ಸಂಸ್ಕೃತಿ-ಸಂಸ್ಕಾರ ಕಾರ್ಯಕ್ರಮ ಸದುಪಯೋಗಕ್ಕೆ ಮುಂದಾಗಿ

KannadaprabhaNewsNetwork | Published : Mar 3, 2025 1:48 AM

ಮಕ್ಕಳಲ್ಲಿರುವ ಅಡಗಿರುವ ಪ್ರತಿಭೆಗಳನ್ನು ಅನಾವರಣಗೊಳಿಸಲು ಹಿರೇಕಲ್ಮಠ ವತಿಯಿಂದ ಸಂಸ್ಕೃತಿ-ಸಂಸ್ಕಾರ ಹೆಸರಿನಲ್ಲಿ ಪ್ರತಿ ಅಮಾವಾಸ್ಯೆಯಂದು ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಪೋಷಕರು ಈ ವೇದಿಕೆ ಅವಕಾಶ ಸದುಪಯೋಗಕ್ಕೆ ಮಕ್ಕಳನ್ನು ಪೂರಕವಾಗಿ ಬೆಳೆಸಬೇಕು ಎಂದು ಒಡೆಯರ್ ಡಾ.ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ನುಡಿದಿದ್ದಾರೆ.

- ಶಿವರಾತ್ರಿ ಅಮಾವಾಸ್ಯೆ- ಶ್ರೀ ಚನ್ನಪ್ಪಸ್ವಾಮಿ ಬೆಳ್ಳಿ ರಥೋತ್ಸವ ಧರ್ಮಸಭೆಯಲ್ಲಿ ಸ್ವಾಮೀಜಿ ಸಲಹೆ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ

ಮಕ್ಕಳಲ್ಲಿರುವ ಅಡಗಿರುವ ಪ್ರತಿಭೆಗಳನ್ನು ಅನಾವರಣಗೊಳಿಸಲು ಹಿರೇಕಲ್ಮಠ ವತಿಯಿಂದ ಸಂಸ್ಕೃತಿ-ಸಂಸ್ಕಾರ ಹೆಸರಿನಲ್ಲಿ ಪ್ರತಿ ಅಮಾವಾಸ್ಯೆಯಂದು ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಪೋಷಕರು ಈ ವೇದಿಕೆ ಅವಕಾಶ ಸದುಪಯೋಗಕ್ಕೆ ಮಕ್ಕಳನ್ನು ಪೂರಕವಾಗಿ ಬೆಳೆಸಬೇಕು ಎಂದು ಒಡೆಯರ್ ಡಾ.ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ನುಡಿದರು.

ಪಟ್ಟಣದ ಹಿರೇಕಲ್ಮಠದಲ್ಲಿ ಶಿವರಾತ್ರಿ ಅಮಾವಾಸ್ಯೆ ಮತ್ತು ಶ್ರೀ ಚನ್ನಪ್ಪಸ್ವಾಮಿ ಬೆಳ್ಳಿ ರಥೋತ್ಸವದ ಧರ್ಮಸಭೆ ಉದ್ದೇಶಿಸಿ ಅವರು ಆರ್ಶೀವಚನ ನೀಡಿದರು. ಮಕ್ಕಳ ಹುಟ್ಟುಹಬ್ಬವನ್ನು ದೀಪ ಬೆಳಗಿಸುವುದರ ಮೂಲಕ ಆಚರಿಸಿ, ಸಿಹಿ ಹಂಚಿ ಸಂಭ್ರಮಿಸಿಕೊಳ್ಳಲು ಮುಕ್ತ ಅವಕಾಶ ಕಲ್ಪಿಸಿದ್ದು ಮಕ್ಕಳ ಪೋಷಕರ ಪಾಲ್ಗೊಳ್ಳುವಿಕೆ ಅಗತ್ಯವೆಂದರು.

ಪ್ರತಿಯೊಬ್ಬರ ಬದುಕು ಹಸನಾಗಿಸಲು ಶ್ರೀಮಠದ ವತಿಯಿಂದ ನಿರಂತರ ಧರ್ಮಸಭೆಗಳು, ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ಮಾಲಿಕೆಗಳು, ಸಂಗೀತ ಗೋಷ್ಠಿ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಭಕ್ತರು ಸಕ್ರಿಯವಾಗಿ ತೊಡಗಿಕೊಳ್ಳಬೇಕು. ಅಲ್ಲದೇ, ಮಾರ್ಚ್ 13ರಂದು ಹಿರೇಕಲ್ಮಠದಿಂದ ಶ್ರೀ ಶೈಲಕ್ಕೆ ಪಾದಯಾತ್ರೆ ಹೊರಟಿದ್ದು, ಆಸಕ್ತ ಭಕ್ತಸಮೂಹ ಆಗಮಿಸಬಹುದು ಎಂದು ತಿಳಿಸಿದರು.

ಪಾದಯಾತ್ರೆ ಮುಖೇನ ದೇವರಿಗಾಗಿ ದೇಹ ದಂಡಿಸುವುದರಿಂದ ಗುರು ದರ್ಶನ ಜೊತೆಗೆ ಆರೋಗ್ಯ ಸಂವರ್ಧನೆಯಾಗಲಿದೆ. ಪರಿಸರ ಸಂರಕ್ಷಣೆ ಸದುದ್ದೇಶದಿಂದ ಈ ಬಾರಿ ಪಾದಯಾತ್ರೆ ಹೋಗುವ ಮಾರ್ಗದಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ರಮ ವ್ಯವಸ್ಥೆ ಮಾಡಲಾಗಿದೆ. ಈ ಪುಣ್ಯದ ಕಾರ್ಯದಲ್ಲೂ ಸದ್ಭಕ್ತರು ಭಾಗಿಯಾಗಬೇಕಾಗಿದೆ ಎಂದು ಸಲಹೆ ನೀಡಿದರು.

ಹಿರೇಕಲ್ಮಠದ ವ್ಯವಸ್ಥಾಪಕ ಚನ್ನಬಸಯ್ಯ ಮಾತನಾಡಿ, ಶ್ರೀ ಚನ್ನಪ್ಪಸ್ವಾಮಿ ಜನಕಲ್ಯಾಣ ಸೇವಾ ಟ್ರಸ್ಟ್ ಸಹಯೋಗದೊಂದಿಗೆ ಮಾ.10ರಂದು ಲಿಂ.ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ 55ನೇ ವರ್ಷದ ವಾರ್ಷಿಕ ಪುಣ್ಯಾರಾಧನೆ ಮತ್ತು ಮಾ.11ರಂದು ಲಿಂ.ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯವರ 10ನೇ ವಾರ್ಷಿಕ ಸಂಸ್ಮರಣೆ ನಿಮಿತ್ತ ಧರ್ಮಸಭೆ ಹಮ್ಮಿಕೊಳ್ಳಲಾಗಿದೆ ಎಂದರು.

ಲಿಂ. ಡಾ. ಎಚ್.ತಿಪ್ಪೇರುದ್ರ ಸ್ವಾಮಿ ಮತ್ತು ಲಿಂ. ಎಚ್.ಎನ್. ಷಡಾಕ್ಷರಿ ಶಾಸ್ತ್ರಿ ಭಾವಿಕೆರೆ ದತ್ತಿ ಉಪನ್ಯಾಸ ಕಾರ್ಯಕ್ರಮ ಹಾಗೂ ಚಂದ್ರಶೇಖರ ಶಿವಾಚಾರ್ಯ ಶ್ರೀ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ವಿಶೇಷ ಪೂಜಾ ಕೈಂಕರ್ಯಗಳು ಕೂಡ ನೆರವೇರಲಿವೆ. ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಿದ್ದು, ಪೋಷಕರು ಮಠದ ಕಚೇರಿಯಲ್ಲಿ ಮುಂಚಿತವಾಗಿ ವಧು-ವರರ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಮಾಹಿತಿ ನೀಡಿದರು.

ಧರ್ಮಸಭೆಯಲ್ಲಿ ರಾಜು-ಆಶಾ ದಂಪತಿ ಪುತ್ರಿ ಇಂಚರ ಹುಟ್ಟುಹಬ್ಬ ಆಚರಣೆ ನಡೆಯಿತು. ಶ್ರೀ ಚನ್ನೇಶ್ವರ ಗಾನ ಕಲಾ ಬಳಗ ಮತ್ತು ಸಂಸ್ಕೃತಿ-ಸಂಸ್ಕಾರ ತಂಡದಿಂದ ನೆಡಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ಸೂರೆಗೊಂಡವು.

ಶ್ರೀಮಠದ ಪ್ರಧಾನ ಅರ್ಚಕ ಅನ್ನದಾನಯ್ಯ ಶಾಸ್ತ್ರಿ, ನಿಜಗುಣ ಶಾಸ್ತ್ರಿ, ದಾನಪ್ಪ, ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.

- - - -1ಎಚ್.ಎಲ್.ಐ2.ಜೆಪಿಜಿ:

ಹೊನ್ನಾಳಿ ಪಟ್ಟಣದ ಹಿರೇಕಲ್ಮಠದಲ್ಲಿ ಶಿವರಾತ್ರಿ ಅಮಾವಾಸ್ಯೆ ಮತ್ತು ಶ್ರೀ ಚನ್ನಪ್ಪಸ್ವಾಮಿ ಬೆಳ್ಳಿ ರಥೋತ್ಸವದ ಧರ್ಮಸಭೆಯಲ್ಲಿ ಒಡೆಯರ್ ಡಾ.ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀ ಮಾತನಾಡಿದರು.