ಆನಂದ್ ಎಂ. ಸೌದಿ
ಕಲಬುರಗಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಯಾದಗಿರಿ ಜಿಲ್ಲೆ ವ್ಯಾಪ್ತಿಯ ಗುರುಮಠಕಲ್ ವಿಧಾನಸಭಾ ಮತಕ್ಷೇತ್ರದಲ್ಲಿ ತಾಂಡಾಗಳ (ಬಂಜಾರಾ) ಮತಗಳು ನಿರ್ಣಾಯಕ. ಡಾ.ಜಾಧವ್ ಅವರಿಗೆ ಪಾಟೀಸವಾಲು ಅನ್ನುವಂತೆ, ಇದರಿಂದಾಗಿ ಸಮುದಾಯದ ಮತಗಳ ವಿಭಜನೆ ಸಾಧ್ಯತೆ ಇದೆ ಎಂಬ ರಾಜಕೀಯ ಲೆಕ್ಕಾಚಾರಗಳಿವೆ.
"ದಳ "ಪತಿಗಳ ಕಡೆಗೆಣನೆ, ಕಂದಕೂರು ಚಿಂತನೆ:ಬಿಜೆಪಿ- ಜೆಡಿಎಸ್ ಮೈತ್ರಿ ಪ್ರಸ್ತಾವದ ಆರಂಭದಲ್ಲೇ ಶಾಸಕ ಕಂದಕೂರ ತೀವ್ರ ಆಕ್ಷೇಪಿಸಿ, ಜೆಡಿಎಸ್ ರಾಜಕೀಯ ಭವಿಷ್ಯಕ್ಕೆ ಮೈತ್ರಿ ಮಾರಕವಾಗಲಿದೆ ಎನ್ನುವ ಆತಂಕ ವ್ಯಕ್ತಪಡಿಸಿದ್ದರು. ರಾಜ್ಯಸಭೆ ಚುನಾವಣೆ ವೇಳೆ ಶಾಸಕ ಕಂದಕೂರರನ್ನು ಸಮಾಧಾನ ಪಡಿಸಿದ್ದ ಮಾಜಿ ಸಿಎಂ ಎಚ್ಡಿಕೆ ಹಾಗೂ ತಂಡ, ಮೈತ್ರಿ ಅಭ್ಯರ್ಥಿ ಪರವಾಗಿ ನಿಲ್ಲುವಂತೆ ಮಾಡಿದ್ದರು.
ಕಲಬುರಗಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಗುರುಮಠಕಲ್ ವಿಧಾನಸಭಾ ಕ್ಷೇತ್ರದ ಬಗ್ಗೆ ಬಿಜೆಪಿ ಅಭ್ಯರ್ಥಿ ಡಾ.ಉಮೇಶ ಜಾಧವ್ ನಿರಾಸಕ್ತಿ ತೋರಿದಂತಿದೆ. ಮೋದಿ ಅಲೆ ಹಾಗೂ ಹೆಚ್ಚಿರುವ ಬಂಜಾರಾ ಸಮುದಾಯದ ಮತಗಳು ಹೇಗಿದ್ದರೂ ತಮಗೇ ಬೀಳಲಿವೆ ಎಂಬ ಭ್ರಮೆಯಲ್ಲಿ ಅವರಿದ್ದಾರೆ ಎಂದು ಟೀಕಿಸಿರುವ ಶಾಸಕ ಕಂದಕೂರ, ಜೆಡಿಎಸ್ ಕಡೆಗೆಣಿಸಿದ ಬಗ್ಗೆ ತಮಗೆ ಹಾಗೂ ಬೆಂಬಲಿಗರಿಗೆ ನೋವಾಗಿದೆ. ಹೀಗಾಗಿ, ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಗುರುಮಠಕಲ್ ಭಾಗದ ಬಂಜಾರಾ ಸಮದಾಯದ ವ್ಯಕ್ತಿಯೊಬ್ಬರನ್ನು ಪಕ್ಷೇತರ ಅಭ್ಯರ್ಥಿಯನ್ನಾಗಿಸಿ, ಪರೋಕ್ಷವಾಗಿ ಅವರಿಗೆ ಬೆಂಬಲಿಸುವ ಬಗ್ಗೆ ತಮ್ಮ ಮತಕ್ಷೇತ್ರದ ಅನೇಕರು ಹಾಗೂ ಅಭಿಮಾನಿಗಳು ಇರಾದೆ ವ್ಯಕ್ತಪಡಿಸಿದ್ದಾರೆ ಎಂದು ಕನ್ನಡಪ್ರಭಕ್ಕೆ ಪ್ರತಿಕ್ರಿಯಿಸಿದರು. ಮುಂದಿನ ಎರಡ್ಮೂರು ದಿನಗಳಲ್ಲಿ ಸಭೆ ನಡೆಸಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
2023ರ ವಿಧಾನಸಭೆ ಚುನಾವಣೆ ವೇಳೆ ಬಂಜಾರಾ ಸಮುದಾಯದ (ತಾಂಡಾಗಳ) ಬಹುತೇಕ ಮತಗಳು ಜೆಡಿಎಸ್ ಅಭ್ಯರ್ಥಿ ಶರಣಗೌಡ ಪರವಾಗಿದ್ದವು ಎನ್ನಲಾಗಿದೆ. ಶಾಸಕ ಸ್ಥಾನಕ್ಕೆ ಪ್ರಮಾಣವಚನ ಸ್ವೀಕಾರ ವೇಳೆ ಬಂಜಾರಾ ಸಮುದಾಯದ ಸಂತ ಸೇವಾಲಾಲ್ ಹೆಸರನ್ನು ಉಲ್ಲೇಖಿಸಿದ್ದ ಕಂದಕೂರ, ತಮ್ಮ ಗೆಲುವಿನಲ್ಲಿ ಬಂಜಾರಾ ಸಮುದಾಯದ ಪಾತ್ರ ಮಹತ್ವದ್ದು ಎಂದಿದ್ದರು.