ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಸಾಮೂಹಿಕ ವಿವಾಹವಾದ ದಂಪತಿಗಳು ಪುಣ್ಯವಂತರು: ರಂಭಾಪುರಿ ಡಾ.ವೀರಸೋಮೇಶ್ವರಶ್ರೀ

KannadaprabhaNewsNetwork | Published : Jun 9, 2025 1:09 AM

ಶ್ರೀಮಠವು ೧೦- ೧೫ ವರ್ಷಗಳಲ್ಲಿ ರಾಷ್ಟ್ರಮಟ್ಟದ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಿದ್ಧರಬೆಟ್ಟ ಮತ್ತು ದೇವರಾಯನ ದುರ್ಗ ಯಾತ್ರಾಸ್ಥಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ೨೦ ದಿನಗಳಲ್ಲಿ ಅನುದಾನ ಬಿಡುಗಡೆ ಮಾಡಲಿದೆ. ಭಾರತ ಸರ್ಕಾರ ದೇಶಕ್ಕೆ ಮತ್ತು ಇತಿಹಾಸದ ಸುಭದ್ರತೆಗೆ ಹೊಸ ಶಕೆ ಪ್ರಾರಂಭ ಮಾಡಿದೆ.

ಕನ್ನಡಪ್ರಭ ವಾರ್ತೆ ಕೊರಟಗೆರೆ

ಭಾರತೀಯ ಸಂಸ್ಕೃತಿಯಲ್ಲಿ ವಿವಾಹವು ವಿಶೇಷ ಸ್ಥಾನಮಾನ ಪಡೆದಿದೆ. ಸಾಮೂಹಿಕ ವಿವಾಹದ ಮೂಲಕ ದಾಂಪತ್ಯ ಜೀವನ ಪ್ರವೇಶಿಸುತ್ತಿರುವ ದಂಪತಿಗಳು ನಿಜಕ್ಕೂ ಪುಣ್ಯವಂತರು ಎಂದು ಬಾಳೆಹೊನ್ನೂರು ಶ್ರೀಮಠದ ಶ್ರೀಮದ್ ರಂಭಾಪುರಿ ವೀರಸಿಂಹಾನಾಧೀಶ್ವರ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರು ತಿಳಿಸಿದರು.

ತಾಲೂಕಿನ ಶ್ರೀಕ್ಷೇತ್ರ ಸಿದ್ಧರಬೆಟ್ಟದ ಬಾಳೆಹೊನ್ನೂರು ಖಾಸಾ ಶಾಖಾ ಮಠದಲ್ಲಿ ಆಯೋಜಿಸಿದ್ದ ೧೯ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಶ್ರೀ ಜಗದ್ಗುರು ರೇಣುಕಾಚಾರ್ಯರ, ಶ್ರೀಜಗಜ್ಯೋತಿ ಬಸವೇಶ್ವರರ ಜಯಂತ್ಯುತ್ಸವ ಹಾಗೂ ಸಾಮೂಹಿಕ ವಿವಾಹ, ಜನಜಾಗೃತಿ ಧರ್ಮ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.

ಶ್ರೀಕ್ಷೇತ್ರದಲ್ಲಿ ವಾರ್ಷಿಕೋತ್ಸವ ಅಂಗವಾಗಿ ನಡೆಯುತ್ತಿರುವ ಹಲವಾರು ವೈವಿಧ್ಯಮಯ ಧಾರ್ಮಿಕ ಕಾರ್ಯಕ್ರಮಗಳು ಹಬ್ಬದ ವಾತಾವರಣ ಸೃಷ್ಟಿಸಿವೆ. ಧರ್ಮದ ಜಾಗೃತಿಗಾಗಿ ನೆಲೆಯೂರಿದ ಶ್ರೀಮಠ ೧೯ ವರ್ಷ ಪೂರೈಸಿ ಮುಂದೆ ಸಾಗುತ್ತಿರುವ ಕೀರ್ತಿ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮೀಜಿಗೆ ಸಲ್ಲುತ್ತದೆ. ಶೈಕ್ಷಣಿಕ ವಿದ್ಯಾಲಯ ಪ್ರಗತಿ, ನಿತ್ಯ ದಾಸೋಹ, ಬಡ ವಿದ್ಯಾರ್ಥಿಗಳ ನಿಲಯವಿದ್ದು, ಇಷ್ಟೆಲ್ಲಾ ಸೇವೆಗಳಿಗೆ ಭಕ್ತರೇ ಶ್ರೀಮಠದ ನಿಜವಾದ ಶಕ್ತಿ. ಆಧುನಿಕ ಜಗತ್ತಿನಲ್ಲಿ ಮಕ್ಕಳು ಸಂಸ್ಕಾರವಂತರಾಗಿ ಬೆಳೆಯಬೇಕು ಎಂದು ಆಶೀರ್ವಾಚನ ನೀಡಿದರು.

ಗೃಹ ಸಚಿವ ಡಾ.ಜಿ ಪರಮೇಶ್ವರ್ ಮಾತನಾಡಿ, ಸಿದ್ಧರಬೆಟ್ಟ ಸಸ್ಯ ಸಂಜೀವಿನಿ ಕ್ಷೇತ್ರ ವೈಜ್ಞಾನಿಕ ಇತಿಹಾಸದಲ್ಲಿ ಅಚ್ಚಳಿಯದೇ ಉಳಿದಿದೆ. ಭಾರತದ ಇತಿಹಾಸ ಪುಟದಲ್ಲಿ ಹಿಂದೂ ಧರ್ಮಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ೮೫೦ ವರ್ಷಗಳ ಹಿಂದೆ ಜಗಜ್ಯೋತಿ ಬಸವೇಶ್ವರರು ಇಡೀ ಜಗತ್ತಿಗೆ ಸಮಾನತೆಯ ತತ್ವ ಸಾರಿದ್ದಾರೆ ಎಂದು ಹೇಳಿದರು.

ಧಾರ್ಮಿಕ ಕಾರ್ಯಕ್ರಮ ಯಶಸ್ಸಿಗೆ ಲಿಂಗೈಕ್ಯ ಪರಮಪೂಜ್ಯ ಸಿದ್ಧಗಂಗಾ ಶಿವಕುಮಾರ ಸ್ವಾಮೀಜಿಗಳ ಕೃಪಾ ಆಶೀರ್ವಾದ ಕೂಡ ಇದೆ. ರಾಜಕೀಯದಲ್ಲಿ ಟೀಕೆ- ಟಿಪ್ಪಣಿಗಳು ಸಹಜ, ಕರ್ನಾಟಕದಲ್ಲಿ ಜನರ ಏಳಿಗೆಗಾಗಿ ಕಾಂಗ್ರೆಸ್ ಸರ್ಕಾರ ಸುಭದ್ರ ಆಡಳಿತ ನಡೆಸುತ್ತಿದೆ. ತಂದೆ- ತಾಯಿಯ ಮೇಲೆ ಮಕ್ಕಳು ಹಲ್ಲೆ ಮಾಡುವುದು, ವೃದ್ಧಾಶ್ರಮಕ್ಕೆ ಸೇರಿಸುವುದು ಧರ್ಮವಲ್ಲ. ಇಂತಹ ಜನ ಜಾಗೃತಿ ಧರ್ಮ ಸಮಾರಂಭದಲ್ಲಿ ಹೆಚ್ಚಾಗಿ ಜನರು ಭಾಗವಹಿಸುವುದು ಉತ್ತಮ ಎಂದು ಹೇಳಿದರು.

ಬಾಳೆಹೊನ್ನೂರು ಖಾಸಾ ಶಾಖಾ ಮಠದ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಕಲಿಯುಗ ಮಾಯೆಯಿಂದ ಧರ್ಮ ಬಿಟ್ಟು ಅಧರ್ಮದ ಕಡೆಗೆ ಜನರು ವಾಲಿದ್ದಾರೆ. ಮನುಷ್ಯ ಅಧಿಕಾರ, ಹಣ, ಆಸ್ತಿ ಎಂದು ಧರ್ಮವನ್ನೇ ಮರೆತು ಜೀವನ ಹಾಳು ಮಾಡಿಕೊಳ್ಳುತ್ತಿದ್ದಾನೆ. ಆಧುನಿಕ ಜನರಿಗೆ ದಿನನಿತ್ಯ ಧರ್ಮದ ಬಗ್ಗೆ ಬೋಧನೆ ಮಾಡಿದರೂ ವ್ಯರ್ಥವೆನಿಸುತ್ತದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಬಾಳೆಹೊನ್ನೂರು ಜಗದ್ಗುರುಗಳ ದೃಷ್ಟಿಕೋನ, ಚಿಂತನೆಯನ್ನು ಶ್ರೀಮಠ ಅಚ್ಚುಕಟ್ಟಾಗಿ ಪಾಲಿಸಿ ೧೯ ವರ್ಷ ಪೂರೈಸಿದೆ. ಶ್ರೀಕ್ಷೇತ್ರದಲ್ಲಿ ೧೦೦ ಅಡಿ ಎತ್ತರದ ಶಿವಲಿಂಗ ಸ್ಥಾಪನೆಗೆ ಗೃಹಮಂತ್ರಿ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಕೇಂದ್ರ ಜಲಶಕ್ತಿ ಸಚಿವ ವಿ.ಸೋಮಣ್ಣ ಮಾತನಾಡಿ, ಶ್ರೀಮಠವು ೧೦- ೧೫ ವರ್ಷಗಳಲ್ಲಿ ರಾಷ್ಟ್ರಮಟ್ಟದ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಿದ್ಧರಬೆಟ್ಟ ಮತ್ತು ದೇವರಾಯನ ದುರ್ಗ ಯಾತ್ರಾಸ್ಥಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ೨೦ ದಿನಗಳಲ್ಲಿ ಅನುದಾನ ಬಿಡುಗಡೆ ಮಾಡಲಿದೆ. ಭಾರತ ಸರ್ಕಾರ ದೇಶಕ್ಕೆ ಮತ್ತು ಇತಿಹಾಸದ ಸುಭದ್ರತೆಗೆ ಹೊಸ ಶಕೆ ಪ್ರಾರಂಭ ಮಾಡಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎಲೆರಾಂಪುರ ಶ್ರೀಮಠದ ಡಾ.ಹನುಮಂತನಾಥ ಸ್ವಾಮೀಜಿ, ಬೆಳ್ಳಾವಿ ಶ್ರೀಕಾರದ ವೀರಬಸವ ಸ್ವಾಮೀಜಿ, ರೇಣುಕ ಶಿವಾಚಾರ್ಯ ಸ್ವಾಮೀಜಿ, ರುದ್ರಮುನಿ ಸ್ವಾಮೀಜಿ, ಬಸವಲಿಂಗ ಸ್ವಾಮೀಜಿ, ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ, ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಶಾಸಕ ಜಿ.ಬಿ ಜ್ಯೋತಿಗಣೇಶ್, ಪುಟ್ಟಸ್ವಾಮಿಗೌಡ, ಜಿಲ್ಲಾಧಿಕಾರಿ ಶುಭಾ ಕಲ್ಯಾಣ್, ಜಿಪಂ ಸಿಇಒ ಜಿ.ಪ್ರಭು, ತುಮಕೂರು ಎಸ್ಪಿ ಆಶೋಕ್, ರೋಟರಿ ಅಧ್ಯಕ್ಷ ರಘು ಕೆ.ಎನ್, ಗ್ರಾ.ಪಂ ಅಧ್ಯಕ್ಷೆ ಕವಿತಾ, ಉಪಾಧ್ಯಕ್ಷ ಲಕ್ಷ್ಮೀಕಾಂತ್, ಅ.ಭಾ.ವೀ.ಮ ಜಿಲ್ಲಾಧ್ಯಕ್ಷ ಪರಮೇಶ್ವರ್, ತಾ.ಅಧ್ಯಕ್ಷ ವೀರಭದ್ರಯ್ಯ, ಸಿದ್ದಮಲ್ಲಪ್ಪ, ದರ್ಶನ್ ಕೆ.ಎಲ್, ರುದ್ರೇಶ್ ಸೇರಿದಂತೆ ಇತರರು ಇದ್ದರು.

ಶ್ರೀಗಳ ಮೇಲೆ ದಾಖಲಾಗಿರುವ ಕೇಸ್ ವಜಾಗೊಳಿಸಿ:

ರೈತ ದೇಶದ ಬೆನ್ನೆಲುಬು ಎಂದು ಸರ್ಕಾರ ಮರೆತಂತೆ ಕಾಣುತ್ತಿದೆ. ಹೇಮಾವತಿ ಲಿಂಕ್ ಕೆನಾಲ್ ರೈತರ ವಿರೋಧಿಯಾಗಿದೆ. ರೈತರ ಬೆನ್ನೆಲುಬಾಗಿ ಹೋರಾಟದಲ್ಲಿ ಪಾಲ್ಗೊಂಡು ಹಲವು ಮಠದ ಶ್ರೀಗಳ ಮೇಲೆ ಕೇಸು ದಾಖಲಿಸುವುದು ಸಮಂಜಸವಲ್ಲ, ಆದ್ದರಿಂದ ಕೇಸ್ ವಜಾಗೊಳಿಸಿ ರೈತರಿಗೆ ನ್ಯಾಯ ಒದಗಿಸುವಂತೆ ಗೃಹ ಸಚಿವರ ಬಳಿ ಚರ್ಚೆ ಮಾಡಲಾಗಿದೆ ಎಂದು ಬಾಳೆಹೊನ್ನೂರು ಶ್ರೀಮಠದ ವೀರಸೋಮೇಶ್ವರ ಭಗವತ್ಪಾದರು ತಿಳಿಸಿದ್ದಾರೆ.

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯಿಂದ ರಾಜ್ಯದ ಅಭಿವೃದ್ಧಿ ನೆಲ ಕಚ್ಚಿದೆ ಎಂದು ಆಡಳಿತ ಸರ್ಕಾರದ ಶಾಸಕರೇ ಮಾತನಾಡುವಂತಾಗಿದೆ. ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ಶ್ರೀಮಠದ ವಿರೋಧವಿಲ್ಲ. ಆದರೆ, ಉತ್ತಮವಾಗಿರುವ ಗ್ಯಾರಂಟಿ ಯೋಜನೆಗೆ ಹಣ ಮೀಸಲಿರಿಸಿ ರಾಜ್ಯದ ಅಭಿವೃದ್ಧಿ ಕೆಲಸಗಳ ಕಡೆ ಸರ್ಕಾರ ಗಮನಹರಿಸಬೇಕಿದೆ ಎಂದು ತಿಳಿಸಿದರು.

‘ಹೇಮಾವತಿ ಕೆನಾಲ್ ಅವೈಜ್ಞಾನಿಕ ಕಾಮಗಾರಿ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಮಂಗಳವಾರ ಸ್ಥಳಕ್ಕೆ ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳ ಜೊತೆ ಚರ್ಚಿಸುತ್ತೇನೆ. ಕೇಂದ್ರ ಸರ್ಕಾರ ೩೯ ಸಾವಿರ ಕೋಟಿ ರು. ಅನುದಾನವನ್ನು ರೈಲ್ವೆ ಇಲಾಖೆಗೆ ಬಿಡುಗಡೆ ಮಾಡಿದೆ. ತುಮಕೂರು- ರಾಯದುರ್ಗ ರೈಲ್ವೆ ಕಾಮಗಾರಿ ೨೦೨೭ಕ್ಕೆ ಪೂರ್ಣಗೊಳ್ಳಲಿದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದೆ.’

ವಿ.ಸೋಮಣ್ಣ

ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ಸಚಿವ.