ನಂಬಿಕೆಯಿಂದ ವ್ಯವಹಾರ ಮಾಡುವ ಮನೋಭಾವ ಬೆಳೆಸಿಕೊಳ್ಳಿ

KannadaprabhaNewsNetwork | Published : Sep 5, 2024 12:34 AM

ಸಾರಾಂಶ

ಮಾನವ ಮೂಲತಃ ಸಂಘ ಜೀವಿಯಾಗಿದ್ದು, ಸಹಕಾರ, ಸಹಬಾಳ್ವೆಯನ್ನು ಬೆಳಸಿಕೊಂಡಾಗ ಮಾತ್ರವೇ ಸರ್ವಾಂಗೀಣ ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ ಎಂದು ಷಡಕ್ಷರ ಮಠದ ಶ್ರೀ ರುದ್ರಮುನಿ ಸ್ವಾಮೀಜಿ ತಿಳಿಸಿದರು.

ತಿಪಟೂರು: ಮಾನವ ಮೂಲತಃ ಸಂಘ ಜೀವಿಯಾಗಿದ್ದು, ಸಹಕಾರ, ಸಹಬಾಳ್ವೆಯನ್ನು ಬೆಳಸಿಕೊಂಡಾಗ ಮಾತ್ರವೇ ಸರ್ವಾಂಗೀಣ ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ ಎಂದು ಷಡಕ್ಷರ ಮಠದ ಶ್ರೀ ರುದ್ರಮುನಿ ಸ್ವಾಮೀಜಿ ತಿಳಿಸಿದರು. ನಗರದ ಸೀತಾರಾಮಯ್ಯ ಶತಮಾನೋತ್ಸವ ಭವನದಲ್ಲಿ ಆಯೋಜಿಸಿದ್ದ ಶ್ರೀ ಸೃಜನಶೀಲ ಪತ್ತಿನ ಸಹಕಾರ ಸಂಘ ಹಾಗೂ ಶ್ರೀ ಪ್ರಗತಿಶೀಲ ಗೃಹ ನಿರ್ಮಾಣ ಸಹಕಾರ ಸಂಘಗಳ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು. ಹುಟ್ಟುತ್ತಲೆ ಮನುಷ್ಯ ಸಂಘ ಜೀವಿ ಹಾಗೂ ಸಮಾಜ ಜೀವಿ. ಸೌಹಾರ್ಧತೆಯಿಂದ ಕೂಡಿದ ಸಂಬಂಧಗಳೇ ಅವರ ಜೀವನಾಡಿಗಳಾಗಿದ್ದು, ಪರಸ್ಪರ ನಂಬಿಕೆ, ವಿಶ್ವಾಸಗಳಿಂದ ವ್ಯವಹಾರ ಮಾಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದರು. ಹಿಂದಿನ ಕಾಲದಿಂದಲೂ ಸಹಕಾರ ಎಂಬುದು ಮನುಷ್ಯನ ಜೀವನದಲ್ಲಿ ಹಾಸುಹೊಕ್ಕಾಗಿದೆ. ತಮ್ಮ ಆರ್ಥಿಕ ಸಮಸ್ಯೆಗಳನ್ನು ನೀಗಿಸಿಕೊಳ್ಳಲು ಪಡೆಯುವ ಸಾಲವನ್ನು ಮತ್ತೊಬ್ಬ ಸದಸ್ಯನಿಗೆ ಸಾಲಸಿಗಲು ಹಾಗೂ ಸಂಘದ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಕೊಂಡು ಮರುಪಾವತಿಸಬೇಕು. ಯಾರು ಎಷ್ಟೇ ದೊಡ್ಡ ವ್ಯವಹಾರಗಳನ್ನು ಮಾಡುತ್ತಿದ್ದರೂ ಮಾನವೀಯ ಮೌಲ್ಯಗಳನ್ನು ಮಾತ್ರ ಮರೆಯಬಾರದು ಎಂದರು. ಸಹಕಾರ ಸಂಘಗಳ ಅಧ್ಯಕ್ಷ ಎಸ್. ಜಯಣ್ಣ ಮಾತನಾಡಿ, ಸಹಕಾರ ಸಂಘವು ಸೇವಾ ಮನೋಭಾವನೆಯನ್ನು ಹೊಂದಿರುವುದರಿಂದಲೇ ಅಧಿಕ ಲಾಭ ಗಳಿಸಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ನಮ್ಮ ಸಹಕಾರಿ ಸಂಘವು ಮಹಿಳೆಯರು, ಬಡ, ಮಧ್ಯಮವರ್ಗದವರನ್ನು ಆರ್ಥಿಕವಾಗಿ ಸಧೃಡಗೊಳಿಸುವ ಸಲುವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಂಘದಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿತ್ಯ ನೀಡಲಾಗಿದೆ. ಪ್ರಸ್ತುತ ಸಂಘವು ₹10ಕೋಟಿಗೂ ಅಧಿಕ ವ್ಯವಹಾರ ನಡೆಸಿದ್ದು, ₹32 ಲಕ್ಷಕ್ಕೂ ಹೆಚ್ಚು ಲಾಭ ಹೊಂದಿದೆ. ಸದಸ್ಯರಿಗೆ ಶೇ.12ರಷ್ಟು ಡಿವಿಡೆಂಡ್‌ ಕೊಡಲಾಗುತ್ತಿದ್ದು, ಠೇವಣಿದಾರರು, ಪಿಗ್ಮಿದಾರರು, ಸದಸ್ಯರುಗಳ ಪರಿಶ್ರಮದಿಂದ ಸಂಘವು ಅಭಿವೃದ್ದಿಯತ್ತ ನಡೆಯುತ್ತಿದೆ ಎಂದರು. ನಿವೃತ್ತ ನೌಕರರ ವಿವಿದೋದ್ದೇಶ ಸಹಕಾರ ಸಂಘದ ಅಧ್ಯಕ್ಷ ವಿ.ಎನ್.ಮಹದೇವಯ್ಯ ಇದ್ದರು.

Share this article