ವಾಲಿಬಾಲ್ ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡ ಸರ್ಕಾರಿ ಶಾಲೆಯ ಮಕ್ಕಳು

KannadaprabhaNewsNetwork | Published : Sep 5, 2024 12:34 AM

ದಕ್ಷಿಣ ವಲಯದ ಶಾಲಾ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಕಾವೇರಿ ಶಾಲೆಯ ಮೈದಾನದಲ್ಲಿ ಪಂದ್ಯಾವಳಿ ಆಯೋಜಿಸಲಾಗಿತ್ತು. ಜಿಲ್ಲೆಯ 18ಕ್ಕೂ ಹೆಚ್ಚು ಶಾಲೆಯ ವಿದ್ಯಾರ್ಥಿಗಳು ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದರು. ಅತ್ಯುತ್ತಮ ಪ್ರದರ್ಶನ ತೋರುವ ಮೂಲಕ ಫೈನಲ್ ಪ್ರವೇಶಿಸಿದ ಕುಕ್ಕರಹಳ್ಳಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು, ಫೈನಲ್‌ನಲ್ಲಿ ಎದುರಾಳಿ ತಂಡವನ್ನು ಸೋಲಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ಕನ್ನಡಪ್ರಭ ವಾರ್ತೆ ಮೈಸೂರು

ಬಸವ ಮಾರ್ಗ ಸಂಸ್ಥೆ ದತ್ತು ಪಡೆದ ಕುಕ್ಕರಹಳ್ಳಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ದಕ್ಷಿಣ ವಲಯ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಮತ್ತು ಜಿಲ್ಲಾ ಮಟ್ಟದಲ್ಲಿ ಎರಡನೇ ಸ್ಥಾನ ಪಡೆದು ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ದಕ್ಷಿಣ ವಲಯದ ಶಾಲಾ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಕಾವೇರಿ ಶಾಲೆಯ ಮೈದಾನದಲ್ಲಿ ಪಂದ್ಯಾವಳಿ ಆಯೋಜಿಸಲಾಗಿತ್ತು.

ಜಿಲ್ಲೆಯ 18ಕ್ಕೂ ಹೆಚ್ಚು ಶಾಲೆಯ ವಿದ್ಯಾರ್ಥಿಗಳು ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದರು. ಅತ್ಯುತ್ತಮ ಪ್ರದರ್ಶನ ತೋರುವ ಮೂಲಕ ಫೈನಲ್ ಪ್ರವೇಶಿಸಿದ ಕುಕ್ಕರಹಳ್ಳಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು, ಫೈನಲ್ನಲ್ಲಿ ಎದುರಾಳಿ ತಂಡವನ್ನು ಸೋಲಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ದರ್ಶನ್ ಮತ್ತು ಚಂದ್ರಶೇಖರ್ ಸ್ಮರಣಾರ್ಥ ಮೈಸೂರು ವೆಸ್ಟ್ ಲಯನ್ಸ್ ಸೇವಾನಿಕೇತನ ಶಾಲೆ ಹಾಗೂ ಮೈಸೂರು ನಗರ ದೈಹಿಕ ಶಿಕ್ಷಣ ಶಿಕ್ಷಕರ ಕ್ರೀಡಾ ಕ್ಲಬ್ ವತಿಯಿಂದ ಗೋಕುಲಂನ ಲಯನ್ಸ್ ಶಾಲೆಯ ಮೈದಾನದಲ್ಲಿ ಆಯೋಜಿಸಿದ್ದ ವಾಲಿಬಾಲ್ ಪಂದ್ಯಾವಳಿಯಲ್ಲಿ ಇದೇ ತಂಡದ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದು, ಪ್ರಶಸ್ತಿ ಗಿಟ್ಟಿಸಿಕೊಂಡಿದ್ದಾರೆ.

ಪ್ರಶಸ್ತಿ ಪಡೆದ ವಿದ್ಯಾರ್ಥಿಗಳಾದ ಚಂದು, ಎಚ್. ಚೆಲುವರಾಜು, ಪ್ರತಾಪ್, ಆರ್. ಹೇಮಂತ್, ಎನ್. ಹೇಮಂತ್ ಕುಮಾರ್, ರಾಕೇಶ್, ಪುನೀತ್, ದರ್ಶನ್, ಎಚ್. ಅಭಿಲಾಶ್, ಬಿ. ಜೀವನ್, ಬಸವಶೆಟ್ಟಿ, ಎಚ್.ಆದರ್ಶ್ ಅವರನ್ನು ಶಾಲೆ ವತಿಯಿಂದ ಅಭಿನಂದಿಸಲಾಯಿತು.

ಬಸವ ಮಾರ್ಗ ಸಂಸ್ಥೆಯ ಸಂಸ್ಥಾಪಕ ಬಸವಣ್ಣ ಮಾತನಾಡಿ, ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಎಂದರೆ ಅವರಿಗೆ ಏನು ಗೊತ್ತಿಲ್ಲ, ಕಲಿಕೆಯಲ್ಲಿ ಹಿಂದು ಉಳಿದಿರುತ್ತಾರೆ ಎನ್ನುವರೆ ಹೆಚ್ಚು. ಆದರೆ ಸರ್ಕಾರಿ ಶಾಲೆಯ ಮಕ್ಕಳು ಅವಕಾಶದಿಂದ ವಂಚಿತರಾಗಿರುತ್ತಾರೆ. ಅವರಿಗೆ ಸರಿಯಾದ ಮಾರ್ಗದರ್ಶನ ಹಾಗೂ ಅವಕಾಶ ನೀಡಿದರೆ ಎಲ್ಲರಂತೆ ಸಾಧನೆ ಮಾಡುತ್ತಾರೆ. ಕುಕ್ಕರಹಳ್ಳಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಯಲ್ಲೂ ಮುಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕುಕ್ಕರಹಳ್ಳಿ ಸರ್ಕಾರಿ ಪ್ರೌಢಶಾಲೆಯನ್ನು ಬಸವ ಮಾರ್ಗ ಸಂಸ್ಥೆ ದತ್ತು ಪಡೆದಿದ್ದು, ಶಾಲೆಯ ಮಕ್ಕಳಿಗೆ ಸರ್ವತೋಮುಖ ವಿಕಸಕ್ಕೆ ಹಲವಾರು ಕೆಲಸಗಳನ್ನು ಮಾಡಲಾಗುತ್ತಿದೆ. ಶಾಲೆಗೆ ಬೇಕಾದ ಅಗತ್ಯ ಮೂಲಸೌಕರ್ಯ ಕಲ್ಪಿಸುತ್ತಿದೆ. ಒಬ್ಬೊಬ್ಬ ವಿದ್ಯಾರ್ಥಿಗಳನ್ನೂ ಪ್ರತ್ಯೇಕವಾಗಿ ಗುರುತಿಸಿ, ಆ ವಿದ್ಯಾರ್ಥಿ ಯಾವ ಕ್ಷೇತ್ರದಲ್ಲಿ ಆಸಕ್ತಿವೊಂದಿರುತ್ತಾನೋ ಆ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ. ಅದಕ್ಕೆ ಬೇಕಾದ ತರಬೇತಿಯನ್ನು ವಿಷಯ ತಜ್ಞರಿಂದಲೇ ಕೊಡಿಸಲಾಗುತ್ತಿದೆ. ಆ ಮೂಲಕ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಸರ್ವತೋಮು ಬೆಳವಣಿಗೆಗೆ ಬಸವ ಮಾರ್ಗ ಸಂಸ್ಥೆ ಕೆಲಸ ಮಾಡುತ್ತಿದೆ ಎಂದರು.

ಶಾಲೆಯ ಮುಖ್ಯ ಶಿಕ್ಷಕ ಚಂದ್ರು, ದೈಹಿಕ ಶಿಕ್ಷಣ ಶಿಕ್ಷಿಕಿ ಜಿ.ಸಾವಿತ್ರಿ, ಶಿಕ್ಷಕ ಜಿ. ಮಹೇಶ್, ತರಬೇತುದಾರ ಅನಿಲ್ ಇದ್ದರು.