ಪ್ರಸ್ತುತ ಕಂಪನಿಗಳಿಗೇ ದುಡಿಯುವ ಪರಿಸ್ಥಿತಿ

KannadaprabhaNewsNetwork |  
Published : Nov 16, 2025, 01:45 AM IST
ಚಿತ್ರ 2 | Kannada Prabha

ಸಾರಾಂಶ

ಹಿಂದಿನ ಕಾಲದಲ್ಲಿ ಕೃಷಿಗೆ ಅಗತ್ಯವಾಗಿ ಬೇಕಾದ ಸಾಮಾನುಗಳನ್ನು ತಾವೇ ತಯಾರು ಮಾಡಿಕೊಳ್ಳುತ್ತಿದ್ದರು. ಆದರೆ ಇಂದಿನ ದಿನದಲ್ಲಿ ಎಲ್ಲದಕ್ಕೂ ಬೇರೆಯವರನ್ನು ಅವಲಂಬಿಸುವಂತಾಗಿದೆ. ನಾವುಗಳು ನಮಗೆ ದುಡಿಯದೇ ಕಂಪನಿಗಳಿಗೆ ದುಡಿಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಉತ್ತರ ಪ್ರಾಂತ್ಯದ ಕಿಸಾನ್ ಸಂಘದ ಪ್ರಚಾರಕ ಪುಟ್ಟಸ್ವಾಮಿ ವಿಷಾದಿಸಿದರು.

ಚಿತ್ರದುರ್ಗ: ಹಿಂದಿನ ಕಾಲದಲ್ಲಿ ಕೃಷಿಗೆ ಅಗತ್ಯವಾಗಿ ಬೇಕಾದ ಸಾಮಾನುಗಳನ್ನು ತಾವೇ ತಯಾರು ಮಾಡಿಕೊಳ್ಳುತ್ತಿದ್ದರು. ಆದರೆ ಇಂದಿನ ದಿನದಲ್ಲಿ ಎಲ್ಲದಕ್ಕೂ ಬೇರೆಯವರನ್ನು ಅವಲಂಬಿಸುವಂತಾಗಿದೆ. ನಾವುಗಳು ನಮಗೆ ದುಡಿಯದೇ ಕಂಪನಿಗಳಿಗೆ ದುಡಿಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಉತ್ತರ ಪ್ರಾಂತ್ಯದ ಕಿಸಾನ್ ಸಂಘದ ಪ್ರಚಾರಕ ಪುಟ್ಟಸ್ವಾಮಿ ವಿಷಾದಿಸಿದರು.

ಚಿತ್ರದುರ್ಗ ನಗರದಲ್ಲಿ ನಡೆಯುತ್ತಿರುವ ಸ್ವದೇಶಿ ಜಾಗರಣ ಮಂಚ್ ಅಡಿಯಲ್ಲಿನ ಸ್ವದೇಶಿ ಮೇಳದ ನಾಲ್ಕನೇ ದಿನವಾದ ಶನಿವಾರ ಹಮ್ಮಿಕೊಂಡಿದ್ದ ರೈತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಸಾವಯವ ಕೃಷಿ ಬಹು ಬೆಳೆ ಪದ್ಧತಿ ಮೌಲ್ಯ ವರ್ಧನೆ, ಮಾರುಕಟ್ಟೆ ವ್ಯವಸ್ಥೆ, ಸಹಕಾರಿ ವ್ಯವಸ್ಥೆ ಮತ್ತು ಸರ್ಕಾರದ ಯೋಜನೆಗಳ ಬಗ್ಗೆ ಅವರು ಮಾತನಾಡಿದರು.

ಒಂದು ಕಾಲದಲ್ಲಿ ಕಬ್ಬಿನಿಂದ ಬೆಲ್ಲವನ್ನು ತಯಾರು ಮಾಡಲಾಗುತ್ತಿತ್ತು. ಇಂದಿನಂತೆ ಸಕ್ಕರೆಯನ್ನು ತಯಾರು ಮಾಡುತ್ತಿರಲಿಲ್ಲ. ಆಗ ಬೆಲ್ಲದ ತಯಾರಿಕಾ ಕೇಂದ್ರಗಳು ಹೆಚ್ಚಾಗಿದ್ದವು. ಆದರೆ ಇಂದು ಬೆಲ್ಲವನ್ನು ತಯಾರಿಸುವ ಕೇಂದ್ರಗಳು ಕಡಿಮೆಯಾಗಿ ಸಕ್ಕರೆಯನ್ನು ಉತ್ಪಾದನೆ ಮಾಡುವ ಕಾರ್ಖಾನೆಗಳ ಸಂಖ್ಯೆ ಹೆಚ್ಚಾಗಿವೆ. ಹಿಂದೆ ಕೃಷಿಯನ್ನು ಉಳಿಸಿಕೊಳ್ಳಲಾಗುತ್ತಿತ್ತು ಆದರೆ ಈಗ ಕೃಷಿಯನ್ನು ಕಳೆದುಕೊಳ್ಳಲಾಗುತ್ತಿದೆ ಎಂದರು.

ನಮ್ಮ ತಾತ ಮುತ್ತಾತಂದಿರು ಕೃಷಿಯನ್ನು ಮಾಡುವಾಗ ಅದಕ್ಕೆ ಬೇಕಾದ ಎಲ್ಲಾ ರೀತಿಯ ಸೌಕರ್ಯಗಳನ್ನು ಅವರೇ ಸ್ವಂತಃ ಮಾಡಿಕೊಳ್ಳುತ್ತಿದ್ದರು. ಬೀಜ, ಗೊಬ್ಬರ, ಕ್ರೀಮಿ ನಾಶಕ ಸೇರಿದಂತೆ ಇತರೆ ವಸ್ತುಗಳನ್ನು ಹೊರಗಿನಿಂದ ತರದೇ ತಾವೇ ತಯಾರು ಮಾಡುವುದರ ಮೂಲಕ ಕೃಷಿಯನ್ನು ಮಾಡುತ್ತಿದ್ದರು. ಆದರೆ ಈಗ ಎಲ್ಲದಕ್ಕೂ ನಾವುಗಳು ಕಂಪನಿಗಳನ್ನು ಆಶ್ರಯಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಯಾವುದಾದರೂ ಒಂದು ವಸ್ತು ಸಿಗದಿದ್ದರೆ ಕೃಷಿಯನ್ನು ಮಾಡುವುದೇ ನಿಲ್ಲಿಸಬೇಕಾದ ವಾತಾವರಣ ನಿರ್ಮಾಣವಾಗಿದೆ. ಭೂಮಿಗೆ ಸಾವಯವ ಗೊಬ್ಬರವನ್ನು ಹಾಕುವುದರ ಮೂಲಕ ಭೂಮಿಯನ್ನು ಫಲವತ್ತಾಗಿ ಇಟ್ಟುಕೊಳ್ಳುತ್ತಿದ್ದರು. ಆದರೆ ನಾವುಗಳು ರಾಸಾಯಿನಿಕ ಗೊಬ್ಬರವನ್ನು ಹಾಕಿ ಭೂಮಿಯನ್ನು ಹಾಳು ಮಾಡಿದ್ದೇವೆ ಎಂದರು.

ಕೃಷಿಯ ಎಂದರೆ ಮೂಲ ಜಾನುವಾರುಗಳು. ಜಾನುವಾರುಗಳು ಇಲ್ಲದಿದ್ದರೆ ಕೃಷಿ ಇಲ್ಲವಾಗುತ್ತದೆ. ಆಕಳು ವೈದ್ಯರಿದ್ದ ಹಾಗೆ. ಅದರ ಹಾಲು ಅಮೃತಕ್ಕೆ ಸಮಾನ. ಅದನ್ನು ಸೇವಿಸಿದರೆ ವಿವಿಧ ರೀತಿಯ ಪೋಷಕಾಂಶಗಳು ನಮಗೆ ಲಭ್ಯವಾಗುತ್ತವೆ. ಕೃಷಿಯು 10 ಸಾವಿರ ವರ್ಷದಿಂದ ಇದೆ. ಇಂದು ಕೃಷಿ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಯುವಜನತೆ ಕೃಷಿಯನ್ನು ಬಿಟ್ಟು ಉದ್ಯೋಗಕ್ಕಾಗಿ ನಗರದ ಕಡೆಗೆ ಮುಖ ಮಾಡುತ್ತಿದ್ದಾರೆ. ಇದರ ಬಗ್ಗೆ ಎಲ್ಲರೂ ಚಿಂತನೆ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಯುವ ಜನತೆ ಗ್ರಾಮದ ಕಡೆಗೆ ಬಂದು ಕೃಷಿಯಲ್ಲಿ ತೊಡಗಬೇಕಿದೆ ಎಂದರು.

ಸಾವಯವ ಕೃಷಿಕ ರಘು ಅರಸಿಕೆರೆ ಮಾತನಾಡಿ, ನಾವು ಬೆಳೆದ ಬೆಳೆಗಳನ್ನು ಹಾಗೆಯೇ ಮಾರಾಟ ಮಾಡಿದರೆ ನಮಗೆ ಆದಾಯ ಕಡಿಮೆ ಬರುತ್ತದೆ. ಇದರ ಬದಲು ಅದೇ ಬೆಳೆಯನ್ನು ಮೌಲ್ಯವರ್ಧನೆ ಮಾಡುವುದರ ಮೂಲಕ ಮಾರಾಟ ಮಾಡಿದರೆ ನಮಗೂ ಲಾಭ ಬರುತ್ತದೆ. ಇದರ ಬಗ್ಗೆ ನಮ್ಮ ರೈತರು ಆಲೋಚನೆ ಮಾಡಬೇಕಿದೆ. ನಾವೇ ಮಾರುಕಟ್ಟೆಯನ್ನು ನಿರ್ಮಾಣ ಮಾಡಿಕೊಳ್ಳಬೇಕಿದೆ. ರೈತರು ತಮ್ಮಲ್ಲಿನ ಭೂಮಿಯಲ್ಲಿ ಒಂದೇ ಬೆಳೆಯನ್ನು ಹಾಕುವ ಬದಲು ವಿವಿಧ ರೀತಿಯ ಬೆಳೆಯನ್ನು ಹಾಕುವುದರ ಮೂಲಕ ಸದಾ ಹಣವನ್ನು ನೋಡಬಹುದಾಗಿದೆ. ನನ್ನ 11 ಎಕರೆಯಲ್ಲಿ ಬಹು ಬೆಳೆಗಳನ್ನು ಹಾಕಿದ್ದೇನೆ. ಒಂದು ಬೆಳೆ ಬಂದ ಮೇಲೆ ಮತ್ತೊಂದು ಬೆಳೆ ಬರುವಂತೆ ಮಾಡಿದ್ದೇನೆ. ಇದರಿಂದ ನನಗೆ ಮಾರುಕಟ್ಟೆ ಹೊರೆಯಾಗದೇ ಹಣ ನೋಡಲು ಸಿಗುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸ್ವದೇಶಿ ಮೇಳದ ಸಂಘಟಕರಾದ ಜಗದೀಶ್, ರೈತರಾದ ಹುಲಿಕರೆ, ವಿಶ್ವೇಶ್ವರಯ್ಯ, ಸಿದ್ದವ್ವನಹಳ್ಳಿ ಜ್ಞಾನೇಶ್, ಸಹಾಯಕ ಕೃಷಿ ನಿರ್ದೇಶಕ ಮಿಥುನ್, ಪ್ರಕಾಶ್, ಕೆ.ಟಿ.ಕುಮಾರಸ್ವಾಮಿ, ಬಿಜೆಪಿ ರೈತ ಮೋರ್ಚಾದ ಜಿಲ್ಲಾಧ್ಯಕ್ಷ ವೆಂಕಟೇಶ್ ಯಾದವ್, ರೇಖಾ ಇತರರಿದ್ದರು.

PREV

Recommended Stories

ಡಾ. ವಿ.ಎಸ್.ವಿ. ಪ್ರಸಾದರ ಸಮಾಜ ಸೇವೆ ಅವಿಸ್ಮರಣೀಯ
ಮಕ್ಕಳು ದೇಶದ ಆಸ್ತಿ: ಆಹಾರ ಸಚಿವ ಮುನಿಯಪ್ಪ