ರೈತರು ಅಭಿವೃದ್ಧಿ ಹೊಂದಿದರೆ ಮಾತ್ರ ದೇಶದ ಪ್ರಗತಿ: ಸಹಾಯಕ ಕೃಷಿ ನಿರ್ದೇಶಕ ಆರ್.ಹರೀಶ್

KannadaprabhaNewsNetwork |  
Published : Dec 24, 2024, 12:45 AM IST
23ಕೆಎಂಎನ್ ಡಿ23 | Kannada Prabha

ಸಾರಾಂಶ

ಮಳೆಯಾಶ್ರಿತ ಪ್ರದೇಶವಾಗಿರುವ ತಾಲೂಕಿನ ರೈತರು ರಾಗಿ ಬೆಳೆಯನ್ನೇ ಪ್ರಮುಖ ಕೃಷಿಯನ್ನಾಗಿಸಿಕೊಂಡಿರುವ ಹಿನ್ನೆಲೆಯಲ್ಲಿ ನಾಗಮಂಗಲ ಎಂದರೆ ರಾಗಿಯ ಕಣಜ ಎಂದು ಹೆಸರುವಾಸಿಯಾಗಿದೆ. ರೈತರು ಆಧುನಿಕ ಬೇಸಾಯ ಕ್ರಮಗಳನ್ನು ಆನುಸರಿಸಿದರೆ ಕಡಿಮೆ ಖರ್ಚಿನಲ್ಲಿ ಹೆಚ್ಚು ರಾಗಿಯನ್ನು ಬೆಳೆಯಬಹುದಾಗಿದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಭಾರತ ಕೃಷಿ ಪ್ರಧಾನ ದೇಶ. ರೈತರೇ ದೇಶದ ಬೆನ್ನೆಲುಬು. ದೇಶದಲ್ಲಿ ಶೇ.70ರಷ್ಟು ಕೃಷಿಯನ್ನೇ ಅವಲಂಬಿಸಿಕೊಂಡಿರುವ ರೈತರು ಅಭಿವೃದ್ಧಿ ಹೊಂದಿದಾಗ ಮಾತ್ರ ದೇಶ ಪ್ರಗತಿಯತ್ತ ಮುನ್ನಡೆಯಲು ಸಾಧ್ಯ ಎಂದು ಸಹಾಯಕ ಕೃಷಿ ನಿರ್ದೇಶಕ ಆರ್.ಹರೀಶ್ ಅಭಿಪ್ರಾಯಪಟ್ಟರು.

ತಾಲೂಕಿನ ಬಿಂಡಿಗನವಿಲೆ ಗ್ರಾಮದಲ್ಲಿ ಕೃಷಿ ಇಲಾಖೆ ಹಾಗೂ ತಾಲೂಕು ಕೃಷಿಕ ಸಮಾಜದ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ರೈತ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ರೈತ ಸರ್ವ ಸ್ವತಂತ್ರನಾಗಿ ಬದುಕಿದಾಗ ಮಾತ್ರ ದೇಶ ಅಭಿವೃದ್ಧಿ ಹೊಂದುತ್ತದೆ. ರೈತರ ಏಳ್ಗೆಗೆ ಪೂರಕವಾಗಿ ಕೃಷಿ ಸಂಬಂಧಿತ ಇಲಾಖೆಗಳು ಸಹಕಾರ ನೀಡುತ್ತಿದೆ. ಇಲಾಖೆ ಮೂಲಕ ಸಿಗುವ ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ರೈತರು ಸದೃಢರಾಗಬೇಕು ಎಂದರು.

ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರು ಕಡುಬಡತನದ ರೈತ ಕುಟುಂಬದಲ್ಲಿ ಜನಿಸಿ, ನಂತರ ರೈತ ನಾಯಕನಾಗಿ ಬೆಳೆದು ದೇಶದ ಪ್ರಧಾನಿ ಪಟ್ಟಕ್ಕೇರಿದ ಅವರ ನೆನಪಿನಲ್ಲಿ ರೈತ ದಿನ ಆಚರಿಸುತ್ತಿದ್ದೇವೆ ಎಂದರು.

ಮಳೆಯಾಶ್ರಿತ ಪ್ರದೇಶವಾಗಿರುವ ತಾಲೂಕಿನ ರೈತರು ರಾಗಿ ಬೆಳೆಯನ್ನೇ ಪ್ರಮುಖ ಕೃಷಿಯನ್ನಾಗಿಸಿಕೊಂಡಿರುವ ಹಿನ್ನೆಲೆಯಲ್ಲಿ ನಾಗಮಂಗಲ ಎಂದರೆ ರಾಗಿಯ ಕಣಜ ಎಂದು ಹೆಸರುವಾಸಿಯಾಗಿದೆ. ರೈತರು ಆಧುನಿಕ ಬೇಸಾಯ ಕ್ರಮಗಳನ್ನು ಆನುಸರಿಸಿದರೆ ಕಡಿಮೆ ಖರ್ಚಿನಲ್ಲಿ ಹೆಚ್ಚು ರಾಗಿಯನ್ನು ಬೆಳೆಯಬಹುದಾಗಿದೆ ಎಂದರು.

ಮಂಡ್ಯ ವಿ.ಸಿ.ಫಾರಂನ ವಿಜ್ಞಾನಿ ದಿವ್ಯ ಮಾತನಾಡಿ, ಸಾಂಪ್ರಾದಾಯಿಕ ಕೃಷಿಯಲ್ಲಿ ತೊಡಗಿದ್ದ ರೈತರು ಆಧುನಿಕ ಕೃಷಿಗೆ ಹೊಂದುಕೊಂಡ ಪರಿಣಾಮ ಆರ್ಥಿಕವಾಗಿ ಪ್ರಬಲಗೊಳ್ಳುತ್ತಿದ್ದಾರೆ. ಆದರೆ, ರಸಗೊಬ್ಬರದ ಮಿತಿಮೀರಿದ ಬಳಕೆಯ ಪರಿಣಾಮ ರೋಗರುಜಿನಗಳು ಹೆಚ್ಚಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ನಾವು ಸಾಂಪ್ರಾದಾಯಿಕ ಕೃಷಿಯಲ್ಲಿ ತೊಡಗಿಸಿಕೊಳ್ಳುವ ಜೊತೆಗೆ ರಸಗೊಬ್ಬರದ ಬಳಕೆಯನ್ನು ಮಿತಿಗೊಳಿಸಿ ಸಾವಯವ ಕೃಷಿಯತ್ತ ದಾಪುಗಾಲು ಹಾಕಬೇಕಿದೆ. ತೆಂಗಿನ ತೋಟದಲ್ಲಿ ಜೇನು ಕೃಷಿಯನ್ನು ಅಳವಡಿಸಿಕೊಂಡರೆ ತೆಂಗಿನ ಫಲ ಹೆಚ್ಚಾಗುವುದಲ್ಲದೆ ಜೇನು ಕೃಷಿಯಿಂದಲೂ ಅಧಿಕ ಲಾಭವನ್ನು ಪಡೆಯಬಹುದು ಎಂದು ಸಲಹೆ ನೀಡಿದರು.

ಬಳಿಕ ಆರ್ಥಿಕ ಸುಸ್ಥಿರತೆಯಲ್ಲಿ ತೋಟಗಾರಿಕೆ ಬೆಳೆಗಳ ಮಹತ್ವ ಹಾಗೂ ತೆಂಗು ಬೆಳೆಯ ಸಮಗ್ರ ಬೇಸಾಯ ಮತ್ತು ಮೌಲ್ಯವರ್ಧನೆ ಕುರಿತು ವಿವರಿಸಿದರು.

ರಾಷ್ಟ್ರೀಯ ರೈತ ದಿನಾಚರಣೆಯ ಪ್ರಯುಕ್ತ ರಾಗಿ ಬೆಳೆಯ ಉತ್ಪಾದನಾ ತಾಂತ್ರಿಕತೆಗಳು ಹಾಗೂ ತೆಂಗಿನ ಬೆಳೆಯ ಸಮಗ್ರ ನಿರ್ವಹಣೆ ಕುರಿತು ಕಿಸಾನ್ ಗೋಷ್ಠಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕೃಷಿಕ ಸಮಾಜದ ಜಿಲ್ಲಾ ಪ್ರತಿನಿಧಿ ಕಸಲಗೆರೆ ಬಸವರಾಜು ಮಾತನಾಡಿದರು.

ಕಳೆದ ಸಾಲಿನಲ್ಲಿ ರಾಗಿ ಬೆಳೆಯಲ್ಲಿ ಅತಿ ಹೆಚ್ಚು ಇಳುವರಿ ಪಡೆದ ತಾಲೂಕಿನ ಬಿಂಡಿಗನವಿಲೆ ಹೋಬಳಿಯ ಮಂಗರವಳ್ಳಿ ಗ್ರಾಮದ ರೈತ ಜಯರಾಮೇಗೌಡ ಹಾಗೂ ಅಂಚೆಚಿಟ್ಟನಹಳ್ಳಿ ಗ್ರಾಮದ ರೈತ ಮೋಹನ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ತಾಲೂಕು ಕೃಷಿ ಸಮಾಜದ ಮಾಜಿ ಉಪಾಧ್ಯಕ್ಷ ಮಹಾಬಲೇಶ್, ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ, ಯುವರಾಜ್, ಕೃಷಿ ಅಧಿಕಾರಿ ರಂಗನಾಥ್, ಇಲಾಖೆಯ ಆತ್ಮ ಸಿಬ್ಬಂದಿ ಕೆ.ಎಸ್. ನಂದಿನಿ, ಎಂ.ಎಲ್.ಧನುಷ, ಅಫ್ಗಾನ ಮುಲ್ಕಿ, ಸಂತೋಷ್, ಎಂ.ಜಿ.ಅಮಿತ್ ಸೇರಿದಂತೆ ರೈತರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಓದಿನಲ್ಲಿ ತಲ್ಲೀನತೆ ಇದ್ದರೆ ಕೆಟ್ಟ ಆಲೋಚನೆಗಳು ದೂರ: ಓಂಕಾರನಾಯ್ಕ
ರಾಷ್ಟ್ರೀಯ ಹೆದ್ದಾರೀಲಿ ಖಾಸಗಿ ಬಸ್‌ ಭಸ್ಮ