ಸಮರ್ಪಣೆ ಸಂಕಲ್ಪ ಸಮಾವೇಶಕ್ಕೆ ಕ್ಷಣಗಣನೆ

KannadaprabhaNewsNetwork |  
Published : May 20, 2025, 01:02 AM IST
19ಎಚ್‌ಪಿಟಿ5,6,7- ಹೊಸಪೇಟೆಯ ವಿಜಯನಗರ ನೆಲದಲ್ಲಿ ರಾಜ್ಯ ಸರ್ಕಾರದ 2ನೇ ವರ್ಷದ ಸಾಧನಾ ಸಮಾವೇಶ ನಡೆಯುತ್ತಿದ್ದು, ಭವ್ಯ ವೇದಿಕೆ ನಿರ್ಮಿಸಲಾಗಿದೆ. | Kannada Prabha

ಸಾರಾಂಶ

ನಗರದಲ್ಲಿ ಮಂಗಳವಾರ ನಡೆಯುವ ಸಮರ್ಪಣೆ ಸಂಕಲ್ಪ ಸಮಾವೇಶಕ್ಕೆ ಕ್ಷಣಗಣನೆ ಆರಂಭವಾಗಿದೆ.

1,11,111 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ

ರಾಹುಲ್‌ ಗಾಂಧಿ, ಖರ್ಗೆ ಆಗಮನಕೃಷ್ಣ ಲಮಾಣಿ

ಕನ್ನಡಪ್ರಭ ವಾರ್ತೆ ಹೊಸಪೇಟೆ

ನಗರದಲ್ಲಿ ಮಂಗಳವಾರ ನಡೆಯುವ ಸಮರ್ಪಣೆ ಸಂಕಲ್ಪ ಸಮಾವೇಶಕ್ಕೆ ಕ್ಷಣಗಣನೆ ಆರಂಭವಾಗಿದೆ.

ರಾಜ್ಯ ಸರ್ಕಾರ ಯಶಸ್ವಿಯಾಗಿ ಜಾರಿ ಮಾಡಿದ ಪಂಚ ಗ್ಯಾರಂಟಿ ಯೋಜನೆಗಳನ್ನು ಮತ್ತಷ್ಟು ಪ್ರಚಾರಪ್ರಿಯಗೊಳಿಸುವುದು ಕಾರ್ಯಕ್ರಮದ ಮೂಲ ಉದ್ದೇಶವಾಗಿದ್ದರೂ ಆರನೇ ಗ್ಯಾರಂಟಿ ಎನ್ನುವಂತೆ ಭೂ ಗ್ಯಾರಂಟಿ ಎನ್ನುವ ಶೀರ್ಷಿಕೆಯಡಿ 1,11,111 ಭೂ ರಹಿತ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ ಮಾಡಲಾಗುತ್ತಿದೆ. ಕಂದಾಯ ಇಲಾಖೆಯ ಮಹತ್ವದ ಯೋಜನೆಗಳನ್ನು ಸಮಾವೇಶದ ಮೂಲಕ ಸರ್ಕಾರ ಸಾಕಾರಗೊಳಿಸುತ್ತಿದೆ. ಪೋಡಿ ಮುಕ್ತ ಅಭಿಯಾನದಲ್ಲಿ 73 ಸಾವಿರ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಅವುಗಳ ಆದೇಶ ಪತ್ರವನ್ನು ಈ ಕಾರ್ಯಕ್ರಮದಲ್ಲಿ ವಿತರಣೆ ಮಾಡಲಾಗುತ್ತಿದೆ. ಸರ್ಕಾರಿ ಜಮೀನಿನಲ್ಲಿ ಸಾಗುವಳಿ ಮಾಡುತ್ತಿದ್ದರೂ ಪಟ್ಟಾ ಸಿಗದೇ ಇರುವ ರೈತ ಕುಟುಂಬಗಳಿಗೆ ಪಟ್ಟಾ ನೀಡುವ ಕಾರ್ಯಕ್ರಮ ಸಮರ್ಪಣೆ ಸಂಕಲ್ಪ ಸಮಾವೇಶದಲ್ಲಿ ಹಮ್ಮಿಕೊಳ್ಳಲಾಗಿದೆ. ಒಟ್ಟಾರೆ ಕಳೆದ ನಾಲ್ಕೈದು ದಶಕಗಳಿಂದ ದಾಖಲೆ ಇಲ್ಲದೆ ಸಂಕಷ್ಟದಲ್ಲಿ ಇದ್ದ ಬಡಜನರಿಗೆ ಹಕ್ಕುಪತ್ರದ ಮೂಲಕ ನೆಮ್ಮದಿ ನೀಡಲು ಸರ್ಕಾರ ಮುಂದಾಗಿದೆ.

1.50 ಲಕ್ಷ ಆಸನ, ಫುಡ್ ಕೌಂಟರ್:

ವಿಜಯನಗರದಲ್ಲಿ ನಡೆಯುತ್ತಿರುವ ಈ ಐತಿಹಾಸಿಕ ಸಮಾವೇಶಕ್ಕೆ 4 ಲಕ್ಷಕ್ಕೂ ಹೆಚ್ಚು ಜನರನ್ನು ಸೇರುವ ನಿರೀಕ್ಷೆಯಿದೆ. ಇದಕ್ಕಾಗಿ ಅಗತ್ಯ ಸಿದ್ಧತೆ ಪೂರೈಸಲಾಗಿದೆ. ಜಿಲ್ಲಾ ಕ್ರೀಡಾಂಗಣದಲ್ಲಿ ಮುಖ್ಯ ವೇದಿಕೆ, ಎರಡು ಬದಿಯಲ್ಲಿ ಪರ್ಯಾಯವಾಗಿ ಎರಡು ವೇದಿಕೆಗಳನ್ನು ನಿರ್ಮಿಸಲಾಗಿದೆ. ವೇದಿಕೆ ಮುಂಭಾಗದಲ್ಲಿ 1.5 ಲಕ್ಷ ಆಸನಗಳ ವ್ಯವಸ್ಥೆ ಮಾಡಲಾಗಿದೆ. 10ಕ್ಕೂ ಹೆಚ್ಚು ಕಡೆಗಳಲ್ಲಿ ಬೃಹತ್ ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗಿದೆ. ಕಾರ್ಯಕ್ರಮಕ್ಕೆ ಜನರನ್ನು ಕರೆತರಲು 3700 ಸಾವಿರ ಸರಕಾರಿ ಬಸ್ ಸೇರಿ 10 ಸಾವಿರ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಆಗಮಿಸುವ ಜನರಿಗೆ ಕುಡಿಯುವ ನೀರು, ಊಟದ ವ್ಯವಸ್ಥೆಯನ್ನೂ ಅಚ್ಚುಕಟ್ಟಾಗಿ ಮಾಡಲಾಗಿದೆ. ಖುದ್ದು ಡಿಸಿಎಂ ಡಿಕೆ ಶಿವಕುಮಾರ್ ಅವರೇ ಎರಡು ಮೇ 18 ಮತ್ತು 19ರಂದು ಆಗಮಿಸಿ ಎಲ್ಲ ಸಿದ್ದತೆಗಳನ್ನು ಪರಿಶೀಲಿಸಿದ್ದಾರೆ. ಸರ್ಕಾರದ ಐತಿಹಾಸಿಕ ಕಾರ್ಯಕ್ರಮ ಇದಾಗಿದ್ದರಿಂದ ವಿಜಯನಗರ ಜಿಲ್ಲೆ ಈಗ ರಾಜ್ಯದ ಗಮನ ಸೆಳೆಯುತ್ತಿದೆ.ಏನಿದು ಕಂದಾಯ ಗ್ರಾಮ?:

ರಾಜ್ಯದಲ್ಲಿರುವ ತಾಂಡಾ, ಹಟ್ಟಿ, ಹಾಡಿ, ಕ್ಯಾಂಪ್, ಕಾಲನಿ, ಮಜಿರೆಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಲು ಆಗಿನ ಶಾಸಕ ಶಿವಮೂರ್ತಿ ನಾಯ್ಕ ಸದನದಲ್ಲೇ ಹೋರಾಟ ನಡೆಸಿದ್ದರು. ಆ ಬಳಿಕ ಎಐಸಿಸಿ ನಾಯಕ ರಾಹುಲ್‌ ಗಾಂಧಿ ಅವರ ಸೂಚನೆ ಮೇರೆಗೆ ಆಗಿನ ಸಿದ್ದರಾಮಯ್ಯ ಸರ್ಕಾರವೇ ವಿಶೇಷ ಕಾಯ್ದೆ ರೂಪಿಸಿತ್ತು. ಸರಕಾರ 94ಸಿ ಹಾಗು 94 ಸಿಸಿ ಕಾಯ್ದೆ ಎಂಬ ವಿಶೇಷ ಕಾಯ್ದೆಯನ್ನು ರೂಪಿಸಿತ್ತು. ಆಗಿನ ಕಂದಾಯ ಸಚಿವ ಕಾಗೋಡು ತಿಮ್ಮಪ್ಪನವರು ಈ ಕಾಯ್ದೆ ಅನುಷ್ಠಾನಕ್ಕೆ ವಿಶೇಷ ಒತ್ತು ನೀಡಿದ್ದರು. ಬಳಿಕ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲೂ ಕಂದಾಯ ಗ್ರಾಮಗಳನ್ನಾಗಿಸುವ ಕಾರ್ಯಕ್ರಮ ಹಾಕಿಕೊಳ್ಳಲಾಗಿತ್ತು. ಆನಂತರ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಈ ಕಾರ್ಯಕ್ರಮಕ್ಕೆ ವಿಶೇಷ ಒತ್ತು ನೀಡಿದ್ದರಿಂದ ವಿಜಯನಗರ ಜಿಲ್ಲೆಯೊಂದರಲ್ಲೇ 20 ಸಾವಿರ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡಲಾಗುತ್ತಿದೆ. ಇನ್ನೂ ರಾಜ್ಯದ 31 ಜಿಲ್ಲೆಗಳ 1,11,111 ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲಾಗುತ್ತಿದೆ. ಈ ಜನರು ಬ್ಯಾಂಕ್ ಸಾಲ, ಸೌಲಭ್ಯ ಸೇರಿದಂತೆ ಇತರೆ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದರು. ಈಗ ಇದಕ್ಕೆ ಶಾಶ್ವತವಾಗಿ ಮುಕ್ತಿ ನೀಡಿ, ಸರ್ಕಾರ ಸ್ವಾತಂತ್ರ್ಯ ನೀಡುತ್ತಿದೆ. ಬ್ರಿಟಿಷ್‌ರ ಕಾಲದಿಂದ ಈಗ 2025ರಲ್ಲಿ ಈ ಜನತೆಗೆ ನಿಜ ಸ್ವಾತಂತ್ರ್ಯ ಲಭಿಸುತ್ತಿದೆ.ಅತಿಹೆಚ್ಚು ಹಕ್ಕುಪತ್ರ ನೀಡುತ್ತಿರುವ ಜಿಲ್ಲೆಗಳು

ವಿಜಯನಗರ 23,113

ವಿಜಯಪುರ 17500

ತುಮಕೂರು 7500

ಚಿತ್ರದುರ್ಗ 7000

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌