
ಕನ್ನಡಪ್ರಭ ವಾರ್ತೆ, ತುಮಕೂರು
ಶನಿವಾರ ನಗರದಲ್ಲಿ ತುಮಕೂರು ಸಿಟಿ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯ 14ನೇ ವರ್ಷದ ಸರ್ವಸದಸ್ಯರ ಸಭೆ ಉದ್ಘಾಟಿಸಿ ಮಾತನಾಡಿದ ಸ್ವಾಮೀಜಿ, ತುಮಕೂರು ಜಿಲ್ಲೆಯು ಸಹಕಾರಿ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಠತೆ ಹೊಂದಿದೆ. ಜಿಲ್ಲೆಯ ಸಹಕಾರಿ ಪಿತಾಮಹರಾಗಿರುವ ಕೆ.ಎನ್. ರಾಜಣ್ಣನವರ ಕಾಳಜಿ, ಪ್ರೋತ್ಸಾಹದಿಂದಾಗಿ ಜಿಲ್ಲೆಯಲ್ಲಿ 3 ಸಾವಿರಕ್ಕೂ ಹೆಚ್ಚು ಸಹಕಾರಿ ಸಂಸ್ಥೆಗಳು ಸ್ಥಾಪನೆಯಾಗಿ ಲಕ್ಷಾಂತರ ಜನರಿಗೆ ಸಹಕಾರಿಯಾಗಿವೆ ಎಂದರು.
ನೀವು ಚೆನ್ನಾಗಿದ್ದರೆ ನಾವೂ ಚೆನ್ನಾಗಿರುತ್ತೇವೆ ಎಂಬುದು ಸಹಕಾರಿಯ ಉದ್ದೇಶ. ಸರ್ವಜನರೂ ಸುಖವಾಗಿರಬೇಕು ಎಂಬ ಬಹುಜನರ ಹಿತ ಬಯಸುವ ಸಹಕಾರಿ ಕ್ಷೇತ್ರ ಪರಸ್ಪರ ಬೆಳವಣಿಗೆಗೆ ಪೂರಕವಾಗಿದೆ. ಸಹಾಯಾಸ್ತವು ಈಗ ಸಹಕಾರಿ ಹಸ್ತವಾಗಿದೆ. ಸಹಕಾರಿ ಸಂಸ್ಥೆಗಳನ್ನು ಬಳಸಿಕೊಂಡು ಆರ್ಥಿಕವಾಗಿ ಬೆಳವಣಿಗೆಯಾಗಬಹುದು, ಸಕಾಲದಲ್ಲಿ ಸಾಲ ಮರುಪಾವತಿ ಮಾಡಿ ಸಂಸ್ಥೆಯನ್ನೂ ಉಳಿಸಿ ಬೆಳೆಸಬೇಕು ಎಂದು ಹೇಳಿದರು.14 ವರ್ಷಗಳ ಹಿಂದೆ ಸಮಾನ ಮನಸ್ಕರು ಸ್ಥಾಪನೆ ಮಾಡಿದ ತುಮಕೂರು ಸಿಟಿ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಇಂದು ದೊಡ್ಡ ಪ್ರಮಾಣದಲ್ಲಿ ಆರ್ಥಿಕ ಚಟುವಟಿಕೆ ನಡೆಸಿ ಬಹಳಷ್ಟು ಜನರ ಆರ್ಥಿಕ ಬದಲಾವಣೆಗೆ ಕಾರಣವಾಗಿದೆ. ಸಂಸ್ಥೆಗಳು ನಿರಂತರ ಬೆಳವಣಿಗೆ ಆಗುತ್ತಿರಬೇಕು. ಆಗ ಮತ್ತಷ್ಟು ಜನರಿಗೆ ಅವುಗಳಿಂದ ಸಹಾಯವಾಗುತ್ತದೆ ಎಂದು ಸ್ವಾಮೀಜಿ ಹೇಳಿದರು.
ಸಹಕಾರಿಯು ಮೂರು ಶಾಖೆಗಳನ್ನು ಹೊಂದಿದ್ದು ಎಲ್ಲವೂ ಪ್ರಗತಿಯಲ್ಲಿವೆ. ಸಂಸ್ಥೆಯಿಂದ ಸದಸ್ಯರಿಗೆ ಹಲವು ರೀತಿಯ ಸಹಾಯ ದೊರೆಯುತ್ತಿದೆ. 10 ಸಾವಿರ ರು ಮರಣೋತ್ತರ ನಿಧಿ ಹಾಗೂ ಸದಸ್ಯರ ಆರೋಗ್ಯ ಸೇವೆಯಲ್ಲಿ ಸಹಾಯ ಮಾಡಲು, ಯಾವುದಾದರೂ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಲ್ಲಿ 10ರಿಂದ 25 ಸಾವಿರ ರು. ಸಹಾಯ ಪಡೆಯಬಹುದು ಎಂದು ಹೇಳಿದರು.