ಕಾರ್ಕಳ: ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ವರ್ತಮಾನದ ಅಗತ್ಯಕ್ಕೆ ತಕ್ಕಂತಿಲ್ಲ. ಈ ಕಾಯ್ದೆಯನ್ನು ಅಗತ್ಯಕ್ಕೆ ತಕ್ಕಂತೆ ಪರಿಷ್ಕರಿಸುವುದು ಅಗತ್ಯ ಎಂದು ಹೈಕೋರ್ಟ್ ಹೇಳಿರುವುದು ಸ್ವಾಗತಾರ್ಹ ಮತ್ತು ಸಕಾಲಿಕ ಎಂದು ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ ಅಭಿಪ್ರಾಯಪಟ್ಟಿದ್ದಾರೆ.ನ್ಯಾಯಮೂರ್ತಿ ಸೂರಜ್ ಗೋವಿಂದರಾಜ ಅವರಿಂದ ಏಕ ಸದಸ್ಯ ನ್ಯಾಯ ಪೀಠವು ಇತ್ತೀಚೆಗೆ ರೆಟ್ ಅರ್ಜಿ ವಿಚಾರಣೆ ಸಂದರ್ಭದಲ್ಲಿ ‘ಕರ್ನಾಟಕ ಸಹಕಾರ ಸಂಘಗಳ (ಕೆಪಿಎಸ್) ಕಾಯ್ದೆ 1959’ ಓಬಿ ರಾಯರ ಕಾಲದ ಕಾಯಿದೆಗೆ ಈವರೆಗೆ ಆಡಳಿತ ನಡೆಸಿರುವ ಸರ್ಕಾರಗಳು ಹಲವು ತಿದ್ದುಪಡಿಗಳನ್ನು ತಂದಿದ್ದರೂ, ಅಸ್ಪಷ್ಟತೆಗಳು ಇನ್ನೂ ಉಳಿದಿರುವುದನ್ನು ಗಮನಿಸಿದೆ.ಕಾಯ್ದೆಯ ಅಡಿಯಲ್ಲಿ ಬರುವ ಸದಸ್ಯತ್ವದ ಹಕ್ಕುಗಳು, ಅನರ್ಹತೆ, ಮತದಾರರ ಪಟ್ಟಿ ಸಿದ್ದಪಡಿಸುವುದು, ಕಾಲಕಾಲಕ್ಕೆ ಚುನಾವಣೆ ನಡೆಸುವುದು, ಲೆಕ್ಕಪರಿಶೋಧನೆ ಮತ್ತು ಆಡಳಿತ ಅಧಿಕಾರಿ ನೇಮಕಾತಿಗೆ ಸಂಬಂಧಿಸಿದ ಹಲವು ನಿಯಮಗಳಲ್ಲಿ ಸಂಘರ್ಷದ ಅಂಶಗಳಿವೆ. ಈ ಎಲ್ಲಾ ಗೊಂದಲಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಪಿಎಸ್ ಕಾಯಿದೆಗೆ ತಾರ್ಕಿಕವಾಗಿ ಸಮಗ್ರ ತಿದ್ದುಪಡಿ ಮಾಡಬೇಕಾಗಿದೆ ಎಂದು ಕೋರ್ಟ್ ಒತ್ತಿ ಹೇಳಿದೆ.
ಯಾವುದೇ ಕಾಯ್ದೆ ಕಾಲದ ಅವಶ್ಯಕತೆ ಗಳಿಗೆ ಸ್ಪಂದಿಸದೆ ಹೋದರೆ ಅದು ಮೌಲ್ಯ ಕಳೆದುಕೊಳ್ಳುತ್ತದೆ ಮತ್ತು ಆ ಕಾಯ್ದೆ ರೂಪಿಸಿದ ಉದ್ದೇಶವು ವ್ಯರ್ಥವಾಗುತ್ತದೆ ಎಂದು ಕಾಮತ್ ಅಭಿಪ್ರಾಯಪಟ್ಟಿದ್ದಾರೆ.ಹೈಕೋರ್ಟ್ ಅಭಿಪ್ರಾಯ ಹೊರ ಬೀಳುವ ಮೊದಲೇ ರಾಜ್ಯ ಸರಕಾರವು ಇದೇ ವರ್ಷ ‘ಕರ್ನಾಟಕ ಸಹಕಾರ ಸಂಘಗಳ ತಿದ್ದುಪಡಿ ಮಸೂದೆ 2025’ ರೂಪಿಸಿ ಅದಕ್ಕೆ ಎರಡೂ ಸದನಗಳಿಂದ ಅಂಗೀಕಾರ ಪಡೆದಿದೆ. ಆದರೆ ಈ ತಿದ್ದುಪಡಿಯಲ್ಲಿ ಮಾಡಿರುವ ಅಂಶಗಳು ಕೆಲವೇ ಕೆಲವು ವಿಷಯಗಳಿಗೆ ಸೀಮಿತವಾಗಿದೆ ಹೊರತು ಹೈಕೋರ್ಟ್ ಹೇಳಿರುವಂತೆ ಕಾಯ್ದೆಯನ್ನು ಕೂಲಂಕಷವಾಗಿ ಪರಿಶೀಲನೆಗೆ ಒಳಪಡಿಸಿ ಸಮಗ್ರ ತಿದ್ದುಪಡಿ ತರುವ ಉದ್ದೇಶವನ್ನು ಹೊಂದಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.
ರಾಜ್ಯ ಸಹಕಾರಿ ಇಲಾಖೆ ಹೈಕೋರ್ಟ್ ಗೆ ಹೇಳಿರುವಂತೆ ಹೊಸ ಸಮಗ್ರ ಸಹಕಾರಿ ಕಾಯ್ದೆ ರೂಪಿಸಲು ತಜ್ಞರ ಸಮಿತಿ ರಚಿಸಿ, ಹಿರಿಯ ಅನುಭವಿ ಸಹಕಾರಿಗಳ ಸಲಹೆಗಳನ್ನು ಪಡೆದು ಕರ್ನಾಟಕ ರಾಜ್ಯದ ಸಹಕಾರಿ ಕ್ಷೇತ್ರದ ಆಮೂಲಾಗ್ರ ಬದಲಾವಣೆಗಾಗಿ ಹೊಸ ಕಾಯ್ದೆ ರೂಪಿಸಲು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಕಾಮತ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.