ ವ್ಯವಸ್ಥೆಯಿದ್ದರೂ ಅದನ್ನು ಕೇಂದ್ರ ವಿದ್ಯುತ್ ಪ್ರಾಧಿಕಾರದ ಸುರಕ್ಷತಾ ನಿಯಮ, ತಾಂತ್ರಿಕ ಪರೀಕ್ಷೆ ಮತ್ತು ವೃತ್ತಿಪರ ಹೊಣೆಗಾರಿಕೆಗೆ ಒಳಪಡಿಸಬೇಕು ಎಂದು ಲಕ್ಷ್ಮಣ ಮನವಿ ಮಾಡಿದರು.
- - -