ಹೇಮಾವತಿ ನೀರು ಹರಿಯದಿದ್ದರೆ ಸಂಕಷ್ಟ: ಜಿಲ್ಲಾಧಿಕಾರಿ

KannadaprabhaNewsNetwork |  
Published : Aug 09, 2026, 01:30 AM IST
೮ಕೆಎಂಎನ್‌ಡಿ-೯ಮಂಡ್ಯದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಚಿವರಾದ ಎನ್.ಚಲುವರಾಯಸ್ವಾಮಿ ಹಾಗೂ ಪಿ.ಎಂ.ನರೇಂದ್ರಸ್ವಾಮಿ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಬೆಳೆಗಳು ಹಾಗೂ ನೀರಿನ ಪರಿಸ್ಥಿತಿಯನ್ನು ವಿವರಿಸಿದರು. | Kannada Prabha

ಸಾರಾಂಶ

ಮಂಡ್ಯ ಜಿಲ್ಲೆಯ ಹೇಮಾವತಿ ಜಲಾನಯನ ವ್ಯಾಪ್ತಿಯಲ್ಲಿ ೩೨೯ ಕೆರೆಗಳಿವೆ. ಅದರಲ್ಲಿ ೧೧೫ ಕೆರೆಗಳು ನೀರಿಲ್ಲದೆ ಖಾಲಿಯಾಗಿವೆ. ೧೬೩ ಕೆರೆಗಳಲ್ಲಿ ಮಾತ್ರ ಶೇ.೨೫ಕ್ಕೂ ಕಡಿಮೆ ನೀರು ಸಂಗ್ರಹವಾಗಿದೆ. ಶೇ.೭೫ ರಿಂದ ೧೦೦ರಷ್ಟು ನೀರಿರುವ ಕೆರೆಗಳು ಇಲ್ಲ. ಅರ್ಧದಷ್ಟು ನೀರಿರುವ ಕೆರೆಗಳು ಕೇವಲ ೮ ಮಾತ್ರ ಇವೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಹೇಮಾವತಿ ಜಲಾಶಯದಿಂದ ಜಿಲ್ಲೆಯ ಹೇಮಾವತಿ ನಾಲೆಗಳಿಗೆ ನೀರು ಹರಿಯದಿದ್ದರೆ ಕೆ.ಆರ್.ಪೇಟೆ, ನಾಗಮಂಗಲ ಹಾಗೂ ಪಾಂಡವಪುರ ತಾಲೂಕುಗಳ ಕುಡಿಯುವ ನೀರಿಗೆ ಸಂಕಷ್ಟ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸಚಿವರುಗಳ ಗಮನಕ್ಕೆ ತಂದರು.

ಮಂಡ್ಯದ ಜಿಪಂ ಕಾವೇರಿ ಸಭಾಂಗಣದಲ್ಲಿ ಸಚಿವರಾದ ಎನ್.ಚಲುವರಾಯಸ್ವಾಮಿ ಹಾಗೂ ಪಿ.ಎಂ.ನರೇಂದ್ರಸ್ವಾಮಿ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಹೇಮಾವತಿಯಿಂದ ನೀರು ಹರಿದರೆ ಕೆ.ಆರ್.ಪೇಟೆ ತಾಲೂಕಿನ ೫೨ ಹಳ್ಳಿಗಳಿಗೆ ಕುಡಿವ ನೀರಿಗೆ ಅನುಕೂಲವಾಗಲಿದೆ. ನಾಗಮಂಗಲ ಪಟ್ಟಣಕ್ಕೆ ನೀರು ಪೂರೈಸುವ ಸೂಳೆಕೆರೆಯಲ್ಲಿ ೦.೨ ಟಿಎಂಸಿ ಮಾತ್ರ ನೀರಿದೆ. ಪಾಂಡವಪುರ ತಾಲೂಕು ತೊಣ್ಣೂರು ಕೆರೆಯಿಂದ ೩೪ ಗ್ರಾಮಗಳಿಗೆ ನೀರು ಪೂರೈಸಲಾಗುತ್ತಿದ್ದು, ಆ ಕೆರೆಯಲ್ಲಿ ೦.೪ ಟಿಎಂಸಿಯಷ್ಟು ಮಾತ್ರ ನೀರು ಶೇಖರಣೆಯಾಗಿದೆ. ಜಲಾಶಯದಿಂದ ೪ ಸಾವಿರ ಕ್ಯುಸೆಕ್ ನೀರು ಹರಿಸಿದರೆ ತುಮಕೂರು ಕಡೆಗೆ ೨ ಸಾವಿರ ಕ್ಯುಸೆಕ್ ಹರಿದು ನಮಗೆ ೨ ಸಾವಿರ ಕ್ಯುಸೆಕ್ ಹರಿದರೂ ಇಲ್ಲಿಗೆ ತಲುಪಲು ೨ ದಿನ ಬೇಕಿದೆ. ಹಾಗಾಗಿ ತುರ್ತಾಗಿ ಹೇಮಾವತಿ ಜಲಾಶಯದಿಂದ ನೀರು ಪೂರೈಸಬೇಕಾದ ಅನಿವಾರ್ಯತೆ ಇದೆ ಎಂಬುದನ್ನು ತಿಳಿಸಿದರು.

ಜಿಲ್ಲೆಯ ಹೇಮಾವತಿ ಜಲಾನಯನ ವ್ಯಾಪ್ತಿಯಲ್ಲಿ ೩೨೯ ಕೆರೆಗಳಿವೆ. ಅದರಲ್ಲಿ ೧೧೫ ಕೆರೆಗಳು ನೀರಿಲ್ಲದೆ ಖಾಲಿಯಾಗಿವೆ. ೧೬೩ ಕೆರೆಗಳಲ್ಲಿ ಮಾತ್ರ ಶೇ.೨೫ಕ್ಕೂ ಕಡಿಮೆ ನೀರು ಸಂಗ್ರಹವಾಗಿದೆ. ಶೇ.೭೫ ರಿಂದ ೧೦೦ರಷ್ಟು ನೀರಿರುವ ಕೆರೆಗಳು ಇಲ್ಲ. ಅರ್ಧದಷ್ಟು ನೀರಿರುವ ಕೆರೆಗಳು ಕೇವಲ ೮ ಮಾತ್ರ ಇವೆ. ಹೇಮಾವತಿ ಜಲಾಶಯದಿಂದ ನೀರು ಹರಿದರೆ ಕೆರೆಗಳನ್ನು ತುಂಬಿಸುವುದಕ್ಕೆ ಅನುಕೂಲವಾಗಲಿದೆ ಎಂದು ಸಚಿವರಿಗೆ ತಿಳಿಸಿದರು.

ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಯಲ್ಲಿ ೧೭೪ ಕೆರೆಗಳಿದ್ದು, ೧೫ ಕೆರೆಗಳಲ್ಲಿ ಶೇ.೧೦೦ರಷ್ಟು, ೩೬ ಕೆರೆಗಳಲ್ಲಿ ಏ.೭೫ರಷ್ಟು, ೭೭ ಕೆರೆಗಳಲ್ಲಿ ಶೇ.೫೦ರಷ್ಟು, ೧೫ ಕೆರೆಗಳಲ್ಲಿ ಶೇ.೨೫, ೨೦ ಕೆರೆಗಳಲ್ಲಿ ಶೇ.೨೫ಕ್ಕಿಂತ ಕಡಿಮೆ, ೧೧ ಕೆರೆಗಳು ಮಾತ್ರ ಖಾಲಿ ಇರುವುದಾಗಿ ಸಭೆಯ ಗಮನಕ್ಕೆ ತಂದರು.

ಜಿಲ್ಲೆಯಲ್ಲಿ ಪೂರ್ವ ಮುಂಗಾರು ವಾಡಿಗೆ ೧೫೯ ಮಿ.ಮೀ. ಇದ್ದು, ೧೩೯.೮ರಷ್ಟು ಮಾತ್ರ ಮಳೆಯಾಗಿ ಶೇ.೧೨ರಷ್ಟು ಕೊರತೆ ಉಂಟಾಗಿದೆ. ಮುಂಗಾರು ಮಳೆ ಜೂನ್‌ನಿಂದ ಇಲ್ಲಿಯವರೆಗೆ ೧೨೯.೨ ಮಿ.ಮೀ. ವಾಡಿಕೆ ಮಳೆಯಾಗಬೇಕಿದ್ದು, ಇದುವರೆಗೆ ಶೇ.೮೦.೮ ಮಿ.ಮೀ. ಮಾತ್ರ ಮಳೆಯಾಗಿದ್ದು ಶೇ.೪೨ರಷ್ಟು ಕೊರತೆ ಉಂಟಾಗಿದೆ ಎಂದು ವಿವರಿಸಿದರು.

ಬಿತ್ತನೆಯಲ್ಲೂ ೨,೦೬,೮೩೫ ಹೆಕ್ಟೇರ್‌ನಲ್ಲಿ ಗುರಿ ಹೊಂದಿದ್ದು, ಕೇವಲ ೨೪,೧೨೩ ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದ್ದು ಶೇ.೧೧.೭ರಷ್ಟು ಗುರಿ ಸಾಧಿಸಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ೬೧,೬೮೫ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿ ಶೇ.೩೨.೧ರಷ್ಟು ಗುರಿ ಸಾಧಿಸಲಾಗಿತ್ತು.

ಜಿಲ್ಲೆಯ ಐದು ಸಕ್ಕರೆ ಕಾರ್ಖಾನೆಗಳು ಆರಂಭಗೊಂಡಿವೆ. ಈವರೆಗೆ ೩೬೮೬ ಹೆಕ್ಟೇರ್ ಕಬ್ಬು ಪ್ರದೇಶ ಕಟಾವು ಮುಗಿದಿದೆ. ೩.೮೭ ಲಕ್ಷ ಮೆಟ್ರಿಕ್ ಟನ್ ಕಬ್ಬುಆರೆದಿದ್ದು, ಉಳಿದೆ ೩೩,೬೭೭ ಪ್ರದೇಶದ ಕಬ್ಬನ್ನು ೧೫೭ ದಿನಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದರು.

ಸರ್ಕಾರದಿಂದ ರೈತರಿಗೆ ನೀಡಬೇಕಾದ ಟನ್ ಕಬ್ಬಿನ ೫೦ ರು. ಹಣವನ್ನು ಈಗಾಗಲೇ ಪಾವತಿಸಲಾಗಿದೆ. ಕಾರ್ಖಾನೆಯವರು ಹಣವನ್ನು ಪಾವತಿಸದೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ನಾವೂ ಕೂಡ ವಕೀಲರೊಂದಿಗೆ ಚರ್ಚಿಸಿ ತಡೆಯಾಜ್ಞೆ ತೆರವುಗೊಳಿಸುವ ಪ್ರಯತ್ನ ನಡೆಸುತ್ತಿರುವುದಾಗಿ ಸಭೆಯ ಗಮನಕ್ಕೆ ತಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ಬಾಟಮ್‌...ಕುಡಿವ ನೀರಿನ ಕೊರತೆಯಾಗದಂತೆ ನಿಗಾವಹಿಸಿ: ಸಿದ್ದು ಪಾಟೀಲ್‌