ಕನ್ನಡಪ್ರಭ ವಾರ್ತೆ ಪುತ್ತೂರು
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ನಗರಾಭಿವೃದ್ಧಿ ಹಾಗೂ ನಗರ ಯೋಜನಾ ಪ್ರಾಧಿಕಾರಗಳ ಅಧ್ಯಕ್ಷರ ಮತ್ತು ಸದಸ್ಯರ ಸಭೆ ಇತ್ತೀಚೆಗೆ ಮಂಗಳೂರು ಮಲ್ಲಿಕಟ್ಟೆಯ ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು. ಸಭೆಯಲ್ಲಿ ಅವಿಭಜಿತ ಜಿಲ್ಲೆಯ ನಗರಾಭಿವೃದ್ಧಿ ಹಾಗೂ ನಗರ ಯೋಜನಾ ಪ್ರಾಧಿಕಾರಗಳ ಒಕ್ಕೂಟ ರಚಿಸಲಾಯಿತು.ಸಭೆಯಲ್ಲಿ ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಕನ್ವರ್ಷನ್ , ಏಕ ನಿವೇಶನ ಪರವಾನಗಿ, ವಿನ್ಯಾಸ ನಕ್ಷೆ , ಕಟ್ಟಡ ನಿರ್ಮಾಣ ಪರವಾನಗಿ, ರಸ್ತೆ ಅಗಲದ ಮಾನದಂಡ ಮೊದಲಾದವುಗಳಿಗೆ ಸಂಬಂಧಿಸಿದ ಕಾನೂನು ತೊಡಕು ಹಾಗೂ ಅದರಿಂದ ಉಂಟಾಗುವ ಸಮಸ್ಯೆ ಗಳ ಬಗ್ಗೆ ವಿಸ್ತೃವಾಗಿ ಚರ್ಚಿಸಲಾಯಿತು.ತುಂಡು ಭೂಮಿ, ಟ್ರಬ್ಯುನಲ್ ಮಂಜೂರಾತಿ, ಬಫರ್, ಕುಮ್ಕಿ , ಕಾನ , ಬಾಣೆ ಹೆಚ್ಚು ಇರುವ , ಬೆಟ್ಟ ಗುಡ್ಡಗಳಿಂದ ಕೂಡಿದ ವಿಭಿನ್ನ ಭೂಲಕ್ಷಣ ಹೊಂದಿರುವ ಕರಾವಳಿ ಪ್ರದೇಶಕ್ಕೆ ಅನ್ವಯವಾಗುವ ರೀತಿಯಲ್ಲಿ ಪ್ರತ್ಯೇಕ ಕೋಸ್ಟಲ್ ಝೋನ್ ರೂಲ್ಸ್ (ಸಿ.ಝೆಡ್.ಆರ್.) ರೂಪಿಸಿ , ಪ್ರತ್ಯೇಕ ಮಾರ್ಗಸೂಚಿ ಅನುಷ್ಠಾಗೊಳಿಸಬೇಕೆಂದು ಮತ್ತು ಇತ್ತೀಚಿಗೆ ಜಾರಿ ಗೊಳಿಸಲಾದ ಗ್ರಾಮ ಪಂಚಾಯತ್ ವ್ಯಾಪ್ತಿಯ ೯/೧೧ ನಿಯಮಾವಳಿಗಳನ್ನು ಸರ ಳೀಕರ ಗೊಳಿಸಲು ಸರ್ಕಾರವನ್ನು ಒತ್ತಾಯಿಸಲು ಜಿಲ್ಲೆಯ ನಾಯಕರ ನೇತೃತ್ವದಲ್ಲಿ ನಿಯೋಗ ತೆರಳುವುದೆಂದು ತೀರ್ಮಾನಿಸಲಾಯಿತು.ಜನರ ಮತ್ತು ಪ್ರಾಧಿಕಾರಗಳ ಸಮಸ್ಯೆಗಳನ್ನು ಪರಣಾಮಕಾರಿಯಾಗಿ ಸರಕಾರದ ಮುಂದಿಡುವ ಸಲುವಾಗಿ ಮತ್ತು ನಿರಂತರ ಸಮಾಲೋಚನೆ ಮತ್ತು ಸಮಸ್ಯೆಗಳ ನಿವಾರಣೆಗಾಗಿ ಜಿಲ್ಲೆಯ ಎಲ್ಲಾ ಪ್ರಾಧಿಕಾರಗಳನ್ನು ಪ್ರತಿನಿಧಿಸುವ ಉದ್ದೇಶದಿಂದ ಉಭಯ ಜಿಲ್ಲೆಗಳ ಪ್ರಾಧಿಕಾರಗಳ ಒಕ್ಕೂಟ ರಚಿಸಲಾಯಿತು. ಒಕ್ಕೂಟದ ಅಧ್ಯಕ್ಷರಾಗಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್ , ಸಂಚಾಲಕಾರಾಗಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ್ ಹೇರೂರ್ ಹಾಗೂ ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ.ಮುಸ್ತಫ ಆಯ್ಕೆಯಾದರು. ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮಳ ರಾಮಚಂದ್ರ , ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬೇಬಿ ಕುಂದರ್ , ಮೂಡಬಿದಿರೆ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಹರ್ಷವರ್ಧನ ಪಡಿವಾಳ್ ಸೇರಿದಂತೆ ಬಂಟ್ವಾಳ, ಮೂಡಬಿದಿರೆ , ಸುಳ್ಯ , ಮಂಗಳೂರು ಮತ್ತು ಉಡುಪಿ ಪ್ರಾಧಿಕಾರಗಳ ಸದಸ್ಯರು ಭಾಗವಹಿಸಿದ್ದರು.