ಸೋಮವಾರಪೇಟೆ: ಜಮ್ಮು ಮತ್ತು ಕಾಶ್ಮೀರಾದ ಪುಲ್ವಾಮಾದಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಸಿ.ಆರ್.ಪಿ.ಎಫ್. ಯೋಧ ಕೆ.ಜೆ. ನವೀನ್ ಅವರ ಅಂತ್ಯಕ್ರಿಯೆ ಬುಧವಾರ ಸ್ವಗ್ರಾಮದಲ್ಲಿ ನೆರವೇರಿತು.ಮಂಗಳವಾರ ರಾತ್ರಿ ೧.೩೦ರ ಸುಮಾರಿಗೆ ಮೃತ ನವೀನ್ ಅವರ ಪಾರ್ಥೀವ ಶರೀರ ಸ್ವಗ್ರಾಮಕ್ಕೆ ಆಗಮಿಸಿತು. ೧೮೦ನೇ ಬೆಟಾಲಿಯನ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿರಿಯಾಪಟ್ಟಣದ ಯೋಧ ಬಸವರಾಜ್ ಪಾರ್ಥಿವ ಶರೀರದೊಂದಿಗೆ ಶ್ರೀನಗರದಿಂದ ಆಗಮಿಸಿದ್ದಾರೆ, ಬೆಂಗಳೂರು ಯಲಹಂಕದಲ್ಲಿರುವ ಸಿಆರ್ಪಿಎಫ್ ಕಚೇರಿಯಿಂದ ೬ ಮಂದಿ ಯೋಧರು ಯಡವಾರೆಗೆ ಆಗಮಿಸಿದರು.ಬುಧವಾರ ಬೆಳಗ್ಗೆ ಮನೆಯ ಮುಂಭಾಗ ಮೃತ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಕುಟುಂಬಸ್ಥರ ಸಹಿತ ನೂರಾರು ಮಂದಿ ಸಾರ್ವಜನಿಕರು ಆಗಮಿಸಿ ಅಂತಿಮ ದರ್ಶನ ಪಡೆದರು. ನಂತರ ಜಿಲ್ಲಾ ಸಶಸ್ತ್ರ ಪಡೆಯಿಂದ ಗೌರವ ವಂದನೆ ನಡೆಯಿತು. ಸಿ.ಆರ್.ಪಿ.ಎಫ್.ನ ಅಸಿಸ್ಟೆಂಟ್ ಕಮಾಂಡರ್ ಯೋಗೇಂದ್ರ ಸೈನ್ ಅವರು ಮೃತದೇಹಕ್ಕೆ ನಮನ ಸಲ್ಲಿಸಿದರು.