ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಪರಿಸರವನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಕರ್ತವ್ಯವಾಗಬೇಕು. ಪರಿಸರವಿಲ್ಲದಿದ್ದರೆ ಒಂದು ಕ್ಷಣವೂ ಜನರು ಜೀವಿಸಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯೂ ಪರಿಸರ ಸಂರಕ್ಷಿಸುವ ಮೂಲಕ ತಮ್ಮ ಜವಾಬ್ದಾರಿಯನ್ನು ಮೆರೆಯಬೇಕೆಂದು ಚಿಕ್ಕಬಳ್ಳಾಪುರ ಅರಣ್ಯಾಧಿಕಾರಿ ಮಂಜುನಾಥ್ ತಿಳಿಸಿದರುನಗರದ ಹೊರವಲಯದ ಅಗಲಗುರ್ಕಿಯ ಬಿಜಿಎಸ್ ಇಂಗ್ಲೀಷ್ ಶಾಲೆಯಲ್ಲಿ ಬುಧವಾರದಂದು ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ವೃಕ್ಷವಂದನೆಯನ್ನು ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಈ ವರ್ಷ ವಿಶ್ವ ಪರಿಸರ ದಿನವನ್ನು ಭೂಮಿ ಪುನಃಸ್ಥಾಪನೆ, ಮರುಭೂಮೀಕರಣ ಮತ್ತು ಬರ ಸ್ಥಿತಿ ಸ್ಥಾಪಕತ್ವ ಎಂಬ ವಿಷಯದೊಂದಿಗೆ ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಪ್ರಕೃತಿ ನಾಶಕ್ಕೆ ಕಡಿವಾಣ ಹಾಕಿ ಹೆಚ್ಚು ಹೆಚ್ಚು ಗಿಡಗಳನ್ನು ಬೆಳೆಸಿ, ಮರಗಳನ್ನು ಉಳಿಸಿ ಪ್ರಕೃತಿ ಮಾತೆಯ ಒಡಲು ಹಸಿರಾಗಿರುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.
ಪರಿಸರ ಪ್ರೇಮಿ ಗುಂಪುಮರದ ಆನಂದ್ ಮಾತನಾಡಿ, ಮನುಷ್ಯ ಬದುಕಿದ್ದಾಗ ಬೆಲೆ ಇರುತ್ತದೆ. ಸತ್ತ ನಂತರ ಯಾವುದೇ ಉಪಯೋಗವಿರುವುದಿಲ್ಲ. ಆದರೆ ಮರ ಬದುಕಿದ್ದಾಗಲು ಮತ್ತು ಕಡಿದನಂತರವೂ ಅದಕ್ಕೆ ತನ್ನದೇ ಆದಂತಹ ಬೆಲೆ ಇರುತ್ತದೆ. ಪ್ರತಿಯೊಂದು ಮರದಿಂದ ಆಗುವ ಪ್ರಯೋಜನೆಗಳನ್ನು ತಿಳಿಸಿದರು.ಪ್ರತಿಯೊಂದು ಮಗು ತಾನು ತಿಂದ ಹಣ್ಣುಗಳ ಬೀಜಗಳನ್ನು ಮಣ್ಣಿನಲ್ಲಿ ಹಾಕಿದರೆ ಅದು ಸಸಿಯಾಗಿ ಬೆಳೆದು ದೊಡ್ಡಮರವಾಗುತ್ತದೆ. ಪರಿಸರ ಪ್ರೇಮಿಗಳಾದ ಆ. ನ. ಯಲ್ಲಪ್ಪರೆಡ್ದಿ ಹಾಗೂ ಸಾಲುಮರದ ತಿಮ್ಮಕ್ಕ ರವರ ಸಾಧನೆಗಳನ್ನು ತಿಳಿಸಿದರು.
ಬಿಜಿಎಸ್ ಶಾಲೆಯ ಪ್ರಾಂಶುಪಾಲ ಡಿ.ಸಿ.ಮೋಹನ್ ಕುಮಾರ್ ಮಾತನಾಡಿ, ಪರಿಸರವನ್ನು ಉಳಿಸಿ ಬೆಳಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದ್ದು, ನಮಗೆ ಎಲ್ಲವನ್ನೂ ನೀಡಿರುವ ಗಿಡ, ಮರಗಳನ್ನು ನಮ್ಮ ಸಂಪ್ರದಾಯದಲ್ಲಿ ದೇವರೆಂದು ತಿಳಿದು, ಸನಾತನ ಕಾಲದಿಂದ ಪೂಜಿಸಿ ಆರಾಧಿಸುತ್ತಾ ಬರುತ್ತಿದ್ದಾರೆ, ಇದು ಅರ್ಥಪೂರ್ಣವಾದ ಆಚರಣೆಯಾಗಿದ್ದು, ನಮ್ಮ ಯುವಪೀಳಿಗೆಗೆ ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ಸಹಕಾರಿಯಾಗಿದೆ. ಪ್ರತಿಯೊಬ್ಬರೂ ತಮಗೆ ಬೇಕಾದ ಆಮ್ಲಜನಕವನ್ನು ಪಡೆದುಕೊಳ್ಳುವಷ್ಟು ಗಿಡ ಮರಗಳನ್ನು ತಮ್ಮ ಸುತ್ತಮುತ್ತಲು ತಾವೇ ಬೆಳಸಿಕೊಳ್ಳಬೇಕೆಂದರು. ಪ್ರತಿ ಮಗುವೂ ಪರಿಸರದ ಪ್ರೇಮಿಯಾಗಿ, ಸಮಾಜದ ಇತರರಿಗೆ ಮಾದರಿಯಾಗಿ, ಪರಿಸರವನ್ನು ಸಂರಕ್ಷಿಸಿ ಭವಿಷ್ಯದಲ್ಲಿ ಎದುರಾಗಬಹುದಾದ ಅನೇಕ ಸಮಸ್ಯೆಗಳಿಂದ ಮನುಕುಲವನ್ನು ಕಾಪಾಡಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ತಮ್ಮ ಪ್ರತಿ ವರ್ಷದ ಹುಟ್ಟುಹಬ್ಬವನ್ನು ಒಂದೊಂದು ಗಿಡನೆಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿಕೊಳ್ಳಬೇಕೆಂದರು.ಶಾಲೆಯ ಆವರಣದಲ್ಲಿ ವೃಕ್ಷವಂದನೆಯನ್ನು ಮಾಡುವ ಮೂಲಕ ಅರ್ಥಪೂರ್ಣವಾಗಿ ಪರಿಸರ ದಿನ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮ್ಮ ಮನೆಗಳಿಂದ ನೂರಾರು ಗಿಡಗಳನ್ನು ತಂದು ಪರಸ್ಪರ ವಿನಿಮಯಮಾಡಿಕೊಂಡು ಸಂಭ್ರಮಿಸಿದರು. ಪರಿಸರದ ಮಹತ್ವವನ್ನು ಸೂಚಿಸುವ ನೂರಾರು ಉಕ್ತಿಗಳನ್ನು ಫಲಕಗಳಲ್ಲಿ ಪ್ರದರ್ಶಿಸುತ್ತಾ, ಮೆರವಣಿಗೆ ಮೂಲಕ ಗಿಡಗಳನ್ನು ಕೊಂಡೊಯ್ದು ಶಾಲಾವರಣದಲ್ಲಿ ನೆಟ್ಟಿದರು. ನರ್ಸರಿಯಿಂದ 10ನೇ ತರಗತಿ ವರೆಗಿನ ವಿದ್ಯಾರ್ಥಿಗಳು ಶಾಲಾವರಣದಲ್ಲಿರುವ ಬೇವಿನಮರ, ಹಲಸಿನಮರ ಮತ್ತು ಮಾವಿನ ಮರಗಳನ್ನು ಶ್ರದ್ಧಾ- ಭಕ್ತಿಯಿಂದ ಪೂಜಿಸಿ ವಂದಿಸಿದರು.
ಕಾರ್ಯಕ್ರಮದಲ್ಲಿ ಬಿಜಿಎಸ್ ಶಿಕ್ಷಣ ಸಲಹೆಗಾರರಾದ ಮಂಜುನಾಥ್, ಶಾಲೆಯ ಶಿಕ್ಷಕರು, ಭೋದಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.