ರೋಣ: ರೈತರು ತಮ್ಮ ಜಮೀನುಗಳಲ್ಲಿ ನಿರ್ಮಾಣ ಮಾಡಿಕೊಂಡಿರುವ ಕೃಷಿ ಹೊಂಡದ ಸಹಾಯಧನ ಹಣ ಶೀಘ್ರ ರೈತರ ಖಾತೆಗೆ ಜಮಾ ಮಾಡಬೇಕು .ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳ ರೈತರು ಕೃಷಿ ಇಲಾಖೆಯ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಈ ಕುರಿತು ಪ್ರತಿಕ್ರಿಯಿಸಿದ ತಾಲೂಕು ಸಹಾಯಕ ಕೃಷಿ ನಿರ್ದೇಶಕ ರವೀಂದ್ರಗೌಡ ಪಾಟೀಲ, ಕೃಷಿ ಭಾಗ್ಯ ಯೋಜನೆಯಲ್ಲಿ 2023-24 ಹಾಗೂ ಪ್ರಸಕ್ತ ಸಾಲಿನಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಿಕೊಂಡಿರುವ ರೈತರು ಕೃಷಿಹೊಂಡದ ಸುತ್ತ ತಂತಿ ಬೇಲಿ ನಿರ್ಮಾಣ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಆ ಬಳಿಕವೇ ಸಹಾಯಧನ ಜಮಾ ಆಗುವದು. ಈಗಾಗಲೇ ಶೇ. 75 ರಷ್ಟು ಹಣ ರೈತರು ತಂತಿ ಬೇಲಿ ನಿರ್ಮಿಸಿಕೊಂಡಿದ್ದು, ಅವರೆಲ್ಲರ ಖಾತೆಗಳಿಗೂ ಹಣ ಜಮೆಯಾಗಿದ್ದು, ತಂತಿ ಬೇಲಿ ನಿರ್ಮಾಣ ಪೂರ್ಣ ಮಾಡಿಕೊಂಡ ರೈತರ ಖಾತೆಗಳಿಗೆ ಸಂಪೂರ್ಣ ಹಣ ಜಮೆ ಮಾಡಲಾಗುತ್ತದೆ. ಕಡ್ಡಾಯವಾಗಿ ರೈತರು ತಂತಿ ಬೇಲಿ ನಿರ್ಮಾಣ ಮಾಡಿಕೊಳ್ಳಬೇಕು. ಉಳಿದ ಹಣ ರೈತರಿಗೆ ಶೀಘ್ರದಲ್ಲಿಯೇ ಜಮೆ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಬಸವರಾಜ ಅಂಗಡಿ, ಸುಭಾಸ ಮಂಗಳೂರ, ಸಂಗಪ್ಪ ಕಂಬಳಿ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳ ರೈತರು ಇದ್ದರು.