ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಚೇತನ್ ಕುಮಾರ್
ಗ್ರಾಮೀಣ ಉದ್ಯೋಗಾಕಾಂಕ್ಷಿಗಳ ಉಜ್ವಲ ಭವಿಷ್ಯಕ್ಕೆ ಆಪ್ತ ಸಮಾಲೋಚನಾ ಶಿಬಿರ ನೆರವಾಗಲಿದೆ. ಉದ್ಯೋಗಾಕಾಂಕ್ಷಿಗಳು ತಮ್ಮಲ್ಲಿ ಹೆಚ್ಚಿನ ಆತ್ಮವಿಶ್ವಾಸ ಗಳಿಸಲು ಇಂತಹ ಆಪ್ತ ಸಮಾಲೋಚನಾ ಕಾರ್ಯಕ್ರಮಗಳು ನೆರವಾಗುತ್ತದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಚೇತನ್ ಕುಮಾರ್ ಪಿ. ಹೇಳಿದರು.
ಹೊನ್ನಾವರ ತಾಪಂ ಸಭಾಂಗಣದಲ್ಲಿ ಜಿಪಂ ಉತ್ತರ ಕನ್ನಡ, ತಾಲೂಕ ಪಂಚಾಯಿತಿ ಹೊನ್ನಾವರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಹೊನ್ನಾವರ ಹಾಗೂ ಸಂಜೀವಿನಿ ತಾಲೂಕು ಅಭಿಯಾನ ನಿರ್ವಹಣಾ ಘಟಕದ ಆಶ್ರಯದಲ್ಲಿ ಗ್ರಾಮೀಣ ಯುವ ಜನತೆಗೆ ಆಯೋಜಿಸಿದ ಆಪ್ತ ಸಮಾಲೋಚನಾ ಶಿಬಿರ ಉದ್ಘಾಟಿಸಿ ಮಾತನಾಡಿದರು.ವ್ಯಕ್ತಿ ಉದ್ಯೋಗ ಕೈಗೊಳ್ಳುವುದರ ಮೂಲಕ ಸಮಾಜದಲ್ಲಿ ಗೌರವ ಸ್ಥಾನಮಾನ ಆದಾಯ ಗಳಿಸಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಐಶ್ವರ್ಯ ಎಜುಕೇಶನಲ್ ಟ್ರಸ್ಟ್ ಬೆಂಗಳೂರು, ಕ್ಯಾಡ್ ಮ್ಯಾಕ್ಸ್ ಎಜುಕೇಶನ್ ಟ್ರಸ್ಟ್ ತುಮಕೂರು, ನಿರ್ಮಾಣ ಆರ್ಗನೈಸೇಷನ್ ತುಮಕೂರು, ಶ್ರೀ ಅನ್ನಪೂರ್ಣೇಶ್ವರಿ ಎಂಟರ್ಪ್ರೈಸಸ್ ಮಣಿಪಾಲ್ ಸಂಸ್ಥೆಗಳ ಸಂಯೋಜಕರು ಉಪಸ್ಥಿತರಿದ್ದು ಅವಕಾಶಗಳ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ತಾಪಂ ಯೋಜನಾಧಿಕಾರಿ ಲತಾ ನಾಯ್ಕ, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಕೃಷ್ಣ ನಾಯ್ಕ ಮಾರಿ ಮನೆ, ಜೈನಾಬಿ ಸಾಬ್ ಇತರರು ಹಾಜರಿದ್ದರು. ತಾಪಂ ಸಂಜೀವಿನಿ ವಲಯ ಮೇಲ್ವಿಚಾರಕ ಬಾಲಚಂದ್ರ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.