ಹಿರೇಕೆರೂರು: ಡಿ. ದೇವರಾಜ ಅರಸುರವರ ಸಾಮಾಜಿಕ ಕಳಕಳಿ, ನ್ಯಾಯ ಪರವಾದ ಹೋರಾಟ ಪ್ರತಿಯೊಬ್ಬರಿಗೂ ಮಾದರಿ. ಈ ದೇಶದ ರಾಜಕೀಯ ಇತಿಹಾಸದಲ್ಲಿ ಹಿಂದುಳಿದವರ ಪರ ಧ್ವನಿ ಎತ್ತುವ ಮೂಲಕ ಅವರಿಗೆ ಸಮಾನತೆಯ ಹಕ್ಕು ಕಲ್ಪಿಸಲು ಶ್ರಮಿಸಿದ ಕೀರ್ತಿ ಡಿ. ದೇವರಾಜ ಅರಸು ಅವರಿಗೆ ಸಲ್ಲುತ್ತದೆ ಎಂದು ತಹಸೀಲ್ದಾರ್ ಎಂ. ರೇಣುಕಾ ಹೇಳಿದರು.
1972ರಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಅರಸು ಅವರು ರಾಜ್ಯದ ಆಡಳಿತಕ್ಕೆ ಹೊಸ ಸಾಮಾಜಿಕ ದೃಷ್ಟಿಕೋನ ನೀಡಿದರು. ಆಡಳಿತದ ಕೇಂದ್ರಬಿಂದುವಿನಲ್ಲಿ ಸಾಮಾನ್ಯ ನಾಗರಿಕನನ್ನು ಇರಿಸಿ. ದಶಕಗಳಕಾಲ ಅವಕಾಶಗಳಿಂದ ದೂರವಿದ್ದ ಸಮುದಾಯಗಳಿಗೆ ಶಿಕ್ಷಣ, ಉದ್ಯೋಗ, ಭೂಮಿ ಹಾಗೂ ಸಾಮಾಜಿಕ ಗೌರವ ದೊರಕಿಸುವ ನಿಟ್ಟಿನಲ್ಲಿ ಹಲವು ಮಹತ್ವದ ಕ್ರಮಗಳನ್ನು ಕೈಗೊಂಡರು ಎಂದರು.
ಪ್ರಾಂಶುಪಾಲ ಎಸ್.ಪಿ. ಗೌಡರ ಉಪನ್ಯಾಸ ನೀಡಿದರು. ಇದೇ ವೇಳೆ ತಾಲೂಕಿನ ಎಸ್ಎಸ್ಎಲ್ಸಿ, ಪಿಯುಸಿಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಖಾರ ನೀಡಿ ಸನ್ಮಾನಿಸಲಾಯಿತು. ಪಟ್ಟಣದ ಜಿ.ಬಿ. ಶಂಕರರಾವ್ ವೃತ್ತದಿಂದ ತಹಸೀಲ್ದಾರ್ ಕಚೇರಿವರೆಗೆ ಭಾವಚಿತ್ರ ಮೆರವಣಿಗೆ ನಡೆಯಿತು.ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಕೆ.ಎಂ. ಹರಿಯಾಳ, ಪಪಂ ಮುಖ್ಯಾಧಿಕಾರಿ ಕೋಡಿ ಭೀಮರಾಯ, ಎನ್.ಟಿ., ಸಹಾಯಕ ಕೃಷಿ ನಿರ್ದೇಶಕ ಮಾರುತಿ ಅಂಗರಗಟ್ಟಿ, ಜಿಲ್ಲಾಧ್ಯಕ್ಷ ಗಿರೀಶ, ಬಾರ್ಕಿ, ಸಿ.ಎಸ್. ಬಾಲಣನವರ, ಮಂಜುನಾಥ ಬಣಕಾರ, ತಾಲೂಕು ಮಟ್ಟದ ಇಲಾಖೆ ಅಧಿಕಾರಿಗಳು ವಿದ್ಯಾರ್ಥಿಗಳು ಹಾಜರಿದ್ದರು.