ಸಾಂಸ್ಕೃತಿಕ ಯುವಜನೋತ್ಸವಕ್ಕೆ ಸಹಕಾರ: ಕವಿವಿ ಕುಲಪತಿ ಗುಡಸಿ

KannadaprabhaNewsNetwork | Published : Apr 5, 2024 1:03 AM

ಪಠ್ಯೇತರ ಚಟುವಟಿಕೆಗಳಲ್ಲಿ ಮತ್ತು ಸಾಂಸ್ಕೃತಿಕ ಯುವಜನೋತ್ಸವದಲ್ಲಿ ಭಾಗವಹಿಸಲು ವಿದ್ಯಾರ್ಥಿಗಳಿಗೆ ಕರ್ನಾಟಕ ವಿಶ್ವವಿದ್ಯಾಲಯ ಎಲ್ಲ ರೀತಿಯಿಂದ ಸಹಕಾರ ನೀಡಲು ಸಿದ್ಧ.

ಧಾರವಾಡ:

ಪಠ್ಯೇತರ ಚಟುವಟಿಕೆಗಳಲ್ಲಿ ಮತ್ತು ಸಾಂಸ್ಕೃತಿಕ ಯುವಜನೋತ್ಸವದಲ್ಲಿ ಭಾಗವಹಿಸಲು ವಿದ್ಯಾರ್ಥಿಗಳಿಗೆ ಕರ್ನಾಟಕ ವಿಶ್ವವಿದ್ಯಾಲಯ ಎಲ್ಲ ರೀತಿಯಿಂದ ಸಹಕಾರ ನೀಡಲು ಸಿದ್ಧ ಎಂದು ಕುಲಪತಿ ಪ್ರೊ. ಕೆ.ಬಿ. ಗುಡಸಿ ಹೇಳಿದರು.

ಪಂಜಾಬಿನ ಲುಧಿಯಾನದ ಪಂಜಾಬ್‌ ಕೃಷಿ ವಿಶ್ವವಿದ್ಯಾಲಯವು ಮಾ. 28ರಿಂದ ಏ. 1ರ ವರೆಗೆ ಆಯೋಜಿಸಿದ್ದ 37ನೇ ರಾಷ್ಟ್ರಮಟ್ಟದ ಅಂತರ ವಿಶ್ವವಿದ್ಯಾಲಯದ ಯುವ ಜನೋತ್ಸವದಲ್ಲಿ ಭಾಗವಹಿಸಿ ಪ್ರಶಸ್ತಿ ಗಳಿಸಿದ ಕವಿವಿ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಸಿಕ್ಕ ಅವಕಾಶ ಬಳಸಿಕೊಳ್ಳಬೇಕು. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕು. ವಿದ್ಯಾರ್ಥಿಗಳ ಪಠ್ಯೇತರ ಚಟುವಟಿಕೆಗಳಿಗೆ ಕರ್ನಾಟಕ ವಿಶ್ವವಿದ್ಯಾಲಯ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧವಿದೆ ಎಂದರು. ವಿದ್ಯಾರ್ಥಿಗಳು ಸಾಧನೆ ಮಾಡುವ ಛಲ ಹೊಂದಿದಾಗ ಮಾತ್ರ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯ ಎಂದರು.

ಕವಿವಿ ವಿದ್ಯಾರ್ಥಿ ಕಲ್ಯಾಣ ಅಧಿಕಾರಿ ಡಾ. ಸಿತಾರಾಂ ಪವಾರ ಮಾತನಾಡಿ, ದೇಶದ ಎಂಟು ವಲಯಗಳ 117 ವಿಶ್ವವಿದ್ಯಾಲಯಗಳು ಯುವಜನೋತ್ಸವದಲ್ಲಿ ಭಾಗವಾಗಿದ್ದವು. ಇದರಲ್ಲಿ ಕವಿವಿಯ ಕರ್ನಾಟಕ ಕಾಲೇಜು, ಜೆಎಸ್‌ಎಸ್ ಮತ್ತು ಕಾರವಾರದ ಶಿವಾಜಿ ಕಾಲೇಜಿನ 14 ವಿದ್ಯಾರ್ಥಿಗಳು ವಿವಿಧ ಏಳು ಸ್ಪರ್ಧೆಗಳಲ್ಲಿ ವಿಜೇತರಾಗಿ ಕವಿವಿಗೆ ಕೀರ್ತಿ ತಂದಿದ್ದಾರೆ ಎಂದು ಹೇಳಿದರು.

ಯುವಜನೋತ್ಸವದ ತಂಡದ ನಿರ್ವಾಹಕ ಡಾ. ದಿನೇಶ ನಾರಾಯಣಕರ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಪ್ರತಿಭೆ, ಕೌಶಲ್ಯ ತರುವಲ್ಲಿ ಈ ಯುವಜನೋತ್ಸವಗಳು ಸಹಕಾರಿಯಾಗಿವೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಯಾವುದೇ ಒಂದು ವಿಷಯದಲ್ಲಿ ಹವ್ಯಾಸ ಬೆಳೆಸಿಕೊಂಡು ಸಾಧನೆಗೆ ಬಳಸಿಕೊಳ್ಳಬೇಕು ಎಂದರು.

ಭಾಗವಹಿಸಿದ ಕವಿವಿ ರಸಾಯನಶಾಸ್ತ್ರ ವಿಭಾಗದ ವಿದ್ಯಾರ್ಥಿ ಪ್ರಶಾಂತ ಬಿರಾದರ ಮಾತನಾಡಿ, ಸ್ಪರ್ಧೆಯಲ್ಲಿ ಭಾಗವಹಿಸುವುದು ಬಹಳ ಮುಖ್ಯ. ಸಾಂಸ್ಕೃತಿಕ ವೇದಿಕೆಗಳನ್ನು ವಿದ್ಯಾರ್ಥಿಗಳು ಸಮರ್ಥವಾಗಿ ಬಳಕೆ ಮಾಡಿಕೊಳ್ಳಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯು ತನ್ನದೆ ಆದ ಪ್ರತಿಭೆ ಹೊಂದಿರುತ್ತಾನೆ ಎಂದರು.

ಕವಿವಿ ಕುಲಸಚಿವ ಡಾ. ಎ. ಚೆನ್ನಪ್ಪ, ಮೌಲ್ಯಮಾಪನ ಕುಲಸಚಿವ ಡಾ. ನಿಜಲಿಂಗಪ್ಪ ಮಟ್ಟಿಹಾಳ್, ಹಣಕಾಸು ಅಧಿಕಾರಿ ಪ್ರೊ. ಸಿ. ಕೃಷ್ಣಮೂರ್ತಿ, ಡಾ. ಬಿ.ಎಚ್. ನಾಗೂರ, ಡಾ. ನಾಗರಾಜ ಮುಗದೂರ, ಡಾ. ವಿಶ್ವನಾಥ ಚಚಡಿ, ಡಾ. ಶಿವಶರಣ ಹಾಗೂ ಯುವಜನೋತ್ಸವದಲ್ಲಿ ಭಾಗವಹಿಸಿ ಪ್ರಶಸ್ತಿಗಳಿಸಿದ ವಿದ್ಯಾರ್ಥಿಗಳು ಇದ್ದರು.