ಕನ್ನಡಪ್ರಭ ವಾರ್ತೆ ಬೆಂಗಳೂರು
ವಿಕಾಸಸೌಧದಲ್ಲಿ ಶುಕ್ರವಾರ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿನ ವಿವಿಧ ಇಲಾಖೆಗಳನ್ನೊಳಗೊಂಡ ಕಾರ್ಯಕಾರಿ ಸಮಿತಿಯ ಸಭೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೃಷ್ಣ ಬೈರೇಗೌಡ, ಜಿಬಿಎ, ಜಲಮಂಡಳಿ, ಬಿಡಿಎ ಸೇರಿದಂತೆ ನಗರ ವ್ಯಾಪ್ತಿಯಲ್ಲಿ ಕೆಲಸ ಮಾಡುವ ವಿವಿಧ ಇಲಾಖೆಗಳ ನಡುವೆ ಈವರೆಗೆ ಸಮನ್ವಯತೆ ಮೂಡಿಲ್ಲ. ಹೀಗಾಗಿಯೇ ರಸ್ತೆ ದುರಸ್ತಿ ಮಾಡಿದ ನಂತರ ಬೇರೊಂದು ಇಲಾಖೆ ಅದನ್ನು ಅಗೆಯಲಾಗುತ್ತಿದೆ. ಇದರಿಂದ ಜನರಿಗೆ ಸಮಸ್ಯೆಯಾಗುತ್ತಿದೆ. ಹೀಗಾಗಿ ಯಾವ ಇಲಾಖೆ ಯಾವೆಲ್ಲ ಕೆಲಸಗಳನ್ನು ಮಾಡಲಿದೆ ಎಂಬುದು ತಿಳಿದು, ಸಮನ್ವಯತೆಯಿಂದ ಕೆಲಸ ಮಾಡಲು ಜಿಐಎಸ್ ಆಧಾರಿತ ಡ್ಯಾಶ್ಬೋರ್ಡ್ ಅಭಿವೃದ್ಧಿಗೆ ನಿರ್ದೇಶಿಸಿದ್ದೇನೆ ಎಂದರು.
ಡ್ಯಾಶ್ಬೋರ್ಡ್ನಲ್ಲಿ ಎಲ್ಲ ಇಲಾಖೆಗಳು ತಮ್ಮ ಕ್ರಿಯಾಯೋಜನೆಗಳನ್ನು ಅಪ್ಲೋಡ್ ಮಾಡಬೇಕು. ಅದರ ಆಧಾರದಲ್ಲಿ ಯಾವ ಇಲಾಖೆ ಎಲ್ಲಿ, ಯಾವ ರೀತಿಯ ಕೆಲಸ ಮಾಡಲಿದೆ ಎಂಬುದು ತಿಳಿಯಬಹುದು. ಜತೆಗೆ ರಸ್ತೆ ಇತಿಹಾಸವನ್ನೂ ಅದರಲ್ಲಿ ಅಪ್ಲೋಡ್ ಮಾಡಲಾಗುವುದು. ಯಾವ ರಸ್ತೆ ಯಾವ ಅವಧಿಯಲ್ಲಿ ದುರಸ್ತಿ ಮಾಡಲಾಗಿದೆ ಎಂಬುದೂ ಸೇರಿದಂತೆ ಇನ್ನಿತರ ಮಾಹಿತಿಗಳು ಅದರಲ್ಲಿರಲಿದೆ. ಅದರಿಂದಾಗಿ ರಸ್ತೆ ದುರಸ್ತಿಗೂ ಮುನ್ನ ಆ ಭಾಗದಲ್ಲಿ ಬೇರೆ ಇಲಾಖೆಗಳು ಯಾವುದಾದರೂ ಕಾಮಗಾರಿಗಳನ್ನು ನಡೆಸುತ್ತಿವೆಯೇ ಎಂಬುದು ತಿಳಿಯಲಿದೆ. ಜತೆಗೆ ಸಾರ್ವಜನಿಕರು ತಮ್ಮ ದೂರುಗಳನ್ನೂ ಇದರಲ್ಲಿ ದಾಖಲಿಸಲು ಅವಕಾಶ ನೀಡಲಾಗುವುದು ಎಂದು ಹೇಳಿದರು.ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿನ ವಿವಿಧ ಇಲಾಖೆಗಳನ್ನೊಳಗೊಂಡ ಕಾರ್ಯಕಾರಿ ಸಮಿತಿಯಲ್ಲಿ ನಗರ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಎಲ್ಲ ಇಲಾಖೆಗಳೂ ಬರಲಿವೆ. ಅವುಗಳು ಸಮಿತಿಯ ಸದಸ್ಯರಾಗಿರಲಿದ್ದು, ಪ್ರತಿ 2 ತಿಂಗಳಿಗೊಮ್ಮೆ ಸಭೆ ನಡೆಸಬೇಕಿದೆ. ಅದರಂತೆ ಈ ಹಿಂದೆ ಮಾರ್ಚ್ನಲ್ಲಿ ಸಭೆ ನಡೆಸಲಾಗಿತ್ತು. ಇದೀಗ ಎರಡನೇ ಸಭೆ ಮಾಡಲಾಗುತ್ತಿದೆ. ಇನ್ನು ಮುಂದೆ ಅನಿವಾರ್ಯವಾದರೆ ಪ್ರತಿ ತಿಂಗಳು ಸಭೆ ನಡೆಸುವ ಬಗ್ಗೆಯೂ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದೇನೆ ಎಂದು ತಿಳಿಸಿದರು.