ಹೊಸದಾಗಿ ಕಿರು ಉದ್ದಿಮೆ ಆರಂಭಿಸುವವರಿಗೆ ಸಹಕಾರ

KannadaprabhaNewsNetwork |  
Published : Sep 12, 2025, 01:00 AM IST
ಪೋಟೋ: 11ಎಸ್ಎಂಜಿಕೆಪಿ02ಶಿವಮೊಗ್ಗದಲ್ಲಿ ನಡೆದ ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಹಾಗೂ ಆತ್ಮ ಯೋಜನೆ ಕುರಿತಾದ ಅರಿವು ಮೂಡಿಸುವ ಕಾರ್ಯಕ್ರಮವನ್ನು ಡಾ.ಆರ್.ಸಿ ಜಗದೀಶ್ ಉದ್ಘಾಟಿಸಿದರು. | Kannada Prabha

ಸಾರಾಂಶ

ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯು ಒಂದು ವಿಶೇಷ ಯೋಜನೆಯಾಗಿದ್ದು, ಹೊಸದಾಗಿ ಕಿರು ಉದ್ದಿಮೆ ಆರಂಭಿಸುವವರಿಗೆ ಕೃಷಿ ವಿಶ್ವವಿದ್ಯಾಲಯದಿಂದ ಲಭ್ಯವಿರುವ ಎಲ್ಲ ಸಹಕಾರ ನೀಡಲಾಗುವುದು ಎಂದು ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಆರ್.ಸಿ.ಜಗದೀಶ್ ತಿಳಿಸಿದರು.

ಶಿವಮೊಗ್ಗ: ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯು ಒಂದು ವಿಶೇಷ ಯೋಜನೆಯಾಗಿದ್ದು, ಹೊಸದಾಗಿ ಕಿರು ಉದ್ದಿಮೆ ಆರಂಭಿಸುವವರಿಗೆ ಕೃಷಿ ವಿಶ್ವವಿದ್ಯಾಲಯದಿಂದ ಲಭ್ಯವಿರುವ ಎಲ್ಲ ಸಹಕಾರ ನೀಡಲಾಗುವುದು ಎಂದು ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಆರ್.ಸಿ.ಜಗದೀಶ್ ತಿಳಿಸಿದರು.

ಆತ್ಮನಿರ್ಭರ ಭಾರತ ಅಭಿಯಾನ, ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತ, ಜಿಲ್ಲಾಡಳಿತ, ಜಿ.ಪಂ, ಜಿಲ್ಲಾ ಕೃಷಿ ತರಬೇತಿ ಕೇಂದ್ರ ಹಳ್ಳಿಕೆರೆ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ಗುರುವಾರ ಜಿ.ಪಂ.ಸಭಾಂಗಣದಲ್ಲಿ ಫಲಾನುಭವಿಗಳಿಗೆ ಏರ್ಪಡಿಸಿದ್ದ ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಹಾಗೂ ಆತ್ಮ ಯೋಜನೆ ಕುರಿತಾದ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹೊಸದಾಗಿ ಕಿರು ಉದ್ದಿಮೆ ಆರಂಭಿಸುವವರಿಗೆ ವಿಶ್ವವಿದ್ಯಾಲಯದಿಂದ ಸಂಸ್ಕರಣೆಗೆ ಜಾಗ, ಪ್ರಯೋಗಾಲಯ ಹಾಗೂ ಬ್ಯಾಂಕ್ ಮೂಲಕ ಸಾಲ ಕೂಡ ಕೊಡಿಸಲಾಗುವುದು. ಜಿಲ್ಲೆಯಿಂದ 100 ಟನ್‌ಗಳಷ್ಟು ಅಪ್ಪೆ ಮಿಡಿ ವಿದೇಶಕ್ಕೆ ರಫ್ತಾಗುತ್ತಿದೆ. ಮೆಕ್ಕೆಜೋಳದಿಂದ 50ಕ್ಕೂ ಹೆಚ್ಚಿನ ಬಗೆಯ ಖಾದ್ಯವನ್ನು ಮಾಡಬಹುದು. ಹೊಸ ಹೊಸ ಖಾದ್ಯಗಳ ಸಂಶೋಧನೆಗೂ ಅವಕಾಶ ಇದೆ. ಮಸಾಲೆ ಪದಾರ್ಥಗಳ ಸಂಶೊಧನೆಗಳನ್ನು ಕೂಡ ಮಾಡಬಹುದು ಎಂದು ತಿಳಿಸಿದರು.

ಅಣಬೆ ಹಾಗೂ ಬೇಕರಿ ಉದ್ಯಮದಲ್ಲಿ ಆಸಕ್ತಿ ಇರುವರಿಗೆ ತರಬೇತಿ ನೀಡಲಾಗುತ್ತದೆ. ಚಾಕೊಲೇಟ್ ಉದ್ಯಮ ಮಾಡುವವರಿಗೂ ಪ್ರೋತ್ಸಾಹ ನೀಡಲಾಗುತ್ತದೆ. ವಿವಿಧ ಖಾದ್ಯಗಳಲ್ಲಿ ವಿಟಮಿನ್ ಮತ್ತು ಪ್ರೋಟಿನ್ ಮಟ್ಟವನ್ನು ಪರೀಕ್ಷೆ ಮಾಡಲಾಗುತ್ತದೆ ಎಂದ ಅವರು, ತಾಂತ್ರಿಕತೆ ಬಗ್ಗೆ ತರಬೇತಿ ಹಾಗೂ ಖಾದ್ಯಗಳ ಪ್ಯಾಕಿಂಗ್‌ಗೂ ತರಬೇತಿ ನೀಡಲಾಗುವುದು. ನಮ್ಮಲ್ಲಿರುವ ವಿಜ್ಞಾನಿಗಳು ಮತ್ತು ಸೌಲಭ್ಯಗಳನ್ನು ರೈತರು, ಆಸಕ್ತರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕೆಎಪಿಪಿಇಸಿಯ ವ್ಯವಸ್ಥಾಪಕ ನಿರ್ದೇಶಕ ಸಿ.ಎ.ಶಿವಪ್ರಕಾಶ್ ಮಾತನಾಡಿ, ರೈತರ ಆದಾಯ ಹೆಚ್ಚಿಸಿ ಅವರನ್ನೂ ಉದ್ದಿಮೆದಾರರನ್ನಾಗಿ ಮಾಡುವ ಉದ್ದೇಶದಿಂದ ಈ ಯೋಜನೆಯನ್ನು 2020-21ರಲ್ಲಿ ಪ್ರಾರಂಭಿಸಲಾಗಿದೆ. 15 ಲಕ್ಷ ರು. ವರೆಗೆ ಸಹಾಯಧನ ನೀಡಲಾಗುವುದು. ಈ ಯೋಜನೆಯಡಿ ಕೇಂದ್ರ ಮತ್ತು ರಾಜ್ಯ ಸೇರಿ 10 ಸಾವಿರ ಕೋಟಿ ರು. ಮಂಜೂರಾಗಿದ್ದು, ರಾಜ್ಯದ ಪಾಲು 493.65 ಕೋಟಿ ರು. ಆಗಿದೆ. ಈ ಯೋಜನೆಯು ದೇಶದ ಆರ್ಥಿಕತೆಗೆ ಉತ್ತಮ ಕೊಡುಗೆ ನೀಡುತ್ತಿದೆ. ರೈತರು ಬೆಳೆಗೆ ಉತ್ತಮ ಬೆಲೆ ಸಿಗಬೇಕಾದರೆ ಉತ್ಪನ್ನಗಳ ಮೌಲ್ಯವರ್ಧನೆ ಮಾಡಬೇಕು. ಈ ಯೋಜನೆ ಮೌಲ್ಯವರ್ಧನೆಗೆ ಬಹು ಮುಖ್ಯ ವಲಯವಾಗಿದ್ದು, ನಿರಂತರ ಬೆಳೆಯುತ್ತಿರುವ ಕ್ಷೇತ್ರವಾಗಿದೆ. ಈವರೆಗೆ ಸಿರಿಧಾನ್ಯದ 2 ಸಾವಿರ ಘಟಕಗಳಿಗೆ ಸಹಾಯಧನ ನೀಡಲಾಗಿದೆ ಎಂದು ಹೇಳಿದರು.

ಪದವಿ ಮುಗಿಸಿ, ಕಂಪ್ಯೂಟರ್ ಜ್ಞಾನ ಹೊಂದಿದವರು ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳಾಗಿ ಸೇವೆ ಸಲ್ಲಿಸಬಹುದು. ಒಂದು ಪ್ರಾಜೆಕ್ಟ್ ಗೆ 20 ಸಾವಿರ ರು. ಸಿಗುತ್ತದೆ. ಈ ಯೋಜನೆಯಡಿ ಶಿವಮೊಗ್ಗ ರಾಜ್ಯದಲ್ಲಿ 5ನೇ ಸ್ಥಾನದಲ್ಲಿದ್ದು, ಉತ್ತಮ ಕೆಲಸ ಮಾಡುತ್ತಿದೆ. ಜಿಲ್ಲೆಯಲ್ಲಿ ಉತ್ತಮ ಸಂಪನ್ಮೂಲವಿದ್ದು ಆಹಾರ ಸಂಸ್ಕರಣೆಗೆ ಭಾರಿ ಅವಕಾಶ ಇದ್ದು ಉತ್ತಮ ಉದ್ಯೋಗಾವಕಾಶ ಸೃಷ್ಟಿಸಲಾಗುತ್ತಿದೆ ಎಂದರು.

ಜಂಟಿ ಕೃಷಿ ನಿರ್ದೇಶಕ ಕಿರಣ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕೆಎಪಿಪಿಇಸಿ ಟೀಂ ಲೀಡರ್ ಅರವಿಂದ, ಲೀಡ್ ಬ್ಯಾಂಕ್ ಮ್ಯಾನೇಜರ್ ಹನುಮಂತಪ್ಪ ಮಾತನಾಡಿದರು.

ಇದೇ ವೇಳೆ ಫಲಾನುಭವಿಗಳೊಂದಿಗೆ ಸಂವಾದ ನಡೆಸಲಾಯಿತು.

ಜಿ.ಪಂ ಉಪ ಕಾರ್ಯದರ್ಶಿ ಸುಜಾತ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ನಾಗರಾಜ್, ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಬಾಬುರಾಮ್, ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ಶಿವಕುಮಾರ್ ಸೇರಿದಂತೆ ಇತರೆ ಅಧಿಕಾರಿಗಳು, ಯೋಜನೆಯ ಫಲಾನುಭವಿಗಳು ಪಾಲ್ಗೊಂಡಿದ್ದರು.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ