ಕನ್ನಡಪ್ರಭ ವಾರ್ತೆ ವಿಜಯಪುರ
ಬಬಲೇಶ್ವರ ತಾಲೂಕಿನ ಕಾತ್ರಾಳ ಗ್ರಾಮದಲ್ಲಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಬಡವರಿಗೆ ಸಾಲ ಸಿಗುವುದು ಪ್ರಾಥಮಿಕ ಸಹಕಾರಿ ಸಂಘದಲ್ಲಿ ಮಾತ್ರ. ಸಣ್ಣ ರೈತರಿಗೆ ರಾಷ್ಟ್ರೀಕೃತ ಬ್ಯಾಂಕುಗಳು ಸಾಲ ಕೊಡಲ್ಲ. ಕಷ್ಟದಲ್ಲಿದ್ದಾಗಲೂ ಸಹಕಾರಿ ಸಂಘಗಳ ಸಾಲ ಮನ್ನಾ ಆಗಿ ಅದೆಷ್ಟೋ ರೈತರಿಗೆ ಅನುಕೂಲವಾಗಿದೆ. ರಾಜ್ಯದಲ್ಲಿ 65 ಲಕ್ಷ ರೈತರಲ್ಲಿ 35 ಲಕ್ಷ ರೈತರು ಸಹಕಾರಿ ಸಂಘಗಳಲ್ಲಿ ಸಾಲ ಪಡೆಯುತ್ತಿದ್ದಾರೆ ಎಂದು ಹೇಳಿದರು.
ರೈತರೇ ಸಾಲ ಕೊಡುವ ಮಟ್ಟಕ್ಕೆ ಬೆಳೆಯಬೇಕು. ದೇಶದಲ್ಲಿ ರೈತರ ಬೆಳೆಗಳಿಗೆ ಸ್ಥಿರ ಬೆಲೆ ನಿಗದಿಯಾದರೆ ಅವರ ಪ್ರಗತಿ ಸಾಧ್ಯ. ಈ ಭಾಗದಲ್ಲಿ ನೀರಾವರಿಯಿಂದ ಸದ್ಯ ತೋಟಗಾರಿಕೆ, ಹೈನುಗಾರಿಕೆ ಹೆಚ್ಚಿ ರೈತರು ಬ್ಯಾಂಕುಗಳಲ್ಲಿ ವ್ಯವಹಾರ ಮಾಡುವಂತಾಗಿದೆ. ಜಿಲ್ಲೆಯಲ್ಲಿ 270 ಸಂಘಗಳಲ್ಲಿ 250 ಸಂಘಗಳು ಕಚೇರಿ ಹೊಂದಿದ್ದು ರಾಜ್ಯದಲ್ಲಿಯೇ ದಾಖಲೆಯಾಗಿದೆ ಎಂದು ಹೇಳಿದರು.ಕೈಗಾರಿಕೆ, ಮೂಲಸೌಲಭ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಸಂಘದ ಕಚೇರಿ ಉದ್ಘಾಟಿಸಿ ಮಾತನಾಡಿ, ನೀರಾವರಿ ಯೋಜನೆಗಳಿಂದಾಗಿ ಜಮೀನುಗಳಿಗೆ ನೀರು ದೊರೆತು ಇಲ್ಲಿನ ರೈತರು ಸಮೃದ್ಧವಾಗಿದ್ದಾರೆ. ಇಪ್ಪತ್ತೇಳು ಪ್ಯಾಕೇಜ್ಗಳ ಮೂಲಕ ಸಂಪೂರ್ಣ ನೀರಾವರಿಯ ಕನಸು ಈಡೇರಲಿದೆ. ಅಂತರ್ಜಲಮಟ್ಟ ಹೆಚ್ಚಿ ದುರ್ಗಮ ಪ್ರದೇಶವಾಗಿದ್ದ ಟಕ್ಕಳಕಿಯಂಥ ಗ್ರಾಮದಲ್ಲೂ ಹೈನುಗಾರಿಕೆ ಕೈಗೂಡಿದೆ. ಅಕ್ಷಯಕಲ್ಪ ಮೂಲಕ ಪ್ರತಿ ಬಿಎಲ್ಡಿಇ ಸಂಸ್ಥೆಯಿಂದ ಸಹಾಯಧನ ನೀಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಡಿಸಿಸಿ ಬ್ಯಾಂಕಿನ ನೆರವನ್ನೂ ಪಡೆಯುತ್ತೇವೆ ಎಂದರು.
ಸಾನ್ನಿಧ್ಯ ವಹಿಸಿದ್ದ ಮಮದಾಪುರದ ಶ್ರೀ ಮುರಘೇಂದ್ರ ಸ್ವಾಮೀಜಿ ಮಾತನಾಡಿ, ಬಬಲೇಶ್ವರದ ಪ್ರತಿ ಊರಲ್ಲಿ ಸಹಕಾರಿ ಬ್ಯಾಂಕ್ಗಳ ಕಟ್ಟಡಗಳಾಗಿವೆ. ಗ್ರಾಮೀಣರ ಪ್ರಗತಿಗೆ ಇವುಗಳ ಅಗತ್ಯವಿದೆ. ಸಚಿವರು ನೀರು ನೀಡಿದ್ದರಿಂದ ಇಲ್ಲಿನ ರೈತರು ಶ್ರೀಮಂತರಾಗಿದ್ದು, ಅವರೆಲ್ಲ ಬ್ಯಾಂಕುಗಳನ್ನು ಬಳಸಿಕೊಂಡು ಇನ್ನಷ್ಟು ಅಭಿವೃದ್ಧಿಯಾಗಬೇಕು ಎಂದು ಹೇಳಿದರು.