ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಸಮೀಪದ ಮಾಕವಳ್ಳಿಯ ಕೋರಮಂಡಲ್ ಸಕ್ಕರೆ ಕಾರ್ಖಾನೆಯಲ್ಲಿ ಪ್ರಸಕ್ತ ಸಾಲಿನ ಕಬ್ಬು ನುರಿಯುವಿಕೆಗಾಗಿ ಬಾಯ್ಲರ್ಗೆ ಅಗ್ನಿಸ್ಪರ್ಶ ಮಾಡಲಾಯಿತು.ನಂತರ ಮಾತನಾಡಿದ ಕಾರ್ಖಾನೆ ಹಿರಿಯ ಉಪಾಧ್ಯಕ್ಷ ವಿ.ಜೆ.ರವಿ, ರೈತರ ಜೀವನಾಡಿಯಾದ ಕಾರ್ಖಾನೆಗೆ ಹೆಚ್ಚು ಕಬ್ಬು ಸರಬರಾಜು ಮಾಡಿ ಕಾರ್ಖಾನೆ ಅಭಿವೃದ್ಧಿ ಜೊತೆಗೆ ವೈಯಕ್ತಿಕ ಅಭಿವೃದ್ಧಿ ಕಾಣುವಂತೆ ಸಲಹೆ ನೀಡಿದರು.
ಕಳೆದ ಸಾಲಿನಲ್ಲಿ ಬರದಿಂದಾಗಿ ನಿರೀಕ್ಷತ ಪ್ರಮಾಣದಲ್ಲಿ ರೈತರು ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಿಲ್ಲ. ಇದಕ್ಕೂ ಮುನ್ನ ಕೋವಿಡ್ ಸಂಕಷ್ಟ ಕಾಡಿತು. ಸಂಕಷ್ಟದಲ್ಲಿ ಕಾರ್ಖಾನೆ ಕಬ್ಬು ನುರಿಯುವಂತಾಯಿತು ಎಂದರು.ಜಿಲ್ಲೆ, ಹೊರ ಜಿಲ್ಲೆಯ ರೈತರ ಕಬ್ಬು ನುರಿಯಲಾಗಿದೆ. ಪ್ರಸಕ್ತ ಸಾಲಿನಲ್ಲಿ ಕನಿಷ್ಠ 5 ಲಕ್ಷ ಟನ್ ಕಬ್ಬು ನುರಿಯುವ ಗುರಿ ಇದೆ. ಪ್ರತಿನಿತ್ಯ 4 ಸಾವಿರ ಟನ್ ಕಬ್ಬು ನುರಿಯುವ ಸಾಮರ್ಥ್ಯವಿದೆ. ಈಗ ತಾಲೂಕಿನಲ್ಲಿ 13.5 ಸಾವಿರ ಎಕರೆಕಬ್ಬು ಬೆಳೆ ಇದ್ದು, 4 ರಿಂದ 4.5 ಲಕ್ಷ ಟನ್ ಕಬ್ಬಿನ ಲಭ್ಯವಿದೆ. 3.5 ಲಕ್ಷ ಟನ್ ಕಬ್ಬಿನ ಕೊರತೆಯಾಗಲಿದೆ ಎಂದರು.
ಕಬ್ಬುಕಟಾವಿಗಾಗಿ ಕೊಪ್ಪಳ, ವಿಜಯನಗರ, ಬಳ್ಳಾರಿ ಜತೆಗೆ ಸ್ಥಳೀಯ ಕಬ್ಬು ಕಟಾವು ಕಾರ್ಮಿಕ ತಂಡಗಳಿಗೆ 5 ಕೋಟಿ ರು.ಮುಂಗಡ ಹಣ ನೀಡಿ ಸಿದ್ಧತೆ ಮಾಡಲಾಗಿದೆ. ಕಳೆದ ಸಾಲಿನಲ್ಲಿ ಪ್ರತಿ ಟನ್ಗೆ 2944 ರು. ಹಣ ಸಂಪೂರ್ಣವಾಗಿ ಪಾವತಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಕೇಂದ್ರ ಸರ್ಕಾರದ ಎಫ್ಆರ್ಪಿ ದರದಂತೆ ಹಣ ನೀಡಲು ಕಾರ್ಖಾನೆ ಸಿದ್ಧವಿದೆ ಎಂದು ತಿಳಿಸಿದರು.ಶೃಂಗೇರಿ ಶಾರದಾಪೀಠದ ವಿದ್ಯಾಶಂಕರಶರ್ಮ ಸಾರಥ್ಯದಲ್ಲಿ ಗಣಹೋಮ ಮತ್ತಿತರ ಹೋಮ ನಡೆದವು. ಕಬ್ಬು ವಿಭಾಗದ ಹಿರಿಯ ವ್ಯವಸ್ಥಾಪಕ ಕೆ.ಬಾಬೂರಾಜ್, ಅಧಿಕಾರಿಗಳಾದ ವಿಭಾಗೀಯ ಅಧಿಕಾರಿ ಕೆ. ಬಾಬುರಾಜ್, ಇಂಜಿನಿಯರ್ ವಿಭಾಗ ಮುಖ್ಯಸ್ಥ ಪಿ.ಎಸ್. ಮೇಯನ್, ಉತ್ಪಾದನಾ ವಿಭಾಗದ ಅಶೋಕ್ಕುಮಾರ್, ಕೋಜನ್ ವಿಭಾಗದ ಕೆ.ಜಿ. ಮೋಹನ್, ಲೆಕ್ಕಪತ್ರ ವಿಭಾಗದ ಆರ್.ಇ.ಕುಮಾರ್, ಎಚ್.ಆರ್. ವಿಭಾಗದ ನವೀನ್, ಸೂರ್ಯನಾರಾಯಣರೆಡ್ಡಿ, ಸಿಬ್ಬಂದಿ ಇದ್ದರು.