ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಗಿಡಮೂಲಿಕೆಯ ವ್ಯಾಪಾರಕ್ಕೆಂದು ಪರದೇಶಕ್ಕೆ ತೆರಳಿ ಇದೀಗ ಆಫ್ರಿಕ ಗಿನಿ ದೇಶದ ಕೊನಾಕ್ರಿ ಎಂಬ ನಗರದಲ್ಲಿ ಸಿಲುಕಿಕೊಂಡಿರುವ ಅಲೆಮಾರಿ ಹಕ್ಕಿಪಿಕ್ಕಿ ಸಮುದಾಯಕ್ಕೆ ಸೇರಿದ ದಂಪತಿಗಳಿಬ್ಬರು ಸಹಾಯಕ್ಕಾಗಿ ಅಂಗಲಾಚುತ್ತಿರುವ ವಿಡಿಯೋ ಹರಿದಾಡತೊಡಗಿದೆ.ದೇವಗನ್ ಹಾಗೂ ಮತ್ತವರ ಪತ್ನಿ ನಂದಿತಾ ಗಿಡಮೂಲಿಕೆ ವ್ಯಾಪಾರಕ್ಕಾಗಿ ಆಫ್ರಿಕಾ ದೇಶ ಸಮೂಹದ ಗಿನಿ ದೇಶಕ್ಕೆ ತೆರಳಿದ್ದರು. ಇವರು ತಮ್ಮ ವ್ಯಾಪಾರ ಮುಗಿಸಿಕೊಂಡು ನಂತರ ಬೇರೆ ದೇಶಕ್ಕೆ ವ್ಯಾಪಾರಕ್ಕೆಂದು ತೆರಳಲು ವಿಮಾನದ ಟಿಕೆಟ್ ಗಾಗಿ ಶಿವಮೊಗ್ಗದ ಟ್ರಾವೆಲ್ ಏಜೆನ್ಸಿಯೊಂದನ್ನು ಸಂಪರ್ಕಿಸಿ ಅದಕ್ಕೆ ಬೇಕಾದ ಮೊತ್ತ ಭರಿಸಿದ್ದರು. ಆದರೆ ಟ್ರಾವೆಲ್ ಏಜೆನ್ಸಿಯವರು ಟಿಕೆಟ್ ನೀಡಿದೆ ಮೋಸ ಮಾಡಿದ್ದಾರೆ ಎಂದು ದಂಪತಿಗಳು ಅಳಲು ತೋಡಿಕೊಂಡಿದ್ದಾರೆ.
ಈ ಕುರಿತು ವಿಡಿಯೋ ಮಾಡಿ ಕಳುಹಿಸಿರುವ ಅವರು, ಏ. 29 ರಂದು ಅಲ್ಲಿಂದ ಬೇರೆ ದೇಶಕ್ಕೆ ವ್ಯಾಪಾರಕ್ಕೆ ಹೋಗುವುದಕ್ಕಾಗಿ ವಿಮಾನದ ಟಿಕೆಟ್ ಬುಕ್ ಮಾಡುವುದಕ್ಕೆ ಶಿವಮೊಗ್ಗದ ದುರ್ಗಿಗುಡಿಯಲ್ಲಿನ ಟ್ರಾವೆಲ್ ಏಜೆನ್ಸಿಯೊಂದನ್ನು ಸಂಪರ್ಕಿಸಿ ಅವರ ಖಾತೆಗೆ 1.66 ಲಕ್ಷ ರು. ಹಣ ಕಳುಹಿಸಿದ್ದೆವು. ಒಂದೇ ದಿವಸದಲ್ಲಿ ಟಿಕೆಟ್ ಬುಕ್ ಮಾಡಿಕೊಡುವುದಾಗಿ ಹೇಳಿದ್ದ ಟ್ರಾವೆಲ್ ಏಜೆನ್ಸಿಯವರು ಇದೀಗ ನಮಗೆ ಮೋಸ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.ಹಣ ಪಾವತಿ ಮಾಡಿದ್ದರೂ ಇದುವರೆಗೂ ನಮಗೆ ಟಿಕೆಟ್ ಬುಕ್ ಮಾಡಿಕೊಟ್ಟಿಲ್ಲ. ಇದರಿಂದಾಗಿ ನಾವು ದೂರದ ಗಿನಿ ದೇಶದಲ್ಲಿ ಬಂಧಿಯಾಗಿದ್ದೇವೆ. ನಮ್ಮ ಬಳಿ ಹಣ ಇಲ್ಲದಿರುವುದರಿಂದ ಹಿಂದಿರುಗಲು ಸಾಧ್ಯವಾಗದೆ ಸಮಸ್ಯೆ ಆಗಿದೆ. ಅಲ್ಲಿ ನಮಗೆ ಊಟಕ್ಕೆ ಹಾಗೂ ವಾಸಿಸಲು ಸ್ಥಳವಿಲ್ಲದೆ ಪರದಾಡುವಂತಾಗಿದೆ ಎಂದಿದ್ದಾರೆ.
ವಿಮಾನದ ಟಿಕೆಟ್ ಬುಕ್ ಮಾಡಿಕೊಡುವಂತೆ ಪರಿಪರಿಯಾಗಿ ವಿನಂತಿಸಿಕೊಂಡರು ಟ್ರಾವೆಲ್ ಏಜೆನ್ಸಿ ಮಾಲೀಕರಿಂದ ಸೂಕ್ತ ಪ್ರತಿಕ್ರಿಯೆ ದೊರಕುತ್ತಿಲ್ಲ. ಇಲ್ಲದ ಸಬೂಬು ಹೇಳುತ್ತಿದ್ದಾರೆ. ತಕ್ಷಣವೇ ನಮ್ಮ ನೆರವಿಗೆ ಬರಬೇಕು ಎಂದು ದಂಪತಿಗಳು ಕೋರಿಕೊಂಡಿದ್ದಾರೆ. ಅಲ್ಲದೆ ತಮಗಾಗಿರುವ ಅನ್ಯಾಯದ ಕುರಿತು ಮೊಬೈಲ್ ನಲ್ಲಿ ವಿಡಿಯೋ ಒಂದನ್ನು ಮಾಡಿ ಕಳುಹಿಸಿದ್ದಾರೆ.ದೂರದ ಗಿನಿ ದೇಶದ ನಗರ ಒಂದರಲ್ಲಿ ಅತಂತ್ರವಾಗಿರುವ ಹಕ್ಕಿಪಿಕ್ಕಿ ಸಮುದಾಯದ ದಂಪತಿಗಳನ್ನು ಸುರಕ್ಷಿತವಾಗಿ ಕರೆತರಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ.