ಕನ್ನಡಪ್ರಭ ವಾರ್ತೆ ಮದ್ದೂರು
ವಿದ್ಯಾರ್ಥಿಗಳ ಅಭ್ಯುದಯಕ್ಕೆ ಶ್ರಮಿಸುವ ಜತೆಗೆ ದೇಶದ ಸತ್ಪ್ರಜೆಗಳನ್ನಾಗಿಸಿರುವ ಶಿಕ್ಷಕರ ಪಾತ್ರ ಅತಿ ಮಹತ್ವದ್ದಾಗಿದೆ. ವಿದ್ಯೆ ಕಲಿಸಿದ ಗುರುಗಳ ಋಣವನ್ನು ಯಾರಿಂದಲೂ ತೀರಿಸಲು ಅಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ತಿಳಿಸಿದರು.ಪಟ್ಟಣದ ಎಂಕೆಬಿ ಸಭಾಂಗಣದಲ್ಲಿ ವಿ.ಕೆ.ಶಿವಾನಂದ ಅಭಿನಂದನಾ ಸಮಿತಿಯಿಂದ ಆಯೋಜಿಸಿದ್ದ ಪುಸ್ತಕ ಬಿಡುಗಡೆ ಮತ್ತು ಗುರು ಸ್ಮರಣಾಭಿನಂದನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸುದೀರ್ಘ ಶಿಕ್ಷಕರಾಗಿ, ಉಪನ್ಯಾಸಕರಾಗಿ ಉತ್ತಮ ಸೇವೆ ಸಲ್ಲಿಸಿ ನಿವೃತ್ತರಾಗುವ ಜತೆಗೆ ತಮಗೆ ಉನ್ನತ ಹುದ್ದೆ ಅಲಂಕರಿಸಲು ಕಾರಣೀಭೂತರಾದ ಶಿಕ್ಷಕರನ್ನು ಮತ್ತು ತಾವು ವ್ಯಾಸಂಗ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸುತ್ತಿರುವ ಶಿವಾನಂದರರ ವ್ಯಕ್ತಿತ್ವ ಅಪಾರವಾದದ್ದು ಎಂದು ಬಣ್ಣಿಸಿದರು.ತಾವು ಶಿಕ್ಷಕರು ಮತ್ತು ಉಪನ್ಯಾಸಕರ ಬೇಡಿಕೆಗಳ ಈಡೇರಿಕೆಗಾಗಿ ಸದನದ ಒಳಗೆ ಮತ್ತು ಹೊರಗೆ ನಿರಂತರ ಹೋರಾಟ ಮಾಡುತ್ತಿದ್ದು, ಮುಂದಿನ ದಿನಗಳಲ್ಲೂ ಅಧಿವೇಶನದಲ್ಲಿ ಧ್ವನಿ ಎತ್ತುವುದಾಗಿ ತಿಳಿಸಿದರು.
ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು. ಯಾರೊಬ್ಬರೂ ಕಪ್ಪು ಚುಕ್ಕೆ ಬಾರದಂತೆ ಶ್ರದ್ಧೆ, ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿ ವಿದ್ಯಾರ್ಥಿಗಳ ಅಭ್ಯುದಯಕ್ಕೆ ಮತ್ತು ಅವರ ಭವಿಷ್ಯವನ್ನು ಉಜ್ವಲಗೊಳಿಸಲು ನಿರಂತರವಾಗಿ ಶಿಕ್ಷಕರು ಶ್ರಮಿಸಬೇಕಿದೆ ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಕೆ.ವಿವೇಕಾನಂದ ಮಾತನಾಡಿ, ಗುರುಶಿಷ್ಯರ ಬಾಂಧವ್ಯ ಜೀವನದುದ್ದಕ್ಕೂ ಅಮರವಾಗಲಿದೆ. ಶಿಷ್ಯರು ಗುರುಗಳ ಋಣ ತೀರಿಸಲು ಸಾಧ್ಯವಾಗದ ಮಾತಾಗಿದೆ. ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲೇ ನಡೆಯುವ ಮೂಲಕ ಉತ್ತಮ ದಾರಿಯಲ್ಲಿ ಸಾಗಬೇಕೆಂದು ಕಿವಿಮಾತು ಹೇಳಿದರು.
ಇದೇ ವೇಳೆ ವಿಶ್ರಾಂತ ಪ್ರಾಂಶುಪಾಲರು ಹಾಗೂ ಪ್ರಾಧ್ಯಾಪಕರಾದ ಸಿ.ಚನ್ನಯ್ಯ, ನಾಗರಾಜು, ಎಂ.ಎ.ಕೇಸರಿ, ಕೆಂಪೇಗೌಡ, ಎಚ್.ಪಿ.ಪುಟ್ಟಲಿಂಗಪ್ಪ, ವಿ.ಸಿ.ರಾಮಣ್ಣ, ಬಿ.ವಿ.ಪ್ರಕಾಶ್, ರಾಮ್ದಾಸ್, ಬಿ.ಲಿಂಗೇಗೌಡ, ಶ್ರೀನಿವಾಸ್ರಾವ್, ಮಲ್ಲಿಕಾರ್ಜುನ್, ಜಯರಾಮು, ರಾಮಕೃಷ್ಣೇಗೌಡ, ಪಿ.ನಿಂಗಣ್ಣ, ಎಂ.ಆರ್.ಜಯಪ್ರಕಾಶ್, ಸಿದ್ದೇಗೌಡ, ಪುಟ್ಟಸ್ವಾಮಿ ಸೇರಿದಂತೆ ಇತರರನ್ನು ಅಭಿನಂದಿಸಲಾಯಿತು.ಹಿರಿಯ ಸಾಹಿತಿ ಸಿ.ಪಿ.ನಾಗರಾಜು ಹಾಗೂ ಖ್ಯಾತ ವಿಜ್ಞಾನಿ ಕೆ.ಎನ್.ತಿಮ್ಮಯ್ಯ ಜನಪದ ಒಗಟುಗಳು ಮತ್ತು ಗಾದೆಗಳು ಪುಸ್ತಕವನ್ನು ಲೋಕಾರ್ಪಣೆಗೊಳಿಸಿದರು. ಹಲವು ವರ್ಷಗಳಿಂದಲೂ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ವಿ.ಕೆ.ಶಿವಾನಂದ ದಂಪತಿಗಳನ್ನು ಗೌರವಿಸಿದರು.
ಸಮಾರಂಭದಲ್ಲಿ ವಿಶ್ರಾಂತ ಕುಲಸಚಿವ ಪ್ರೊ.ಕೆ.ಎನ್.ನಿಂಗೇಗೌಡ, ವಿಶ್ರಾಂತ ಪ್ರಾಂಶುಪಾಲ ಎಸ್.ಬಿ.ಶಂಕರೇಗೌಡ, ಎಂ.ವೆಂಕಟಾರೆಡ್ಡಿ, ಜಂಟಿ ನಿರ್ದೇಶಕ ಉಮೇಶ್, ಮಾನಸ ಶಿಕ್ಷಣ ಸಂಸ್ಥೆ ಅಧ್ಯಕ್ಷ ವಿ.ಕೆ.ಜಗದೀಶ್, ಪ್ರಾಂಶುಪಾಲ ಎ.ಸಿ.ಗೀತಾ, ಶಾಲಾ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರೊ.ಬಿ.ಕೃಷ್ಣ, ಜಿಲ್ಲಾ ಸರಕಾರಿ ನೌಕರ ಸಂಘದ ಅಧ್ಯಕ್ಷ ವೆಂಕಟರಾಮೇಗೌಡ, ಸಮಿತಿ ಸದಸ್ಯರಾದ ಹುಸ್ಕೂರು ಕೃಷ್ಣೇಗೌಡ, ಪ್ರೊ.ಬೋರೇಗೌಡ, ಕೀಲಾರ ಕೃಷ್ಣೇಗೌಡ ಇತರರಿದ್ದರು.