ಕನ್ನಡಪ್ರಭ ವಾರ್ತೆ ಉಡುಪಿ
ಕುಂದಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣ ಬಿ. ಜಿ. ಅವರಿಗೆ ರಾಜ್ಯ ಸರ್ಕಾರ ಈ ಬಾರಿಯ ಉತ್ತಮ ಪ್ರಾಂಶುಪಾಲ ಪ್ರಶಸ್ತಿ ಘೋಷಿಸಿತ್ತು.
ಆದರೆ ಅವರಿಗೆ ಪ್ರಶಸ್ತಿ ನೀಡುವುದಕ್ಕೆ ಕೆಲ ಪ್ರಗತಿಪರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಎರಡು ವರ್ಷಗಳ ಹಿಂದೆ ನಡೆದ ಹಿಜಾಬ್ ವಿವಾದದ ಸಂದರ್ಭದಲ್ಲಿ ಈ ಪ್ರಾಂಶುಪಾಲರು ಹಿಜಾಬ್ ಧರಿಸಿದ್ದ ವಿದ್ಯಾರ್ಥಿನಿಯರನ್ನು ಕಾಲೇಜಿನೊಳಗೆ ಪ್ರವೇಶಿಸುವುದಕ್ಕೆ ತಡೆದಿದ್ದರು ಎಂಬುದು ಈ ಪ್ರಗತಿಪರರ ಆಕ್ಷೇಪಕ್ಕೆ ಕಾರಣ.ಆದರೆ ಈ ಪ್ರಾಂಶುಪಾಲರು ಅಂದಿನ ಸರ್ಕಾರದ ಹಿಜಾಬ್ ಧರಿಸಿ ತರಗತಿಯೊಳಗೆ ಪ್ರವೇಶಿಸುವಂತಿಲ್ಲ ಎಂಬ ಆದೇಶವನ್ನು ಪಾಲಿಸಿದ್ದರು. ವಿದ್ಯಾರ್ಥಿನಿಯರು ಕಾಲೇಜಿನಲ್ಲಿ ಹಿಜಾಬ್ ಧರಿಸುವುದನ್ನು ಇತರ ವಿದ್ಯಾರ್ಥಿಗಳು ವಿರೋಧಿಸಿ ಪ್ರತಿಭಟಿಸಿದ್ದರಿಂದ, ಪ್ರಾಂಶುಪಾಲರು ಹಿಜಾಬ್ ಧರಿಸಿದ್ದ ವಿದ್ಯಾರ್ಥಿನಿಯರನ್ನು ಗೇಟಿನ ಬಳಿ ತಡೆದಿದ್ದರು. ಈ ಫೋಟೋವನ್ನು ಬಳಸಿಕೊಂಡು ಕೆಲ ಪ್ರಗತಿಪರರು ಈ ಪ್ರಾಂಶುಪಾಲರು ಹಿಜಾಬ್ ವಿರೋಧಿ ಎಂಬಂತೆ ಬಿಂಬಿಸಿ, ಅವರಿಗೆ ಪ್ರಶಸ್ತಿ ನೀಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಒತ್ತಡಕ್ಕೆ ಮಣಿದ ಸರ್ಕಾರ ರಾಮಕೃಷ್ಣ ಬಿ.ಜಿ. ಅವರಿಗೆ ಘೋಷಿಸಲಾಗಿದ್ದ ಪ್ರಶಸ್ತಿಯನ್ನು ತಡೆಹಿಡಿದಿದೆ.