ಸಂಸ್ಕೃತ-ಸಂಗೀತ ಸತ್ಯನಾರಾಯಣಂ ಪುಸ್ತಕ ಬಿಡುಗಡೆ
ಉತ್ತಮ ಪುಸ್ತಕಗಳಿಂದ ವ್ಯಕ್ತಿ ಮತ್ತು ಸಮಾಜದ ಸಾಂಸ್ಕೃತಿಕ ಸಮೃದ್ಧತೆ ಸಾಧ್ಯ ಎಂದು ಶಿಕ್ಷಣ ಪ್ರೇಮಿ ಸಿದ್ದಾಪುರದ ದಿನೇಶ ಪಟೇಲ ಹೇಳಿದರು.
ಇತ್ತೀಚೆಗೆ ಕತಗಾಲದ ಕಲಾಶ್ರೀ ಸಾಂಸ್ಕೃತಿಕ ವೇದಿಕೆ ಪ್ರಕಟಿಸಿದ ಸಂಸ್ಕೃತ-ಸಂಗೀತ ಸತ್ಯನಾರಾಯಣಂ ಎಂಬ ಪುಸ್ತಕವನ್ನು ನಾದಮಯ ಸಂಸ್ಕಾರ ಶಿಬಿರದ ಸಮಾರೋಪದಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು.ಕಲಾಶ್ರೀ ಸಂಸ್ಥೆ ಪ್ರಕಟಿಸಿದ ಪುಸ್ತಕದ ಹಿನ್ನೆಲೆಯಲ್ಲಿ ಡಾ. ಗಣಪತಿ ಭಟ್ಟ ಅವರ ಪರಿಶ್ರಮವಿದೆ. ಸಂಸ್ಕಾರ ಶಿಬಿರ, ಪುಸ್ತಕ ಪ್ರಕಟಣೆ, ಆಧ್ಯಾತ್ಮಿಕ ಪ್ರವಾಸ, ಸಂಗೀತ ಪರೀಕ್ಷಾ ಕೇಂದ್ರದ ಮೂಲಕ ಸಾತ್ವಿಕ ಸಮಾಜ ಕಟ್ಟುತ್ತಿದ್ದಾರೆ. ಪದಚ್ಛೇದ, ಅನ್ವಯಾರ್ಥ, ಆರತಿಪದ್ಯ ಸಹಿತ ಈ ಸತ್ಯವ್ರತಪೂಜೆಯ ಪುಸ್ತಕ ಹೊಸ ಸ್ವರೂಪದ್ದಾಗಿದೆ ಎಂದು ಹೇಳಿದರು.
ಶಿಬಿರ ಶಿಕ್ಷಕಿ, ವಿದುಷಿ ರೋಹಿಣಿ ಭಟ್ಟ ಮಾತನಾಡಿ, ಈ ಸಂಸ್ಕಾರ ಶಿಬಿರದ ಪಠ್ಯವಸ್ತುವಿನಲ್ಲಿ ಸಂಸ್ಕೃತ-ಸಂಗೀತಗಳ ಸಮನ್ವಯತೆ ಇದೆ. ಮುಂದಿನ ದಿನಗಳಲ್ಲಿ ಅನುಸರಿಸಲು ಅನುಕೂಲವಾಗುವಂತೆ ರಾಗ ಸಂಯೋಜನೆ ಮಾಡಿದ್ದಲ್ಲದೇ ಅದರ ಧ್ವನಿಮುದ್ರಿಕೆಯನ್ನೂ ಸಿದ್ಧಪಡಿಸಲಾಗಿದೆ ಎಂದರು.
ಶಿಬಿರಾರ್ಥಿಗಳು ತಮಗೆ ಹೇಳಿಕೊಟ್ಟ ೪೫ಕ್ಕೂ ಹೆಚ್ಚು ವಿಷಯಗಳನ್ನು ಗಾನ ಮಾಡಿದರು. ಶಿಕ್ಷಕಿ ಸ್ಫೂರ್ತಿ ಚಪ್ಪ್ರದಹಳ್ಳಿಮಠ ಸ್ವಾಗತಿಸಿದರು. ಅಧ್ಯಕ್ಷ ಎಚ್.ಎನ್. ಅಂಬಿಗ ವಂದಿಸಿದರು. ರತ್ನಾ ರಾಣಿಬೆನ್ನೂರು ಕಾರ್ಯಕ್ರಮ ನಿರೂಪಿಸಿದರು. ಗಿರೀಶ ಬೋಂಗ್ರೆ, ಬಸವರಾಜ, ಪೂರ್ಣಿಮಾ ಹಂಸಭಾವಿ, ಸುಮಂಗಲಾ ಭಟ್ಟ, ಜ್ಯೋತಿ ಗೌಡ, ವೆಂಕಟರಮಣ ಹೆಗಡೆ, ಶಿವಿ ಗೌಡ, ಅಕ್ಷತಾ ನಾಯಕ, ಅದಿತಿ ವೆರ್ಣೇಕರ, ವಿಶಿಷ್ಟಾ ಅಂಬಿಗ ಮುಂತಾದವರಿದ್ದರು.