ರಾಜ್ಯ ಸರ್ಕಾರ ರೈತರ ಸಹಕಾರಿ ಸಂಘಗಳಿಗೆ ಹೆಚ್ಚಿನ ಅನುದಾನ ನೀಡುತ್ತಿಲ್ಲ. ಜತೆಗೆ ಹೆಸರು, ಮೆಕ್ಕಜೋಳ ಖರೀದಿ ಕೇಂದ್ರಗಳಿಗೆ ಹೆಚ್ಚಿನ ಸಹಕಾರ ನೀಡುವಲ್ಲಿ ನಿರ್ಲಕ್ಷ್ಯ ವಹಿಸಿದೆ.
ತಾಲೂಕಾ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ವಾರ್ಷಿಕ ಸಭೆಯಲ್ಲಿ ಮಾಜಿ ಸಚಿವ
ಕನ್ನಡಪ್ರಭ ವಾರ್ತೆ ಯಲಬುರ್ಗಾ
ರೈತರಿಗೆ ಸಹಕಾರಿ ಸಂಘಗಳು ಜೀವನಾಡಿಗಳಾಗಿದ್ದು, ಮಂಡಳಿಯವರ ನಿಷ್ಠೆ, ನಿಸ್ವಾರ್ಥ ಸೇವೆಯಿಂದ ಸಹಕಾರಿ ಸಂಘಗಳು ಅಭಿವೃದ್ದಿ ಹೊಂದಲು ಸಾಧ್ಯ ಎಂದು ಸಂಘದ ನಿರ್ದೇಶಕ ಹಾಗೂ ಮಾಜಿ ಸಚಿವ ಹಾಲಪ್ಪ ಆಚಾರ ಹೇಳಿದರು.
ಪಟ್ಟಣದ ತಾಲೂಕಾ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ನಿಯಮಿತ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ೬೫ನೇ ವಾರ್ಷಿಕ ಸಭೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಜ್ಯ ಸರ್ಕಾರ ರೈತರ ಸಹಕಾರಿ ಸಂಘಗಳಿಗೆ ಹೆಚ್ಚಿನ ಅನುದಾನ ನೀಡುತ್ತಿಲ್ಲ. ಜತೆಗೆ ಹೆಸರು, ಮೆಕ್ಕಜೋಳ ಖರೀದಿ ಕೇಂದ್ರಗಳಿಗೆ ಹೆಚ್ಚಿನ ಸಹಕಾರ ನೀಡುವಲ್ಲಿ ನಿರ್ಲಕ್ಷ್ಯ ವಹಿಸಿದೆ. ಹೀಗಾಗಿ ರೈತರು ಬೆಳೆದ ಬೆಳೆಗಳಿಗೆ ಸಮರ್ಪಕವಾಗಿ ಬೆಂಬಲ ದೊರೆಯದೆ ನಷ್ಟ ಅನುಭವಿಸುವಂತಾಗಿದೆ. ಇನ್ನೂ ತಾಲೂಕಿನ ಚಿಕ್ಕೋಪ್ಪ ತಾಂಡಾದಲ್ಲಿ ಸರ್ಕಾರದ ಕೋಟ್ಯಂತರ ಹಣ ವೆಚ್ಚ ಮಾಡಿ ಉಗ್ರಾಣ ನಿರ್ಮಿಸಿರುವುದು ಯಾವ ರೈತರಿಗೆ ಅನುಕೂಲವಾಗಿದೆ. ಎಲ್ಲ ರೈತರಿಗೆ ಅಗತ್ಯವಿರುವ ಉಗ್ರಾಣವನ್ನು ಪಟ್ಟಣದಲ್ಲಿ ನಿರ್ಮಿಸಿದ್ದರೆ ಎಷ್ಟು ಅನುಕೂಲವಾಗುತ್ತಿತ್ತು ಎಂದು ಶಾಸಕರ ವಿರುದ್ಧ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದರು.
ಟಿಎಪಿಪಿಸಿಎಂಎಸ್ ಮಾಜಿ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ ಮಾತನಾಡಿ, ತಾಲೂಕಿನಲ್ಲಿ ೩೨ ಸಹಕಾರಿ ಸಂಘಗಳು ನಷ್ಟದಿಂದ ದಿವಾಳಿಗೊಂಡಿದ್ದವು. ಆಗ ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದ ಹಾಲಪ್ಪ ಆಚಾರರ ಈ ಭಾಗಕ್ಕೆ ಹೆಚ್ಚು ಅನುದಾನ ನೀಡುವ ಮೂಲಕ ಸಹಕಾರಿ ಸಂಘಗಳನ್ನು ಪುನಃಶ್ಚೇತನಗೊಳಿಸಿದರು ಎಂದು ಹೇಳಿದರು.
ಟಿಎಪಿಸಿಎಂಎಸ್ ಅಧ್ಯಕ್ಷ ಶಿವಕುಮಾರ ನಾಗಲಾಪೂರಮಠ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಪಪಂ ಅಧ್ಯಕ್ಷ ಅಂದಯ್ಯ ಕಳ್ಳಿಮಠ, ಆರ್ಕೆಡಿಸಿಸಿ ನಿರ್ದೇಶಕ ಶೇಖರಗೌಡ ಉಳ್ಳಾಗಡ್ಡಿ, ವಿಎಸ್ಎಸ್ ಸಂಘದ ಅಧ್ಯಕ್ಷ ಷಣ್ಮಖಪ್ಪ ರಾಂಪೂರ, ನಿವೃತ್ತ ಬ್ಯಾಂಕ್ ಅಧಿಕಾರಿ, ಬಾಳಪ್ಪ ಅಳೆಹೊನ್ನಪವರ್, ಶರಣಪ್ಪ ರಾಂಪೂರ ಸೇರಿದಂತೆ ಸಂಘದ ಉಪಾಧ್ಯಕ್ಷರು, ಸರ್ವ ನಿರ್ದೇಶಕರು, ಸಂಘದ ವ್ಯವಸ್ಥಾಪಕ ದೇವೇಂದ್ರಪ್ಪ ಬನ್ನಪ್ಪನವರ್ ಮತ್ತಿತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.