ಕನ್ನಡಪ್ರಭ ವಾರ್ತೆ ರಾಮನಗರ
ಸಾಹಿತ್ಯ ಅವಘಡಗಳಿಗೆ ಕಾರಣವಾಗುವ ವಸ್ತುವಲ್ಲ, ಸಮಾಜದ ಶುದ್ಧೀಕರಣದ ಯಂತ್ರ. ವರ್ತಮಾನದ ಬದುಕಿಗೆ ವ್ಯಕ್ತಿಗಳನ್ನು ವ್ಯಕ್ತಿತ್ವವನ್ನು ರೂಪಿಸುವ ಶಕ್ತಿ ಸಾಹಿತ್ಯಕ್ಕಿದೆ ಎಂದು ಹಿರಿಯ ಪತ್ರಕರ್ತ ರಘುನಾಥ ಚ.ಹ. ಹೇಳಿದರು.ನಗರದ ಜನಪದ ಲೋಕದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕರ್ನಾಟಕ ಜಾನಪದ ಪರಿಷತ್ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಬರಹಗಾರ ಮಲ್ಲಿಕಾರ್ಜುನ ಶೆಲ್ಲಿಕೇರಿ ಅವರ ಹವೇಲಿ ದೊರೆಸಾನಿ ಕಥಾ ಸಂಕಲನ ಅವಲೋಕನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸಾಮಾಜಿಕ ಜವಾಬ್ದಾರಿಯನ್ನು ಹೊರುವ ಶಕ್ತಿ ಬರಹಗಾರರಿಗೆ ಇದೆ. ಸಾಹಿತಿ ಸಾಮಾಜಿಕ ಜವಾಬ್ದಾರಿಯನ್ನು ಮೀರಿದ ಸಮಾಜ ಸೇವಕ. ಮನುಷ್ಯ ಸಮಾಜ ವಿಜ್ಞಾನಿಯಂತೆ ಕೆಲಸ ಮಾಡಬೇಕು, ಒಂದು ಪ್ರಾದೇಶಿಕ ಭಾಷೆಯನ್ನು ಮಹತ್ವವಾಗಿ ಬೆಳೆಸಬೇಕು, ಸಾಹಿತ್ಯ ಈ ನೆಲದ ಪರಿಸರವನ್ನು ಕಟ್ಟಿಕೊಡಬೇಕು ಎಂದರು.ಯಾವುದೇ ಸಂಭ್ರಮವಾಗಲಿ, ದುರಂತದಲ್ಲಿ ಕೊನೆಗಾಣಬಾರದು. ಇತ್ತೀಚೆಗೆ ನಡೆದ ಐಪಿಎಲ್ ಕ್ರಿಕೆಟ್ ಸಂಭ್ರಮ, ಅಭಿಮಾನಿಗಳ ಸಾವಿನ ಮೂಲಕ ಕೆಟ್ಟ ಅಂತ್ಯ ಕಂಡಿದ್ದು ಸಾಂಸ್ಕೃತಿಕ ದುರಂತ. ವ್ಯಾಪಾರೀಕರಣಕ್ಕಾಗಿ ಇರುವ ಆಟವನ್ನು ನಮ್ಮ ಯುವಪೀಳಿಗೆ ನಮ್ಮ ಅಸ್ಮಿತೆ ಎಂದು ಭಾವಿಸಿಕೊಂಡಿರುವುದು ನಮ್ಮ ಬದುಕು ಎತ್ತ ಸಾಗುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ರಘುನಾಥ ಚ.ಹ. ಅಸಮಾಧಾನ ವ್ಯಕ್ತಪಡಿಸಿದರು.ಹವೇಲಿ ದೊರೆಸಾನಿ ಕಥಾ ಸಂಕಲನದ ಅವಲೋಕನ ಮಾಡಿದ ಸಹಾಯಕ ಪ್ರಾಧ್ಯಾಪಕ ಡಾ. ಮುರಳಿ ಕೂಡ್ಲೂರು, ಸಾಹಿತ್ಯ ಸಮಾಜದ ಆತ್ಮಸಾಕ್ಷಿಯ ಪ್ರತಿಬಿಂಬ. ಮನುಷ್ಯ ಅಪವಾದ ನಿಲುವುಗಳನ್ನು ಸಾಹಿತ್ಯ ನೀಡುತ್ತಾ ಹೋಗುತ್ತದೆ. ಕವಿಯಾದವನು ತನ್ನ ಅನುಭವವನ್ನು ರೂಪಿಸುತ್ತಾ ಹೋಗಿ ಅಂತ ಕಣವನ್ನು ಕಟ್ಟುವ ಕೆಲಸಕ್ಕೆ ನಾಂದಿ ಹಾಡುತ್ತಾನೆ ಎಂದರು.
ಸಾಹಿತ್ಯ ಸಾಮಾಜಿಕ ಮೌಲ್ಯದ ಪಡಿಯಚ್ಚು. ಸಾಮಾಜಿಕ ಮೌಲ್ಯಗಳನ್ನು ಬಿತ್ತುವ ಕೆಲಸವನ್ನು ಸಾಹಿತ್ಯ ಮಾಡುತ್ತದೆ. ಗ್ರಾಮೀಣ ಪರಿಸರದ ಸೌಂದರ್ಯತೆ, ಹೆಣ್ಣಿನ ಅಸ್ಮಿತೆ, ಸಬಲೀಕರಣ ಮುಂತಾದವು ಶೆಲ್ಲಿಕೇರಿ ಅವರ ಕಥೆಗಳಲ್ಲಿ ಹುದುಗಿವೆ. ಸಾಮಾಜಿಕ ವಾಸ್ತವತೆಯನ್ನು ಮತ್ತು ಸಂವೇದನೆಯನ್ನು ಈ ಕಥೆಗಳಲ್ಲಿ ಕಾಣಬಹುದು ಎಂದು ತಿಳಿಸಿದರು.ಕುವೆಂಪು ಕಾಲೇಜು ಪ್ರಾಂಶುಪಾಲ ಡಾ. ಎಚ್.ಎಲ್. ರವೀಂದ್ರ ಹುಲುವಾಡಿ ಮಾತನಾಡಿ, ಸಾಹಿತ್ಯವನ್ನು ಓದುವವರ ಸಂಖ್ಯೆ ಕ್ಷೀಣಿಸುತ್ತಿದ್ದರೂ ಬರೆಯುವವರ ಸಂಖ್ಯೆಗೆ ಕೊರತೆ ಇಲ್ಲ. ಎಷ್ಟೇ ತಾಂತ್ರಿಕತೆ ಮುಂದುವರೆದರು ಪುಸ್ತಕವನ್ನು ಕೊಳ್ಳುವ ಮತ್ತು ಓದುವವರ ಕೊರತೆಯನ್ನು ಇಂತಹ ಕಥಾ ಸಂಕಲನಗಳು ನೀಗಿಸುತ್ತವೆ. ಶೆಲ್ಲಿಕೇರಿ ಅವರ ಕಥಾಸಂಕಲನದಲ್ಲಿ ಸ್ತ್ರೀ ಸಂವೇದನೆಯಿದೆ ಎಂದು ಹೇಳಿದರು.ಜಾನಪದ ತಜ್ಞ ಡಾ. ಎಂ. ಬೈರೇಗೌಡ ಮಾತನಾಡಿ, ಕಥೆ ಬರೆಯುವುದು ಸುಲಭದ ಕೆಲಸವಲ್ಲ. ಸಾಹಿತ್ಯವನ್ನೇ ಹಾಸಿ, ಹೊಂದಿಕೊಂಡು ಮಲಗಿರುವಾಗ, ಬೇರೆ ವೃತ್ತಿಯಲ್ಲಿರುವವರು ಸಾಹಿತ್ಯವನ್ನು ಅರಗಿಸುತ್ತಿರುವುದು ಶ್ಲಾಘನೀಯ. ಸರ್ಕಾರ ತಮ್ಮ ಕೆಲವು ನಿಲುವುಗಳನ್ನು ಬದಲಿಸಿ ಸಾಹಿತಿಗಳಿಗೆ ಉತ್ತೇಜನ ನೀಡಬೇಕು ಎಂದು ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಜಾನಪದ ವಿದ್ವಾಂಸ ಡಾ. ಚಕ್ಕೆರೆ ಶಿವಶಂಕರ್ ಮಾತನಾಡಿ, ಶೆಲ್ಲಿಕೇರಿ ಅವರ ಕಥಾಸಂಕಲನ ಅಭಿವ್ಯಕ್ತಿಯ ಸ್ವರೂಪ ಜವಾರಿ ಭಾಷೆಯಲ್ಲಿದೆ. ಬೇರೆ ಪ್ರದೇಶಗಳ ಭಾಷೆಗಳಿಂದ ನಮ್ಮ ಕನ್ನಡ ಭಾಷೆ ವಿಭಿನ್ನವಾಗಿದೆ. ವಿಭಜನೆಯ ಹಾದಿಯಲ್ಲಿ, ಕೋಮು ಸೌಹಾರ್ದತೆಯ ಸಂದರ್ಭದಲ್ಲಿ ಕನ್ನಡಕ್ಕೆ ಬೂಕರ್ ಪ್ರಶಸ್ತಿ ದೊರೆತಿರುವುದು ಕನ್ನಡದ ಅಸ್ಮಿತೆಯನ್ನು ಎತ್ತಿ ತೋರಿಸುತ್ತದೆ ಎಂದರು.ಸಹೃದಯತೆ ಮಾನವೀಯತೆಯನ್ನು ಬೆಳೆಸಿಕೊಳ್ಳಬೇಕು. ನಮ್ಮ ಬದುಕನ್ನು ಆಚರಣೆಯ ರೂಪದಲ್ಲಿ ತರಬೇಕು. ಬರಹಗಳ ಆಶಯ ಸಮಾಜಕ್ಕೆ ಮಾದರಿಯಾಗಿರಬೇಕು ಎಂದು ಹೇಳಿದರು.ಕಥೆಗಾರ ಕಂನಾಡಿಗ ನಾರಾಯಣ, ಬಾಗಲಕೋಟೆ ಜಿ ಕಸಾಪ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ, ಹವೇಲಿ ದೊರೆ ಸಾನಿ ಕೃತಿಯ ಕತೃ ಮಲ್ಲಿಕಾರ್ಜುನ ಶೆಲ್ಲಿಕೇರಿ ಮಾತನಾಡಿದರು.ಗೀತಗಾಯನವನ್ನು ಗೋವಿಂದಳ್ಳಿ ಶಿವಣ್ಣ ಕೆ.ಎಚ್.ಕುಮಾರ್ ನಡೆಸಿಕೊಟ್ಟರು. ಕಸಾಪ ಜಿಲ್ಲಾಧ್ಯಕ್ಷ ಬಿ.ಟಿ. ನಾಗೇಶ್, ಕಾರ್ಯದರ್ಶಿ ಸಿ.ಪುಟ್ಟಸ್ವಾಮಿ ಕೋಶ್ಯಾಧ್ಯಕ್ಷ ರಾಜೇಶ್ ಕವಣಾಪುರ, ಲೇಖಕ ಶ್ರೀನಿವಾಸ ರಾಂಪುರ, ಕವಿ ಮಂಜೇಶ್ ಬಾಬು, ಕಸಾಪ ಮಾಜಿ ಅಧ್ಯಕ್ಷ ಮತ್ತೀಕೆರೆ ಬಿ ಚೆಲುವರಾಜು, ಕಥೆಗಾರ ಸೀಬನಹಳ್ಳಿ ಪಿ. ಸ್ವಾಮಿ, ಕೂರಣಗೆರೆ ಕೃಷ್ಣಪ್ಪ, ರಾಮಕೃಷ್ಣಯ್ಯ ಬ್ರಹ್ಮಣೀಪುರ, ಬಾನಂದೂರು ನಂಜುಂಡಿ, ನಿವೃತ್ತ ಪ್ರಾಂಶುಪಾಲ ವನರಾಜು, ನಿವೃತ್ತ ಪ್ರಾಧ್ಯಾಪಕ ಕರಿಗೌಡ, ಚೌಡೇಗೌಡ, ಹೋರಾಟಗಾರ ಶಂಭುಗೌಡ, ನಿವೃತ್ತ ಫಾರ್ಮಸಿಸ್ಟ್ ವೇದಮೂರ್ತಿ, ನಿವೃತ್ತ ಅಧಿಕಾರಿ ರುದ್ರಪ್ಪ ಮತ್ತಿತರರು ಹಾಜರಿದ್ದರು.