- ಮಕ್ಕಳು, ಹಿರಿಯರು ಇಂಟರ್ನೆಟ್‌ ಅಪರಾಧ ಬಗ್ಗೆ ಜಾಗೃತರಾಗಿರಿ: ಹೆಚ್ಚುವರಿ ಡೀಸಿ

---

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಪ್ರಸ್ತುತ ದಿನಗಳಲ್ಲಿ ಇಂಟರ್ನೆಟ್ ಸುರಕ್ಷತೆ, ಬಳಕೆ, ಇದರಿಂದಾಗುವ ಅನುಕೂಲಗಳು, ಲೋಪ ದೋಷಗಳ ಬಗ್ಗೆ ಅಧಿಕಾರಿಗಳು ಸಿಬ್ಬಂದಿ ಹೆಚ್ಚು ತಿಳಿಯಬೇಕಾದ ಅಗತ್ಯವಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ ಅವರು ಸಲಹೆ ಕೊಟ್ಟರು.

ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಮಹಿತಿ ಸೂಚನಾ ವಿಭಾಗದ (ಎನ್‌ಐಸಿ) ವತಿಯಿಂದ ಸುರಕ್ಷಿತ ಅಂತರ್ಜಾಲ ದಿನದ ಅಂಗವಾಗಿ ಆಯೋಜಿಸಲಾಗಿದ್ದ ಜಾಗೃತಿ ಕಾರ್ಯಾಗಾರದಲ್ಲಿ ಮಾತನಾಡಿದರು.


ತಂತ್ರಜ್ಞಾನದ ಅವಲಂಬನೆ ದಿನೇ ದಿನೇ ಹೆಚ್ಚಾಗುತ್ತಿದೆ. ಇಂಟರ್ನೆಟ್, ಆಧುನಿಕ ತಂತ್ರಜ್ಞಾನ, ಸಾಮಾಜಿಕ ಮಾಧ್ಯಮಗಳು, ಕೃತಕ ಬುದ್ಧಿಮತ್ತೆ ಬಳಸುತ್ತಿರುವ ಇಂದಿನ ದಿನಗಳಲ್ಲಿ ಇದರಿಂದ ಆಗಬಹುದಾದ ಉಪಯೋಗಗಳ ಬಗ್ಗೆ ಅರಿಯಬೇಕಿದೆ. ಜೊತೆಗೆ ಸೈಬರ್ ಅಪರಾಧ, ಮೋಸಜಾಲದ ಬಗ್ಗೆಯೂ ಎಚ್ಚರಿಕೆ ವಹಿಸಬೇಕಿದೆ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಸುರಕ್ಷಿತ ಅಂತರ್ಜಾಲ ದಿನ ಅಚರಣೆಯೊಂದಿಗೆ ಕಾರ್ಯಾಗಾರ ಏರ್ಪಾಡು ಮಾಡಲಾಗಿದೆ ಎಂದು ತಿಳಿಸಿದರು.

ಸೈಬರ್ ಅಪರಾಧ ಪೊಲೀಸ್ ವಿಭಾಗದ ಡಿವೈಎಸ್‌ಪಿ ಎಂ.ಎಸ್. ಪವನ್ ಕುಮಾರ್ ಅವರು,‘18 ವರ್ಷದ ಒಳಗಿನ ಮಕ್ಕಳಿಗೆ ಮೊಬೈಲ್ ನೀಡಬಾರದು. ಭವಿಷ್ಯದ ದೃಷ್ಟಿಯಿಂದ ಮಕ್ಕಳಿಗೆ ಮೊಬೈಲ್ ಗೀಳು ಒಳ್ಳೆಯದಲ್ಲ ಎಂದು ಪೋಷಕರಿಗೆ ಎಚ್ಚರಿಸಿದರು. ಇಲ್ಲವಾದಲ್ಲಿ ಹೆಚ್ಚು ತೊಂದರೆಗೆ ಒಳಗಾಗಬೇಕಾಗುತ್ತದೆ. ವಯಸ್ಕರು ಸಹ ಇಂಟರ್ನೆಟ್, ಸಾಮಾಜಿಕ ಜಾಲತಾಣಗಳನ್ನು ಬಳಸುವಾಗ ತುಂಬಾ ಜಾಗೃತರಾಗಬೇಕು ಎಂದು ಎಂ.ಎಸ್. ಪವನ್ ಕುಮಾರ್ ಅವರು ತಿಳಿಸಿದರು.

ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಸಂದೀಪ್ ಮಾತನಾಡಿ, ‘ಎಐ ಹೆಚ್ಚು ಪರಿಣಾಮಕಾರಿಯಾಗಿರುವ ಇಂದಿನ ಯುಗದಲ್ಲಿ ಇದರ ಸಂಬಂಧಿತ ಅಪಾಯಗಳ ಅರಿವು ಸಹ ಇರಬೇಕಿದೆ’ ಎಂದರು.

ಎನ್‌ಐಸಿಯ ಹಿರಿಯ ತಾಂತ್ರಿಕ ನಿರ್ದೇಶಕರಾದ ಕುಮಾರ್, ಜಿಲ್ಲಾ ಮಾಹಿತಿ ಸೂಚನಾ ಅಧಿಕಾರಿ ಅರವಿಂದ ಚಂದ್ರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

--------------------

10ಸಿಎಚ್‌ಎನ್‌57