ಹಾನಗಲ್ಲ: ಅವಕಾಶ ವಂಚಿತ ಸಮುದಾಯಗಳ ಹಿತಕ್ಕೆ ಪಾಲು ಕೊಡಿಸಿದ ಡಿ. ದೇವರಾಜ ಅರಸು ಸಾಮಾಜಿಕ ನ್ಯಾಯದ ಹರಿಕಾರರಾಗಿ ರಾಜ್ಯದ ಅಪ್ರತಿಮ ಮುಖ್ಯಮಂತ್ರಿಯಾಗಿ ಜನಮಾನಸದಲ್ಲಿ ನಿತ್ಯ ಸ್ಮರಣೆಗೆ ಒಳಗಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟದ ಅಧ್ಯಕ್ಷ ಸತೀಶ ಕಾಡಶೆಟ್ಟಿಹಳ್ಳಿ ಬಣ್ಣಿಸಿದರು.ಬುಧವಾರ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ 110ನೇ ಜನ್ಮದಿನದ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿ, ನಮಗೆ ರಾಜಕೀಯ ಸ್ವಾತಂತ್ರ್ಯ ಮಾತ್ರವಲ್ಲ, ದೇಶದ ಕಟ್ಟಕಡೆಯ ಪ್ರಜೆಗೆ ಸಾಂವಿಧಾನಿಕವಾದ ಸೌಲಭ್ಯಗಳು ದೊರೆಯಬೇಕು. ಈಗ ಸಾಮಾಜಿಕ ಸಮಾನತೆ ಸ್ವಲ್ಪ ಮಟ್ಟಿಗೆ ಸಾಧ್ಯವಾಗಿದ್ದರೂ ಆರ್ಥಿಕ ಸಮಾನತೆ ಸಾಧ್ಯವಾಗಿಲ್ಲ ಎಂದರು.
ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಕೆಲವೇ ಕೆಲವರ ಕೈಯಲ್ಲಿದ್ದ ಉದ್ಯೋಗ, ಅಧಿಕಾರ ಹಿಂದುಳಿದ ವರ್ಗಗಳನ್ನು ಕಡೆಗಣಿಸಿತ್ತು. ಡಿ. ದೇವರಾಜ ಅರಸು ಸಾಮಾಜಿಕ ನ್ಯಾಯದ ರಥ ಎಳೆದು ಉಳುವುವನೆ ಒಡೆಯ ಕಾನೂನನ್ನು ಕಾರ್ಯರೂಪಕ್ಕೆ ತಂದು ಜನಪರ ಯೋಜನೆ ಯೋಚನೆಗಳಿಗೆ ಅವಕಾಶ ಮಾಡಿಕೊಟ್ಟರು. ಜಾತಿ ಶ್ರೇಣಿ ವ್ಯವಸ್ಥೆ ಮಾರಕವಾದುದು. ಜೀತ ಪದ್ಧತಿಯನ್ನು ಮುಕ್ತಗೊಳಿಸಿದರು ಎಂದರು.ಗ್ಯಾರಂಟಿ ಸಮಿತಿ ತಾಲೂಕಾಧ್ಯಕ್ಷ ವಿಜಯಕುಮಾರ ದೊಡ್ಡಮನಿ ಮಾತನಾಡಿ, ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಬೇಕೆಂಬುದು ಸಂವಿಧಾನದ ಆಶಯ. ನಮಗೆ ಗುಲಾಮಿ ಸಂಸ್ಕೃತಿ ಬೇಡ. ಎಲ್ಲರೂ ಒಂದಾಗಿ ಬದುಕುವ ಕಾಲ ಸನ್ನಿಹಿತವಾಗಬೇಕು. ಬಡವರು ದೀನ ದಲಿತರ ಪರ ಕಾನೂನಿಗೆ ಶಕ್ತಿ ಕೊಟ್ಟ ದೇವರಾಜ ಅರಸು ನಾಡು ಕಂಡ ಅಪ್ರತಿಮ ವ್ಯಕ್ತಿತ್ವ ಎಂದರು.ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಾಲೂಕಾಧಿಕಾರಿ ಎಸ್. ಆನಂದ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ರಾಧಿಕಾ ದೇಶಪಾಂಡೆ, ಸದಸ್ಯೆ ಮಮತಾ ಆರೆಗೊಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗುರುನಾಥ ಗವಾಣಿಕರ, ಸುರೇಶ ನಾಗಣ್ಣನವರ, ತಾಪಂ ಕಾರ್ಯನಿರ್ವಾಹಕ ಅಧಿಕಾರ ಪರಶುರಾಮ ಪೂಜಾರ, ಪುರಸಭೆ ಮುಖ್ಯಾಧಿಕಾರಿ ವೈ.ಕೆ. ಜಗದೀಶ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ರಾಮು ಎರೆಸೀಮಿ, ಅಶೋಕ ಆರೇಗೊಪ್ಪ, ರಾಮಚಂದ್ರ ಕಲ್ಲೇರ, ಅನಿತಾ ಡಿಸೋಜಾ, ರಾಜೂ ಜೋಗಪ್ಪನವರ, ಚಂದ್ರಪ್ಪ ಜಾಲಗಾರ, ಆನಂದ ಹವಳಣ್ಣನವರ, ಎನ್.ಎಂ. ಪೂಜಾರ, ಅಶೋಕ ದಾಸರ, ಮರಿಗೌಡ ಪಾಟೀಲ ಮೊದಲಾದವರು ಪಾಲ್ಗೊಂಡಿದ್ದರು. ಜಗದೀಶ ಮಡಿವಾಳರ ಸಂಗಡಿಗರು ಭಾವಗೀತೆ, ನಾಡಗೀತೆಗಳನ್ನು ಹಾಡಿದರು.