ದಸರಾ ಉತ್ಸವ ಯಶಸ್ವಿಗೆ ಸಹಕರಿಸಿ: ಭೋಸರಾಜು

KannadaprabhaNewsNetwork |  
Published : Sep 17, 2025, 01:08 AM IST
ಚಿತ್ರ :  16ಎಂಡಿಕೆ4 : ದಸರಾ ಪೂರ್ವಭಾವಿ ಸಭೆ ನಡೆಯಿತು.  | Kannada Prabha

ಸಾರಾಂಶ

ಉತ್ತಮ ರೀತಿಯಲ್ಲಿ ಕೊಡಗಿನ ಹೆಸರನ್ನು ಉನ್ನತ ಮಟ್ಟದಲ್ಲಿ ತಲುಪಿಸಬೇಕು ಎಂದು ಸಚಿವರು ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಐತಿಹಾಸಿಕ ಮಡಿಕೇರಿ ಹಾಗೂ ಗೋಣಿಕೊಪ್ಪ ದಸರಾ ಉತ್ಸವ ಯಶಸ್ವಿಯಾಗಲು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಹಾಗೂ ಸಮಿತಿಯ ಪ್ರಮುಖರು ಕಾರ್ಯಪ್ರವೃತ್ತರಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೋಸರಾಜು ಹೇಳಿದರು.

ನಗರದ ಜಿಲ್ಲಾಧಿಕಾರಿ ಭವನದಲ್ಲಿ ಸೋಮವಾರ ನಡೆದ ದಸರಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ ಉತ್ತಮ ರೀತಿಯಲ್ಲಿ ಕೊಡಗಿನ ಹೆಸರನ್ನು ಉನ್ನತ ಮಟ್ಟದಲ್ಲಿ ತಲುಪಿಸಬೇಕು ಎಂದು ಹೇಳಿದರು.

ಮಡಿಕೇರಿ ಹಾಗೂ ಗೋಣಿಕೊಪ್ಪ ದಸರಾ ಸಮಿತಿಯೊಂದಿಗೆ ನಾವಿದ್ದೇವೆ. ಪ್ರತಿಯೊಂದು ಹಂತದಲ್ಲಿಯೂ ನಾವಿರುತ್ತೇವೆ. ತಮ್ಮ ಸಹಕಾರ ಅತ್ಯಗತ್ಯ ಎಂದು ದಸರಾ ಸಮಿತಿಯ ಅಧ್ಯಕ್ಷರನ್ನು ಉದ್ದೇಶಿಸಿ ಮಾತನಾಡಿದರು. ನಾಡ ಹಬ್ಬದಸರಾವನ್ನು ಯಾವುದೇ ಅಡೆತಡೆಯಿಲ್ಲದೆ ಗೊಂದಲಗಳಿಲ್ಲದೆ ನಡೆಸುವುದಾಗಿ ಅಧಿಕಾರಿಗಳಿಗೆ ಸೂಚಿಸಿದರು. ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಮಾತನಾಡಿ ವಿಶೇಷವಾಗಿ ರಸ್ತೆ ಅಭಿವೃದ್ಧಿಗೆ ಒತ್ತು ನೀಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಕರಗಸಾಗುವುದು ರಾತ್ರಿ ವೇಳೆಯಲ್ಲಿ ಆಗಿರುವುದರಿಂದ ಸೆಸ್ಕಾಂ ಅವರು ಯಾವುದೇ ಅಡಚಣೆ ಇಲ್ಲದೆ ವಿದ್ಯುತ್‌ ಸಂಪರ್ಕವನ್ನು ನೀಡಬೇಕಾಗಿದೆ ಎಂದು ಸೂಚಿಸಿದರು.

ಅಚ್ಚುಕಟ್ಟಾಗಿ ನಡೆಸೋಣ:

ದಶಮಂಟಪಗಳ ಸುತ್ತ ನಿಷೇಧಾಜ್ಞೆಯನ್ನು ಹೇರಬೇಕು ಹಾಗೆಯೇ ಮಂಟಪಗಳ ಬಳಿ ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜನೆ ಮಾಡಬೇಕೆಂದು ತಿಳಿಸಿದರು. ಜಿ.ಎಸ್.ಟಿ ಬಿಲ್ ಗಳನ್ನು ಆದಷ್ಟು ಬೇಗ ನೀಡಬೇಕು ಎಂದು ತಿಳಿಸಿದರು. ಗ್ರಾಮದ ನಾಡ ಹಬ್ಬವನ್ನು ಒಟ್ಟಾಗಿ ಸೇರಿ ಅಚ್ಚುಕಟ್ಟಾಗಿ ನಡೆಸೋಣ ಎಂದು ದಸರಾ ಸಮಿತಿಯ ಅಧ್ಯಕ್ಷರುಗಳಿಗೆ ತಿಳಿಸಿದರು.

ಮಡಿಕೇರಿ ದಸರಾ ಸಮಿತಿಯ ಅಧ್ಯಕ್ಷರಾದ ಅರುಣ್ ಮಾತನಾಡಿ 161 ವರ್ಷದ ಇತಿಹಾಸವಿರುವ ಮಡಿಕೇರಿ ದಸರಾವನ್ನು ವಿಜೃಂಭಣೆಯಿಂದ ಮಾಡುವುದಾಗಿ ತಿಳಿಸಿದರು. ಪ್ರತಿಯೊಂದು ಹಂತದಲ್ಲಿಯೂ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಅಧಿಕಾರಿಗಳಿಗೆ ತಿಳಿಸಿದರು. ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಅನುದಾನವನ್ನು ನೀಡಿರುವುದು ಸಂತಸ ತಂದಿದೆ. ಅನುದಾನವನ್ನು ಸರಿಯಾದ ಕ್ರಮದಲ್ಲಿ ಉಪಯೋಗಿಸುತ್ತೇವೆ ಎಂದು ಗಣ್ಯರಿಗೆ ಆಶ್ವಾಸನೆ ನೀಡಿದರು.

ಕಳೆದ ಬಾರಿ ಯಂತೆಯೇ ಈ ಬಾರಿಯೂ ದಸರಾವನ್ನು ಅತ್ಯಂತ ಯಶಸ್ವಿಯಾಗಿ ನಡೆಸುತ್ತೇವೆ, ಕಾರ್ಯಕ್ರಮಗಳಾದ ಕ್ರೀಡೆ, ಮಕ್ಕಳ ದಸರಾ, ಮಹಿಳಾ ದಸರಾ, ಸಾಂಸ್ಕೃತಿಕ ಕಾರ್ಯಕ್ರಮ ಯುವದಸರಾ, ದಶಮಂಟಪದ ಕಾರ್ಯಕ್ರಮ ಪ್ರತಿಯೊಂದು ಕಾರ್ಯಕ್ರಮಗಳು ಅತ್ಯಂತ ಸುಸಜ್ಜಿತವಾಗಿ ನಡೆಯುತ್ತದೆ ಎಂದು ಅಧಿಕಾರಿಗಳಿಗೆ ಪ್ರತಿಕ್ರಿಯಿಸಿದರು.

23 ರಿಂದ ಸಾಂಸ್ಕೃತಿಕ ಕಾರ್ಯಕ್ರಮ:

ದಸರಾ ಸಾಂಸ್ಕೃತಿಕ ಅಧ್ಯಕ್ಷರಾದ ಸಂತೋಷ್ ಮಾತನಾಡಿ, ಸೆಪ್ಟೆಂಬರ್ 23 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾಗಲಿದೆ. ಸಂಜೆ ಮೂರರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾಗಲಿದ್ದು ಜಿಲ್ಲಾಡಳಿತದಿಂದ 13 ಲಕ್ಷ ಹಣವನ್ನು ನೀಡಿದ್ದು ಯಾವುದೇ ದುರುಪಯೋಗಪಡಿಸಿದೆ ಹಣವನ್ನು ಖರ್ಚು ಮಾಡಲಾಗುವುದು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಗೋಣಿಕೊಪ್ಪ ದಸರಾ ಸಮಿತಿ ಅಧ್ಯಕ್ಷರಾದ ಪ್ರಮೋದ್ ಮಾತನಾಡಿ, ಸರ್ಕಾರದ ಅನುದಾನದಿಂದ ಅದ್ದೂರಿಯಾಗಿ ದಸರಾವನ್ನು ನಡೆಸುತ್ತೇವೆ. ಗೋಣಿಕೊಪ್ಪ ದಸರಾಗೆ ಅನುದಾನವನ್ನು ಹೆಚ್ಚಿಸಬೇಕು ಎಂದು ಅಧಿಕಾರಿಗಳಲ್ಲಿ ಮನವಿ ಮಾಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮಾತನಾಡಿ, ಡಿ.ಜೆ ಶಬ್ದದಿಂದ ಹೃದಯಾಘಾತವಾಗಿ ಮೃತವಾಗಿರುವ ಸಂಖ್ಯೆ ಮೂರಕ್ಕೆ ಏರಿದ್ದು ಅದಕ್ಕಾಗಿ ಡಿಜೆ ಯನ್ನು ಮಿತವಾಗಿ ಬಳಸುವಂತೆ ದಸರಾ ಸಮಿತಿ ಅವರಿಗೆ ತಿಳಿಸಿದರು.

ಪಾರದರ್ಶಕ ಖರ್ಚು ವೆಚ್ಚ:

ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ. ಎಸ್ ಪೊನ್ನಣ್ಣ ಮಾತನಾಡಿ ಸರ್ಕಾರದಿಂದ ಈಗಾಗಲೇ ಅನುದಾನವು ಬಿಡುಗಡೆಯಾಗಿದ್ದು ಇರುವ ಅನುದಾನದಲ್ಲೇ ಪಾರದರ್ಶಕವಾಗಿ ಖರ್ಚು ವೆಚ್ಚ ಮಾಡಬೇಕು ಎಂದು ಸೂಚಿಸಿದರು.

ಜಿಲ್ಲಾಧಿಕಾರಿ ವೆಂಕಟರಾಜ ಮಾತನಾಡಿ ಹಣದ ಖರ್ಚು-ವೆಚ್ಚವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ತಿಳಿಸಿದರು. ಮಿತವಾಗಿ ಬಳಸಿ ಅದರ ಬಿಲ್ ಗಳನ್ನು ಶೀಘ್ರದಲ್ಲಿಯೇ ತಲುಪಿಸಬೇಕು ಎಂದು ತಿಳಿಸಿದರು. ಯಾವುದಾದರೂ ಒಂದು ಅಹಿತಕರ ಘಟನೆ ನಡೆದರೆ ಮುಂದಿನ ಬಾರಿ ದಸರಾಕ್ಕೆ ಅವಕಾಶವೇ ಇರುವುದಿಲ್ಲ ಎಂದು ಎಚ್ಚರಿಸಿದರು.

ಅಪರ ಜಿಲ್ಲಾಧಿಕಾರಿಗಳಾದ ಐಶ್ವರ್ಯ.ಆರ್, ಮಡಿಕೇರಿ ನಗರಸಭೆ ಅಧ್ಯಕ್ಷರಾದ ಕಲಾವತಿ.ಪಿ, ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಧರ್ಮಜ ಉತ್ತಪ್ಪ, ಕೊಡಗು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಆನಂದ್ ಪ್ರಕಾಶ್ ಮೀನಾ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''