ಕನ್ನಡಪ್ರಭ ವಾರ್ತೆ ಬೆಂಗಳೂರು

ರಸ್ತೆ ಅಗೆದ ನಂತರ ಅದನ್ನು ಮುಚ್ಚದೇ ಅಧ್ವಾನ ಸ್ಥಿತಿಯಲ್ಲಿ ಬಿಟ್ಟಿರುವುದನ್ನು ಪ್ರಶ್ನಿಸಿದ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರಿಗೆ ಜಿಬಿಎ ಅಧಿಕಾರಿಗಳು ತಪ್ಪು ಮಾಹಿತಿ ನೀಡಿ ಯಾಮಾರಿಸಲು ಯತ್ನಿಸಿ ಸಿಕ್ಕಿ ಬಿದ್ದಿದ್ದಾರೆ!

ಗುರುವಾರ ತಡರಾತ್ರಿ ರಿಂಗ್ ರಸ್ತೆಯಲ್ಲಿ ಅಧಿಕಾರಿಗಳ ಜೊತೆ ಪರಿಶೀಲನೆ ನಡೆಸಿದ ಸಚಿವರು, ದೊಡ್ಡನೆಕ್ಕುಂದಿ ಜಂಕ್ಷನ್ ಸಮೀಪದಲ್ಲಿ ಸರ್ವೀಸ್ ರಸ್ತೆ ಅಗೆದು ಹಾಗೆಯೇ ಬಿಟ್ಟಿರುವುದನ್ನು ಗಮನಿಸಿದರು. ಈ ಬಗ್ಗೆ ಸ್ಥಳದಲ್ಲಿದ್ದ ಜಿಬಿಎ, ಮೆಟ್ರೋ, ಜಲಮಂಡಳಿ ಅಧಿಕಾರಿಗಳನ್ನು ಪ್ರಶ್ನಿಸಿದರು.

ರಾತ್ರೋ ರಾತ್ರಿ ರಸ್ತೆ ಅಗೆಯುತ್ತಾರೆ. ಬೆಸ್ಕಾಂನವರು ಮಾಡಿರಬೇಕು ಎಂದು ಅಧಿಕಾರಿಯೊಬ್ಬರು ಸಮಜಾಯಿಷಿ ನೀಡಿದರು.

ಈ ಉತ್ತರದಿಂದ ತೃಪ್ತರಾಗದ ಸಚಿವರು, ಇದು ಬೆಸ್ಕಾಂ, ಜಲಮಂಡಳಿ ಪೈಪ್‌ಲೈನ್ ಅಲ್ಲ. ಒಎಫ್‌ಸಿ ಕೇಬಲ್ ಅಳವಡಿಸಲಾಗಿದೆ. ಅದನ್ನು ಕವರ್ ಅಪ್ ಮಾಡಲು ನೀವು ಪ್ರಯತ್ನಿಸುತ್ತಿದ್ದಿರಾ? ಒಂದೊಂದು ಸಲ ಒಂದು ಸಂಸ್ಥೆಯವರು ಅಗೆದಿದ್ದಾರೆ ಎನ್ನುತ್ತಿರಾ. ರಸ್ತೆ ಅಗೆದವರು ಯಾರು ಎನ್ನುವುದು ಗೊತ್ತಿಲ್ಲವೇ? ಅವರೇನು ಆಕಾಶದಿಂದ ಬಂದು ಅಗೆಯುತ್ತಾರಾ. ಎಷ್ಟು ಫಾಸ್ಟಾಗಿ ಸ್ಪಿನ್ ಮಾಂತ್ರಿಕರಂತೆ ಮಾತುಗಳನ್ನು ತಿರುಗಿಸುತ್ತಿರಾ? ಎಂದು ತರಾಟೆಗೆ ತೆಗೆದುಕೊಂಡರು.


ಈಗಲೇ ಜೆಸಿಬಿ ತರಿಸಿ, ಏನು ಹಾಕಿದ್ದಾರೆ ಎಂದು ನೋಡಿಯೇ ಬಿಡೋಣಾ. ಆರು ತಿಂಗಳ ಹಿಂದಷ್ಟೇ ಡಾಂಬರೀಕರಣ ಮಾಡಿದ ರಸ್ತೆಯನ್ನು ಅಗೆಯಲು ಅನುಮತಿ ನೀಡಿದ್ದು ಏಕೆ? ರಸ್ತೆಯಲ್ಲಿ ಕೇಬಲ್ ಅಳವಡಿಸುವಲ್ಲಿ ನಿಮ್ಮ ಪಾತ್ರ ಇಲ್ಲವೆಂದಾದರೆ ಕಿತ್ತು ಬಿಸಾಕಿ ಎಂದು ಸಚಿವರು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

ರಸ್ತೆಯನ್ನು ಅಗೆದ ಮೇಲೆ ಮುಚ್ಚಬೇಕಲ್ಲವೇ? ನೀವು ನಿಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುವುದೇಕೆ? ರಸ್ತೆ ಸರಿ ಮಾಡಿ ಎಂದು ನಿಮ್ಮಲ್ಲಿ ಬೇಡಿಕೊಳ್ಳಬೇಕಾ? ನಿಮ್ಮ ಕೆಲಸ ನೀವು ಮಾಡಬೇಕಲ್ವಾ? ಜನರ ಅಳುವಿನ ಧ್ವನಿ ಕೇಳಿಸುತ್ತಿಲ್ಲವೇ? ನಾವು ಕೇಳಿದ ಮೇಲೆ ಕೆಲಸ ಮಾಡುತ್ತೇವೆ ಎಂದರೆ ಹೇಗೆ? ನೀವೇನು ಉಪಕಾರ ಮಾಡುತ್ತಿರಾ? ಸಹಾಯ ಮಾಡುತ್ತಿದ್ದಿರಾ? ನಿಮ್ಮ ಕೆಲಸ ನೀವು ಮಾಡಿ ಎಂದು ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದರು.

ಈ ವೇಳೆ ಸ್ಥಳದಲ್ಲಿದ್ದ ಪೂರ್ವ ಪಾಲಿಕೆ ಆಯುಕ್ತ ರಮೇಶ್ ಅವರು, ರಸ್ತೆ ಅಗೆಯಲು ಏಕೆ ಅನುಮತಿ ಕೊಟ್ಟಿದ್ದಿರಾ? ಯಾರಿಗೆ ಅನುಮತಿ ಕೊಟ್ಟಿದ್ದಿರಾ? ಅದಾದ ಬಳಿಕ ರಸ್ತೆಯನ್ನು ಏಕೆ ಸರಿ ಮಾಡಿಲ್ಲ? ಎಂಜಿನಿಯರ್‌ಗಳಿಗೆ ಪ್ರಶ್ನೆ ಮಾಡಿದರು.